
ಹಳಿಯಾಳ:- ಹಳಿಯಾಳದಲ್ಲಿ ನಿರಂತರ 8ದಿನಗಳ ಕಾಲ ಸುರಿದ ಭಾರಿ ಮಳೆಗೆ ಹಳ್ಳದಲ್ಲಿ ಉಂಟಾದ ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದ ದುಸಗಿ, ಮಂಗಳವಾಡ ಸೇತುವೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುರಸ್ಥಿ ಕಾರ್ಯ ಆರಂಭವಾಗಿದ್ದು ಸದ್ಯ ಹಳಿಯಾಳ-ಅಳ್ನಾವರ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಳಗಾವಿ-ಹಳಿಯಾಳ ರಾಜ್ಯ ಹೆದ್ದಾರಿಯ ದುಸಗಿ ಗ್ರಾಮದ ಬಳಿಯ ಸೇತುವೆಗೆ ತಾಗಿರುವ ರಸ್ತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ರಾಜ್ಯ ಹೆದ್ದಾರಿಯಲ್ಲಿ 4 ದಿನಗಳ ಕಾಲ ಸಂಪರ್ಕ ಕಡಿತಗೊಂಡಿತ್ತು. ಆದರೇ ಇಲ್ಲಿ ತಾತ್ಕಾಲಿಕ ಕಾಮಗಾರಿ ನಡೆಸಿ ಕಚ್ಚಾ ರಸ್ತೆ ನಿರ್ಮಿಸಲಾಗಿದ್ದು ಸದ್ಯ ಲಘು ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳಿಗೆ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನೂ ಹವಗಿಯಿಂದ ಮಂಗಳವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಸಂಪರ್ಕ ರಸ್ತೆಯು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ಈ ಗ್ರಾಮ ಪಟ್ಟಣದಿಂದ ಸಂಪರ್ಕ ಕಳೆದುಕೊಳ್ಳುವಂತಾಗಿತ್ತು. ಆದರೇ ಸೋಮವಾರದಿಂದ ಇಲ್ಲಿಯೂ ತಾತ್ಕಾಲಿಕವಾಗಿ ಮಣ್ಣು ಹಾಕಿ ಸಂಚಾರಕ್ಕೆ ಅವಕಾಶ ಕಲ್ಪಿಸುವಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು ಮಂಗಳವಾರದಿಂದ ಬೈಕ್, ರೀಕ್ಷಾ, ಕಾರುಗಳು ಸಂಚರಿಸಲು ಅವಕಾಶ ನೀಡಲಾಗುವುದೆಂದು ಕಾಮಗಾರಿ ನಡೆಸುತ್ತಿರುವವರು ಮಾಹಿತಿ ನೀಡಿದ್ದಾರೆ.
ಬಾಕಿ ಉಳಿದ ಹಾನಿಗೊಳಗಾದ ರಸ್ತೆ, ಸೇತುವೆಗಳ ಸಂಪರ್ಕ ರಸ್ತೆಯ ಕಾಮಗಾರಿಗಳನ್ನು ಕೇಲವೆ ದಿನಗಳಲ್ಲಿ ಕೈಗೊಳ್ಳಲಾಗುವುದೆಂದು ಪಿಡಬ್ಲೂಡಿ ಇಲಾಖೆ ಸ್ಪಷ್ಟಪಡಿಸಿದೆ.
Leave a Comment