ಹಳಿಯಾಳ :- ಹಳಿಯಾಳ ಪುರಸಭೆಯ ಚುನಾಯಿತ ಬಿಜೆಪಿ ಸದಸ್ಯರು, ಬಿಜೆಪಿ ಪದಾಧಿಕಾರಿಗಳ ನಿಯೋಗದೊಂದಿಗೆ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಕ್ಷೇತ್ರದ ಅಭಿವೃದ್ದಿ ಕಾರ್ಯಗಳು, ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಆಡಳಿತದಲ್ಲಿ ಅನವಶ್ಯಕವಾಗಿ ಹಸ್ತಕ್ಷೇಪ ಮಾಡವುದಿಲ್ಲ ಆದರೇ ಸರ್ಕಾರಕ್ಕೆ ಚ್ಯುತಿ ಬರುವ ಹಾಗೆ ಆಡಳಿತ ನಡೆದರೇ ಸಹಿಸಲು ಅಸಾಧ್ಯ ಎಂದು ಹೆಗಡೆ ಹೇಳಿದರು.
ಪಟ್ಟಣದ ಮಿನಿವಿಧಾನಸೌಧಕ್ಕೆ ಬಿಜೆಪಿ ನಿಯೋಗದೊಂದಿಗೆ ಆಗಮಿಸಿ ಕ್ಷೇತ್ರದಲ್ಲಿಯ ಅಭಿವೃದ್ದಿ ಕಾರ್ಯಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಪಡೆದು ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಯ ಮನೆ ಬಾಗಿಲಿಗೆ ತಲುಪುವಂತೆ ಅಧಿಕಾರಿಗಳು ಶ್ರಮಿಸಬೇಕೆಂದರು.
ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡುವುದರ ಜೊತೆಗೆ ನೈರ್ಮಲ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಿ ಅವರಿಗೂ ಸಹ ಇನ್ನಿತರ ಪ್ರದೇಶಗಳಿಗೆ ನೀಡುವ ಪ್ರಾಧಾನ್ಯತೆಯನ್ನು ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು. ತಾಲೂಕಿನ ಶಾಲಾ ಕಾಲೇಜುಗಳಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ಗಳನ್ನು ಆದಷ್ಟು ಬೇಗನೆ ಪಿಡಿಓಗಳ ಸಹಾಯದೊಂದಿಗೆ ಸ್ವಚ್ಚಗೊಳಿಸಲು ಮುಂದಾಗಬೇಕಾಗಿದೆ ಎಂದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವೈದ್ಯರು ರೋಗಿಗಳಿಗೆ ಸ್ಪಂದಿಸದೇ ಕಾಟಾಚಾರಕ್ಕಾಗಿ ಸೇವೆ ನೀಡುತ್ತಿದ್ದು, ಇದರ ಕುರಿತು ಹಲವಾರು ದೂರುಗಳು ಕೇಳಿ ಬಂದಿದ್ದು ಇದನ್ನು ಸರಿಪಡಿಸಲು ತಾಲೂಕಾ ವೈದ್ಯಾಧಿಕಾರಿ ಡಾ. ರಮೇಶ ಕದಂ ಅವರಿಗೆ ಸೂಚನೆ ನೀಡಬೇಕೆಂದರು.
ತಾಲೂಕಿನ ಕುಗ್ರಾಮಗಳಲ್ಲಿರುವ ಶಾಲೆಗಳ ಸ್ಥಿತಿಯು ಹದೆಗೆಟ್ಟಿದ್ದು ಅಲ್ಲದೇ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ನರಳುತ್ತಿವೆ. ಬಿಇಒ ಅವರನ್ನು ಒಳಗೊಂಡ ತಂಡವು ಇಂತಹ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಿಕ್ಷಕರು ಸರಿಯಾಗಿ ಶಾಲೆಗಳಿಗೆ ಆಗಮಿಸುವಂತೆ ಸೂಕ್ತ ನಿರ್ದೇಶನ ನೀಡಬೇಕು. ಮಳೆಗಾಲದಲ್ಲಿ ಪ್ರತಿ ಗ್ರಾಮದಲ್ಲಿಯೂ ಗ್ರಾಮ ಸಭೆಗಳನ್ನು ನಡೆಸಿ ಅವುಗಳ ಮೂಲಕ ರೈತರ ಸಂಕಷ್ಟಗಳನ್ನು ಅರಿಯಲು ಮುಂದಾಗಬೇಕಾಗಿದೆ.
ಕೇಂದ್ರದ ಆಯುಷ್ಮಾನ್ ಭಾರತ್, ಉಜ್ಜಲ್, ಜಲಾಮೃತ ಸೇರಿದಂತೆ ಇನ್ನಿತರ ಯೋಜನೆಗಳನ್ನು ಅರ್ಹ ಬಡ ಜನರ ಮನೆಗಳಿಗೆ ತಲುಪುವಂತೆ ಮಾಡಲು ಅಧಿಕಾರಿಗಳು ಆಸಕ್ತಿಯನ್ನು ವಹಿಸಬೇಕಾಗಿದ್ದು ಇದನ್ನು ತಪ್ಪಿದಲ್ಲಿ ಸರ್ಕಾರದ ಗಮನ ಸೆಳೆದು ಅಂತಹ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಗುವುದು. ಮುಂದಿನ 15 ದಿನಗಳ ಅವಧಿಯಲ್ಲಿ ಪಟ್ಟಣದ ಬೀದಿ ಬೀದಿಗಳಲ್ಲಿ ನಡೆಯುತ್ತಿರುವ ಚಿಕನ್ ಅಂಗಡಿಗಳ ಸ್ಥಳಾಂತರ ಸೇರಿದಂತೆ ಉಪ ಗುತ್ತೀಗೆ ಪದ್ದತಿಯನ್ನು ಕೈ ಬಿಟ್ಟು ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕು ಇಲ್ಲವಾದರೇ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ತಾಪಂ ಇಒ ಡಾ.ಮಹೇಶ ಕುರಿಯವರ್, ಮುಖ್ಯಾಧಿಕಾರಿ ಕೇಶವ ಚೌಗುಲೆ, ಇಂಜನಿಯರ್ ಹರೀಶ್ ಗೌಡಾ. ಎಡಿಎ ನಾಗೇಶ ನಾಯ್ಕ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿಜೆಪಿಯ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಉದಯ ಹೂಲಿ, ಚಂದ್ರು ಕಮ್ಮಾರ, ರಾಜೇಶ್ವರಿ ಹಿರೇಮಠ, ಶಾಂತಾ ಹಿರೇಕರ, ಸಂಗೀತಾ ಜಾಧವ,ರೂಪಾ ಗಿರಿ ಮುಖಂಡರಾದ ಅನಿಲ್ ಮುತ್ನಾಳೆ, ಯಲ್ಲಪ್ಪಾ ಹೊನ್ನೋಜಿ, ಉಲ್ಲಾಸ ಬೀಡಿಕರ, ಅಜೋಬಾ ಕರಂಜೆಕರ ಇದ್ದರು.
Leave a Comment