ಹಳಿಯಾಳ:- ಸಾಧಕರ ಸಾಧನೆಗೆ ಸನ್ಮಾನಗಳು ಪೂರಕವಾಗಿವೆ, ಅವರನ್ನು ಗುರ್ತಿಸಿ ಸನ್ಮಾನಿಸುವುದರಿಂದ ಅವರಲ್ಲಿ ಇನ್ನು ಹೆಚ್ಚು ಸಾಧನೆ ಮಾಡುವ ಹುಮ್ಮಸು ಬೆಳೆಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹಮ್ಮದ ಮುಲ್ಲಾ ಅಭಿಪ್ರಾಯಪಟ್ಟರು.
ಪಟ್ಟಣದ ದುರ್ಗಾದೇವಿ ಸಭಾ ಭವನದಲ್ಲಿ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿ, ಹೊಂಗಿರಣ ಮತ್ತು ಸ್ಥಳೀಯ ಸಂಘ ಸಂಸ್ಥೆಯ ಸಹಯೋಗದಲ್ಲಿ ನಡೆದ ಯಕ್ಷಗಾನ, ಗೊಂಬೆಯಾಟ ಉತ್ಸವ, ಯಕ್ಷ ಸಂಭ್ರಮ ಮತ್ತು ವಿಚಾರ ಸಂಕಿರಣ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.
ಯಕ್ಷಗಾನ ಕಲಾವಿದೆ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ, ಹೊಂಗಿರಣ ಸಂಸ್ಥೆಯ ಅಧ್ಯಕ್ಷೆ ಸುಜಾತಾ ಬಿರಾದಾರ, ಸಾಧಕ ಜಯ ಕರ್ನಾಟಕ ಸಂಘದ ಅಧ್ಯಕ್ಷ ಶಿರಾಜ ಮುನವಳ್ಳಿ, ಬೆಂಗಳೂರಿನ ಯಕ್ಷಗಾನ ಕಲಾವಿದೆ ಮಯೂರಿ ಉಪಾಧ್ಯ, ಸುಮಂಗಲಾ ದೇಸಾಯಿ, ಮೂಡಲಪಾಯ ಯಕ್ಷಗಾನ ಕಲಾವಿದ ಬಳ್ಳಾರಿಯ ಜಿಲ್ಲೆಯ ಹರಪನಳ್ಳಿಯ ಪರಶುರಾಮ, ಅಂಕೋಲಾದ ಯಕ್ಷಗಾನ ವಸ್ತ್ರವಿನ್ಯಾಸಕ ಇಂದ್ರಕುಮಾರ ಅಜ್ಜಿಮನೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಳಿಯಾಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವಿಣಕುಮಾರ ಸಾಲಿ, ತಾಲುಕಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಠ್ಠಲ ಬೋರೆಕರ, ಬಯಲಾಟ ಅಕಾಡೆಮಿ ಸದಸ್ಯ ಸಿದ್ದಪ್ಪ ಬಿರಾದಾರ, ಅಜಿತ ನಾಗರಕಟ್ಟೆ ಮತ್ತು ಭಾರತಿ ನಲವಡೆ ಇದ್ದರು.
ಕಾರ್ಯಮದ ನಂತರ ದಾಂಡೇಲಿಯ ಸುಜಾತಾ ಮಹಿಳಾ ಯಕ್ಷಗಾನ ಮಂಡಳಿಯಿಂದ ಸುಧನ್ವಾರ್ಜುನ ಪ್ರಸಂಗವನ್ನು ಮತ್ತು ಬಳ್ಳಾರಿ ಜಿಲ್ಲೆಯ ಹರಪನಳ್ಳಿಯ ಸಂಪ್ರದಾಯ ಟ್ರಸ್ಟ್ನವರಿಂದ ಮೂಟಲಪಾಯ ಯಕ್ಷಗಾನದಲ್ಲಿ ಏಕಲವ್ಯನ ಪ್ರಸಂಗವನ್ನು ಪ್ರಸ್ತುತ ಪಡಿಸಲಾಯಿತು.
Leave a Comment