
ಹಳಿಯಾಳ:- ಶತಮಾನದಲ್ಲೇ ಕಾಣದ ಭೀಕರ ಮಳೆಯಿಂದ ಉಂಟಾದ ಪ್ರವಾಹದಿಂದ ಹಳಿಯಾಳ ಕ್ಷೇತ್ರದಲ್ಲಿ ಆದ ಹಾನಿಯನ್ನು ವೀಕ್ಷಿಸಲು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ವೀಕ್ಷಣಾ ಸಮೀತಿ ಹಳಿಯಾಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿ ಮಾಹಿತಿ ಕಲೆ ಹಾಕಿದರು.
ಹಾವೇರಿಯಲ್ಲಿ ಮಳೆಯಿಂದ ಆದ ಹಾನಿಯನ್ನು ವೀಕ್ಷಿಸಿದ ಬಳಿಕ ಶನಿವಾರ ಮಾಜಿ ಸಿಎಂ ಶೆಟ್ಟರ್ ಹಾಗೂ ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರು ಹಳಿಯಾಳಕ್ಕೆ ಭೇಟಿ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕಿನ ಅಧಿಕಾರಿಗಳ ಸಭೆ ನಡೆಸಿದ ಅವರು ಹಾನಿಗೊಳಗಾದ ಪ್ರದೇಶಗಳ ಕುರಿತು ಮಾಹಿತಿ ಪಡೆದರು ಅಲ್ಲದೇ ವಸ್ತು ಸ್ಥಿತಿಯ ಬಗ್ಗೆ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.
ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಮಾಹಿತಿ ನೀಡಿ ಹಳಿಯಾಳ-ದಾಂಡೇಲಿ ಸೇರಿ ಪ್ರಕೃತಿ ವಿಕೋಪ ಪರಿಹಾರ ನೀಡಲು 52 ಲಕ್ಷರೂ. ಹಣವಿದೆ. ಪಟ್ಟಣದ ಓರ್ವ ಜಮೀಲ್ ನದಾಫ ಎನ್ನುವಾತ ಪ್ರವಾಹಕ್ಕೆ ಬಲಿಯಾಗಿದ್ದು ಆತನ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ 230ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು ಸದ್ಯ 43 ಪ್ರಕರಣಗಳಲ್ಲಿ ಪರಿಹಾರ ಚೆಕ್ ವಿತರಿಸಲಾಗಿದೆ ಎಂದರು.
ಜೋಯಿಡಾ ತಹಶೀಲ್ದಾರ್ ಮಾಹಿತಿ ನೀಡಿ ಜೋಯಿಡಾದಲ್ಲಿ 50 ಮನೆಗಳಿಗೆ ಹಾನಿಯಾಗಿದೆ. ಸೇತುವೆಗಳು ಜಲಾವೃತಗೊಂಡಿರುವ ಪ್ರದೇಶಗಳ ಜನರೊಂದಿಗೆ ದೊಣಿಗಳ ಮೂಲಕ ಸಂಪರ್ಕ ಸಾಧಿಸಲಾಗುತ್ತಿದೆ. ಜೋಯಿಡಾದಲ್ಲಿ ವಾಡಿಕೆಗಿಂತ 1213 ಮಿಮಿ ಮಳೆ ಹೆಚ್ಚಾಗಿದ್ದು ಊರು ದಟ್ಟ ಅರಣ್ಯದಿಂದ ಕೂಡಿರುವುದರಿಂದ ಮಳೆ ಪ್ರಮಾಣ ಕಡಿಮೆ ಆದ ಮೇಲೆ ಅರಣ್ಯವಾಸಿಗಳ ವಾಸಿಸುವ ಸ್ಥಳಗಳಲ್ಲಿಯ ಹಾನಿಯ ಮಾಹಿತಿ ದೊರೆಯಲಿದೆ ಎಂದರು.
ಪಿಡಬ್ಲೂಡಿ ಅಧಿಕಾರಿ ಕುಲಕರ್ಣಿ ಮಾತನಾಡಿ ಹಳಿಯಾಳದಲ್ಲಿ ಸೇತುವೆಗಳಿಗೆ ತಾಗಿ ಇರುವ ರಸ್ತೆಗಳು ಕೊಚ್ಚಿ ಹೊಗಿದ್ದು ಇವುಗಳ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದ್ದು ಕೆಲವೆಡೆ 15 ಹಾಗೂ ಕೆಲವೆಡೆ 1 ತಿಂಗಳ ಅವಧಿಯಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದರು.
ಸಭೆಯಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಅನೇಕ ದಶಕಗಳಿಂದ ಭೂಮಿ ಅತಿಕ್ರಮಣ ಮಾಡಿ ಜೀವಿಸುವವರ ಸಂಖ್ಯೆಯೇ ಹೆಚ್ಚಿದ್ದು ಅವರು ಸಹ ಪ್ರವಾಹಕ್ಕೆ ಎಲ್ಲವನ್ನು ಕಳೆದುಕೊಂಡಿದ್ದಾರೆ. ಹೊಲಗಳಲ್ಲಿ ರೈತರು ಕೊಟ್ಟಿಗೆಗಳು, ಮನೆಗಳು ಹಾಗೂ ಬೆಲೆಬಾಳುವ ಕೃಷಿ ಸಲಕರಣೆಗಳನ್ನು ಕಳೆದುಕೊಂಡಿದ್ದು ಅವರಿಗೂ ಮಾನವೀಯ ನೆಲೆಯ ಮೇಲೆ ಯೋಗ್ಯ ಪರಿಹಾರ ದೊರೆಕಿಸಿಕೊಡಬೇಕು ಎಂದು ಶೇಟ್ಟರ್ ಅವರಲ್ಲಿ ಮನವಿ ಮಾಡಿದರು.
ಹಿರಿಯ ಧುರಿಣ, ಪುರಸಭೆ ಮಾಜಿ ಸದಸ್ಯರಾದ ಶ್ರೀಕಾಂತ ಹೂಲಿ ಮಾತನಾಡಿ ಈ ಹಿಂದೆ 2 ಬಾರಿ ಧಾರವಾಡ ಅಳ್ನಾವರದ ಹೂಲಿಕೆರೆಯಿಂದ ಹಳಿಯಾಳದ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು ಈ ಬಾರಿಯು ಇದೆ ರೀತಿ ಆಗಿರುವ ಕಾರಣ ಮುಂದೆ ಮತ್ತೇ ಇದೆ ರೀತಿಯ ಅನಾಹುತಗಳು ಆಗದಂತೆ ಸರ್ಕಾರ ದಿಟ್ಟ ಕ್ರಮ ಕೈಗೊಂಡು ಮುಂದೆ ಆಗುವ ಹಾನಿಗಳನ್ನು ತಪ್ಪಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಪುರಸಭೆ ಸದಸ್ಯರು, ಬಿಜೆಪಿ ಪಕ್ಷದ 3 ತಾಲೂಕಿನ ಅಧ್ಯಕ್ಷರು ಪ್ರಮುಖರು ಇದ್ದರು.
Leave a Comment