ಹಳಿಯಾಳ : ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡುವ ಪ್ರತಿಜ್ಞೆಯನ್ನು ಕೈಗೊಂಡಿರುವ ಇಲ್ಲಿಯ ಪುರಸಭೆಯವರು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸೇರಿದಂತೆ ಇನ್ನಿತರ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಬಗ್ಗೆ ನಿಗಾವಹಿಸಿದ್ದು ಸಂತೆ ದಿನವಾದ ರವಿವಾರ ಮತ್ತೇ ದಾಳಿ ನಡೆಸಿ 7 ಸಾವಿರ ರೂ ದಂಡ ಸೇರಿದಂತೆ 12 ಕೆಜಿಗೂ ಅಧಿಕ ಪ್ಲಾಸ್ಟಿಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಂತೆಯ ದಿನವಾದ ರವಿವಾರ ಮುಂಜಾನೆಯೇ ಕಾರ್ಯಾಚರಣೆಗೆ ಇಳಿದ ಪುರಸಭೆಯ ಸಿಬ್ಬಂದಿಯು ಸಂತೆಯು ನಡೆಯುವ ವಿ.ಆರ್.ದೇಶಪಾಂಡೆ ರಸ್ತೆ, ರಾಮದೇವ ಗಲ್ಲಿ, ಲಿಂಕ್ ರೋಡ್, ಮೋತಿಕೇರೆ ಪ್ರದೇಶ, ಮಾರುತಿ ಗಲ್ಲಿ ಹಾಗೂ ಬಸ್ಸ್ಟಾಂಡ್ ಎರಿಯಾ, ಪೋಸ್ಟ ಆಫೀಸ್ ರಸ್ತೆಗಳಲ್ಲಿ ದಾಳಿ ನಡೆಸಿ ವಿವಿಧ ಪ್ರದೇಶಗಳಿಂದ ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟಕ್ಕೆ ಆಗಮಿಸಿದ್ದ ತಾತ್ಕಾಲಿಕ ಅಂಗಡಿಗಳ ಮೇಲೆ ದಾಳಿ ನಡೆಸಿ 4 ಸಾವಿರ ರೂ ದಂಡ ಹಾಗೂ 5 ಕೆಜಿಗೂ ಅಧಿಕ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳನ್ನು ವಶಕ್ಕೆ ಪಡೆಯಲಾಯಿತು.
ಸಾಯಂಕಾಲ ಪಟ್ಟಣದ ಮುಖ್ಯರಸ್ತೆ, ಬಜಾರ ಪ್ರದೇಶದಲ್ಲಿ ಸುಮಾರು 50ಕ್ಕೂ ಅಧಿಕ ಅಂಗಡಿ ಮುಗ್ಗಟ್ಟುಗಳ ಮೇಲೆ ಹಠಾತ್ ದಾಳಿ ನಡೆಸಿದ ಪುರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಪ್ಲಾಸ್ಟಿಕ್ಗಳನ್ನು ಬಳಕೆ ಮಾಡುತ್ತಿದ್ದ ಅಂಗಡಿಗಳ ಮಾಲಿಕರಿಗೆ 7 ಸಾವಿರ ರೂ ದಂಡ ಹಾಗೂ ಉಪಯೋಗಿಸಲು ದಾಸ್ತಾನು ಮಾಡಲಾಗಿದ್ದ 12ಕ್ಕೂ ಅಧಿಕ ಕೆಜಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಗೂ ಇನ್ನಿತರ ಉತ್ಪನ್ನಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಮುಖ್ಯಾಧಿಕಾರಿ ಕೇಶವ ಚೌಗುಲೆ, ಪರಿಸರ ಇಂಜನಿಯರ್ ಬಿ.ಎಸ್.ದರ್ಶಿತಾ, ಕಂದಾಯ ಅಧಿಕಾರಿ ಅಶೋಕ ಸಾಳೆನ್ನವರ, ಸಿಬ್ಬಂದಿಗಳಾದ ಯಲ್ಲಪ್ಪಾ ತಳವಾರ, ಪ್ರಕಾಶ ಠೊಸೂರು, ರಾಜೇಶ ಕೇಣಿ, ಚಂದ್ರು ನಿಂಗನಗೌಡಾ, ಮಂಜುನಾಥ ಬೋಳಶೆಟ್ಟಿ, ಪರಿಮಳ ಮಾದಾರ ಮತ್ತೀತರರು ಹಾಜರಿದ್ದರು.
Leave a Comment