
ಹಳಿಯಾಳ :- ಸಭೆಗಳಲ್ಲಿ ಚರ್ಚಿಸಿ ಠರಾವು ಮಾಡಿರುವ ಅಂಶಗಳನ್ನು ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಯವರು ಆಸಕ್ತಿ ತೊರದಿದ್ದರೇ ಹಾಗೂ ಶ್ರಮಿಸದಿದ್ದರೇ ಅವರ ವಿರುದ್ದ ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹಳಿಯಾಳ ಪುರಸಭೆಯವರು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಕರೆದ ವಿಶೇಷ ಸಭೆಯಲ್ಲಿ ಸುಮಾರು 11 ಪ್ರಮುಖ ವಿಷಯಗಳ ಕುರಿತು ಸುಧೀರ್ಘ 3 ಗಂಟೆಗಳ ಚರ್ಚೆ ನಡೆಯಿತು.
ಪ್ರಮುಖವಾಗಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದ್ದು ಕಬ್ಬು ಸಾಗಿಸುವ ವಾಹನಗಳ ಪಾರ್ಕಿಂಗ್ಯ ವ್ಯವಸ್ಥೆಯ ಕುರಿತು ಚರ್ಚೆ ನಡೆದು ಕಾರ್ಖಾನೆಯವರು ಪಾರ್ಕಿಂಗ್ ವ್ಯವಸ್ಥೆ ಇರುವಷ್ಟೇ ವಾಹನಗಳಿಗೆ ಪಾಸ್ ಕೊಡಬೇಕು. ಹೆಚ್ಚುವರಿ ವಾಹನಗಳು ಸಾರ್ವಜನೀಕ ಸ್ಥಳಗಳಲ್ಲಿ ನಿಂತು ಕಿರಿ ಕಿರಿ ಮಾಡಿದರೇ ಆ ವಾಹನಗಳಿಗೆ ದಂಡ ವಿಧಿಸಬೇಕು ಇದನ್ನು ಪೋಲಿಸ್ ಹಾಗೂ ಆರ್ಟಿಓ ಇಲಾಖೆಯವರು ಜಂಟಿಯಾಗಿ ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ್ ಸೂಚಿಸಿದರು.

ಇನ್ನೂ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ಮಾತನಾಡಿ ಶಾಲಾ ಅವಧಿಯಲ್ಲಿ ಕಬ್ಬು ಸಾಗಿಸುವ ವಾಹನಗಳಿಗೆ ಬಿಡುವು ನೀಡಬೇಕು. ಡಬಲ್ ಟ್ರಾಲಿ ವಾಹನಗಳಿಗೆ ಹಿಂಬದಿ ದೊಡ್ಡದಾಗಿ ರೇಡಿಯಂ ಫಲಕ ಅವಳವಡಿಸಬೇಕು ಎಂದು ಸಲಹೆ ನೀಡಿದರು.
ಪಟ್ಟಣದ ಮಧ್ಯಭಾಗದಲ್ಲಿರುವ ಅನಧಿಕೃತ ಕಸಾಯಿಖಾನೆ ತೆರವುಗೊಳಿಸುವ ಕುರಿತು ಸುಧೀರ್ಘ ಚರ್ಚೆ ನಡೆಯಿತು. ಹೊಸದಾಗಿ ಕಸಾಯಿಖಾನೆ ನಿರ್ಮಾಣ ಮಾಡುವ ಕುರಿತು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಹೇಳಿದರು.
ಅಂಗಡಿಗಳಿಗೆ ಕನ್ನಡದಲ್ಲಿ ನಾಮಫಲಕ ಅಳವಡಿಸುವುದು, ಆಟೋ ಸ್ಟ್ಯಾಂಡ್ ಟಾಟಾ ಎಸ್ ಮತ್ತು ನಾಲ್ಕೂ ಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ನಿಷೇಧಿತ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಷೇಧ, ರವಿವಾರ ಸಂತೆ ವಿಸ್ತರಣೆ ಮಾಡುವುದು, ಅರಣ್ಯ ಇಲಾಖೆಯ ಉದ್ಯಾನವನಗಳನ್ನು ಸ್ವಚ್ಚಗೊಳಿಸುವುದು, ಲೋಕೊಪಯೋಗಿ ಇಲಾಖೆಯ ರಸ್ತೆಗಳನ್ನು ಸ್ವಚ್ಚಗೊಳಿಸುವುದು, ಹೆಸ್ಕಾಂ ಇಲಾಖೆಯ ಹಳೆಯ ಕಂಬಗಳನ್ನು ತೆರವುಗೊಳಿಸುವ ಹಾಗೂ ಪಟ್ಟಣದಲ್ಲಿ ಸಿಸಿ ಕ್ಯಾಮೆರಾಗಳ ನಿರ್ವಹಣೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆದು ಹಲವು ತೀರ್ಮಾನಗಳಿಗೆ ಬರಲಾಯಿತು.
ಜೀಜಾಮಾತಾ ಮಹಿಳಾ ಸಂಘಟನೆಯ ಭಾರತಿ ಬೀರ್ಜೆ ಅವರು ಕೇವಲ ಸಭೆಗಳು ನಡೆದರೇ ಸಾಲದು ಸಭೆಯಲ್ಲಿ ಚರ್ಚಿಸಿದ ವಿಷಯಗಳು ಅನುಷ್ಠಾನಕ್ಕೆ ಬರಬೇಕೆಂದು ಕೇಳಿದಾಗ ಪ್ರತಿಕ್ರಿಯಿಸಿದ ತಹಶೀಲ್ದಾರ್ ಗುಳಗುಳೆ ಅವರು ಈ ಬಾರಿಯ ಸಭೆಯಲ್ಲಿ ಚರ್ಚಿಸಿದ ಪ್ರಮುಖ ವಿಷಯಗಳೆಲ್ಲವು ಅನುಷ್ಠಾನಗೊಳಿಸಲು ಇದೆ ತಿಂಗಳ ದಿ.25 ರವರೆಗೆ ಸಮಯಾವಕಾಶ ನೀಡಿದ್ದು ಅಷ್ಟರಲ್ಲಿ ಸಂಬಂಧಪಟ್ಟ ಇಲಾಖೆಯವರು ಅವರು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಇಲ್ಲದಿದ್ದರೇ ಅವರಿಗೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಹೆಸ್ಕಾಂ ಅಧಿಕಾರಿ ರವೀಂದ್ರ ಮೆಟಗುಡ್ಡ, ಬಿಇಓ ಸಮೀರಮುಲ್ಲಾ, ಪಶು ವೈದ್ಯಾಧಿಕಾರಿ ಡಾ.ನದಾಫ, ಪುರಸಭೆ ಸದಸ್ಯರಾದ ಉದಯ ಹೂಲಿ, ಶಾಂತಾ ಹಿರೇಕರ, ಸಂಗೀತಾ ಜಾಧವ, ಸುವರ್ಣಾ ಮಾದರ ಇತರ ಸದಸ್ಯರು, ಜೀಜಾಮಾತಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಮಂಗಲಾ ಕಶೀಲಕರ, ಕರವೇ ಸಂಘಟನೆಯ ಬಸವರಾಜ ಬೇಂಡಿಗೇರಿಮಠ, ಪ್ರಮುಖರಾದ ಕಮಲ ಸಿಕ್ವೇರಾ, ಜಿಡಿ ಗಂಗಾಧರ, ಆಟೋ ರೀಕ್ಷಾ ಸಂಘದವರು, ಪತ್ರಕರ್ತರು ಮೊದಲಾದವರು ಇದ್ದರು.

Leave a Comment