ಹಳಿಯಾಳ:- ಕೊರೊನಾ ಮಹಾಮಾರಿ ಕುರಿತು ಜನರಲ್ಲಿ ಉಂಟಾಗಿರುವ ತಪ್ಪು ಕಲ್ಪನೆಗಳನ್ನು ಮೊದಲು ಹೊಗಲಾಡಿಸಬೇಕಿದೆ, ಅಂದಾಗ ಮಾತ್ರ ಜನರು ಇಲಾಖೆಯವರೊಂದಿಗೆ ಸಹಕರಿಸುತ್ತಾರೆ, ಸರಿಯಾದ ಮಾಹಿತಿ ನೀಡುವ ಮೂಲಕ ಈಗ ಕೈಗೊಂಡಿರುವ ಸಮೀಕ್ಷಾ ಕಾರ್ಯ ಯಶಸ್ವಿಯಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಅಭಿಪ್ರಾಯಪಟ್ಟರು.
ಪಟ್ಟಣದ ಅಂಚಿನ ಹವಗಿ ಗ್ರಾಮದಲ್ಲಿರುವ ಡಿಗ್ರಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಸರ್ಕಾರದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಹಳಿಯಾಳ-ದಾಂಡೇಲಿ ತಾಲೂಕಿನ ಎಲ್ಲ ಗ್ರಾಪಂ ಪಿಡಿಓಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್ಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ ನೀರಿಕ್ಷಕರು, ಗ್ರಾಮ ಲೆಕ್ಕಿಗರು ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಡಿಸಿ ಮಾತನಾಡಿದರು.
ನಮ್ಮಲ್ಲಿ ಸೊಂಕು ಸಮುದಾಯದ ಮಟ್ಟದಲ್ಲಿ ಹರಡಿಲ್ಲ, ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶೂನ್ಯ ಪ್ರಮಾಣದಲ್ಲಿದ್ದರೇ ಗುಣಮುಖರಾಗುತ್ತಿರುವ ಪ್ರಮಾಣ 100% ಇರುವುದು ಸಂತೋಷದ ಸಂಗತಿಯಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ಸರ್ವೆ ಕಾರ್ಯಕ್ಕೆ ಮನೆಮನೆಗೆ ಬರುತ್ತಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕೆಂದು ಕರೆ ನೀಡಿದರು.
ಲಾಕ್ಡೌನ್ ಎಲ್ಲದಕ್ಕೂ ಪರಿಹಾರವಲ್ಲ, ಲಾಕ್ಡೌನ್ ಕೊರೊನಾ ಕುರಿತು ಜಾಗೃತಿ ಮೂಡಿಸಿದೆ. ವೈರಸ್ಗೆ ಲಸಿಕೆ ಸಿಗುವವರೆಗೂ ಹೀಗೆಯೇ ಜೀವನ ನಿರ್ವಹಣೆ ಮಾಡಬೇಕಿದೆ. ವಾಸ್ತವ ಹೇಳಿ ಬದುಕಬೇಕಿದೆ. ಸುಳ್ಳು ಹೇಳಿ, ತಪ್ಪು ಕಲ್ಪನೆ ಮೂಡಿಸುವುದು ಬೇಡ. ಯಾರಾದರೂ ತಪ್ಪು ಕಲ್ಪನೆಗಳನ್ನು ಹರಡುತ್ತಿದ್ದರೇ ಅಂತಹವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಸದ್ಯ 2ನೇ ಹಂತದ ಕೊರೊನಾ ಸವಾಲಿನ ಹಂತವಾಗಿರುವ ಕಾರಣ ಇದರಲ್ಲಿ ಅಧಿಕಾರಿಗಳ ಪಾತ್ರಕ್ಕಿಂತ ಜನಸಮುದಾಯದ ಪಾತ್ರವೇ ಮುಖ್ಯವಾಗಿದೆ. ಸಮುದಾಯ ಮತ್ತು ಸರ್ಕಾರ ಇವೆರಡು ಸೇರಿದರೇ ಮಾತ್ರ ಕೊರೊನಾದ ವಿರುದ್ದ ನಾವು ಜಯ ಸಾಧಿಸಬಹುದಾಗಿದ್ದು ಜನ ಸಮೀಕ್ಷೆಗೆ ಸಹಕರಿಸಬೇಕು. ವಸ್ತು ನಿಷ್ಠ ಸಮೀಕ್ಷೆಗೆ ಅವಕಾಶ ನಿಡಬೇಕೆಂದು ವಿನಂತಿಸಿದರು.
ಅಧಿಕಾರಿಗಳು ಕಚೇರಿ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡಿ ಹೊರತು ಕೊರೊನಾಕ್ಕಲ್ಲ ಎಂದು ಹೇಳಿದ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿ ಜನಪ್ರತಿನಿಧಿಗಳು ಸಮುದಾಯದಲ್ಲಿ ಉಂಟಾಗಿರುವ ತಪ್ಪು ಕಲ್ಪನೆಗಳನ್ನು ಹೊಗಲಾಡಿಸುವಲ್ಲಿ ಕೆಲಸ ಮಾಡಬೇಕು. ಅಲ್ಲದೇ ಹೊಮ್ ಕ್ವಾರಂಟೈನ್ ಸರಿಯಾಗಿ ಪಾಲನೆ ಆಗದೆ ಇದ್ದರೇ ಸಮುದಾಯಕ್ಕೆ ಸೊಂಕು ಹರಡುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆಯ ಸಂದೇಶವನ್ನು ನೀಡಿದರು.
ಪ್ರತಿಯೊಬ್ಬ ಸಾರ್ವಜನೀಕರು ಹೊರಗಿನಿಂದ ಬರುವವರ ಬಗ್ಗೆ ಇಲಾಖೆಗಳಿಗೆ ಮಾಹಿತಿ ನೀಡಿ. ರೋಗ ಲಕ್ಷಣ ಇರುವವರು ಸರ್ಕಾರಿ ಆಸ್ಪತ್ರೆಗೆ ಭೆಟಿ ನೀಡಿ ಎಂದು ಮನವಿ ಮಾಡಿದ ಅವರು ಕೊರೊನಾ ವಾರಿಯರ್ಸ್ಗಳು ಲಾಕ್ಡೌನ್ ಸಂದರ್ಭದಲ್ಲಿ ಜನರಿಂದ ಬಂದ ಸಾಕಷ್ಟು ಅಸಹಕಾರ, ನಿಂದನೆಗಳನ್ನು ಸಹಿಸಿಕೊಂಡು ಸಹಿತ ನಿಸ್ವಾರ್ಥ ಮನೋಭಾವನೆಯಿಂದ ಅಭೂತಪೂರ್ವ ಸೇವೆ ಸಲ್ಲಿಸಿದ್ದಕ್ಕೆ ಮತ್ತು ಸೇವೆ ಸಲ್ಲಿಸುತ್ತಿರುವುದಕ್ಕೆ ಜಿಲ್ಲಾಡಳಿತದಿಂದ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ಗಳಾದ ವಿದ್ಯಾಧರ ಗುಳಗುಳೆ, ಶೈಲೆಷ ಪರಮಾನಂದ ಎಲ್ಲ ಇಲಾಖೆ ಅಧಿಕಾರಿಗಳು ಸೇರಿದಂತೆ ಸುಮಾರು 500 ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು.
Leave a Comment