ಹಳಿಯಾಳ:- ಸಾರ್ವಜನಿಕರಲ್ಲಿ ಕೊರೊನಾ ರೋಗದ ಕುರಿತಾಗಿ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಕೆಲವು ವಿಷಯಗಳ ಬಗ್ಗೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಸ್ಪಷ್ಟಿಕರಣವನ್ನು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವ ಅವರು ಸಾರ್ವಜನಿಕರಲ್ಲಿ ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ಸುದ್ದಿ ಮತ್ತು ವದಂತಿಗಳು ಹರಡುತ್ತಿರುವದರಿಂದ ಕೋವಿಡ್-19ಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಾದ 1.ದಿನಂ ಪ್ರತಿ ಸರ್ವೆ ಕಾರ್ಯ 2.ಹೋಮ್ ಕ್ವಾರಂಟೈನನಲ್ಲಿರುವವರನ್ನು ಸೆಲ್ಪೀ ತೆಗೆಯುವುದು., 3-ಕೋವಿಡ್-19 ಪಾಸಿಟಿವ್ ಪ್ರಕರಣಗಳಲ್ಲಿ ಅಂಬ್ಯುಲನ್ಸ್ ಮೂಲಕ ಕೋವಿಡ್ ಕೇರ ಸೆಂಟರಗಳಿಗೆ ಸಾಗಿಸುವಲ್ಲಿ ಬಹಳಷ್ಟು ಅಸಹಕಾರ ಉಂಟಾಗುತ್ತಿರುವ ಮೇರೆಗೆ ಸಾರ್ವಜನಿಕರಲ್ಲಿ ಈ ರೋಗದ ಕುರಿತಾಗಿ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಈ ಸ್ಪಷ್ಟಿಕರಣ ನೀಡಲಾಗುತ್ತಿದೆ ಎಂದಿದ್ದಾರೆ.
ಪ್ರತಿಯೊಬ್ಬ ಕೋವಿಡ್-19 ಪಾಸಿಟಿವ್ ರೋಗಿಯ ಸ್ವ್ಯಾಬ್ ತಪಾಸಣೆಯ ವರದಿಯು ತಾಲೂಕಾ ಆಸ್ಪತ್ರೆಯಲ್ಲಿ ಲಭ್ಯವಿದ್ದು ಅದನ್ನು ರೋಗಿಗಳು ಅವರ ಸಂಬಂಧಿಕರು ಪರಿಶೀಲಿಸಿಕೊಳ್ಳಬಹುದಾಗಿದೆ.
ಕೋವಿಡ್-19 ವೈರಸ್ಸನ್ನು ಹೊಂದಿರುವ ಬಗ್ಗೆ ಸ್ವ್ಯಾಬ್ ತಪಾಸಣಾ ವರದಿ ಬಂದ ತಕ್ಷಣ ಸಂಬಂಧಿಸಿದ ಕುಟುಂಬದವರಿಗೆ ಮಾಹಿತಿ ನೀಡಲಾಗುತ್ತದೆ. ಹಾಗೂ ಅಂಬ್ಯುಲನ್ಸ್ ಮೂಲಕ ಕೋವಿಡ್ ಕೇರ್ ಸೆಂಟರಗೆ ಕಳಿಸಲಾಗುತ್ತದೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿದ್ದು ಆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದು ಮತ್ತು ಅವರನ್ನು ಬೇರೆ ಅರ್ಥದಲ್ಲಿ ನೋಡುವಂತಹ ಮನೋಭಾವನೆಗಳು ಬದಲಾಗಬೇಕು. ಕೋವಿಡ್-19 ಇದು ಇತರೆ ರೋಗಗಳಂತೆ ಒಂದು ರೋಗವಾಗಿದ್ದು ಜನರಲ್ಲಿ ಈ ಕುರಿತು ಜಾಗೃತಿಯುಂಟಾಗಬೇಕು.
ಗ್ರಾಮಗಳಲ್ಲಿ ಕೋವಿಡ್-19 ಪಾಸಿಟಿವ್ ರೋಗಿಗಳ ಬಗ್ಗೆ ವರದಿ ಬಂದಾಗ ಹಾಗೂ ಅವರನ್ನು ಕೊಂಡೊಯ್ಯಲು ಆಸ್ಪತ್ರೆಯ ಅಂಬ್ಯುಲೆನ್ಸ್ ಬಂದಾಗ ಮತ್ತು ಆಶಾ/ ಅಂಗನವಾಡಿ ಕಾರ್ಯಕರ್ತೆಯರು ಸರ್ವೆಗೆ ಬಂದಾಗ ಹಾಗೂ ಹೋಮ್ ಕ್ವಾರಂಟೈನನಲ್ಲಿರುವವರ ಛಾಯಾಚಿತ್ರ ತೆಗೆಯಲು ಬಂದಾಗ ಜನರೆಲ್ಲ ಗುಂಪು ಸೇರಿ ಯಾವುದೇ ತೊಂದರೆಯುಂಟು ಮಾಡದೆ ಈ ಪ್ರಕ್ರಿಯೆಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು ಸಾರ್ವಜನಿಕರು ಸಹಕರಿಸಬೇಕು.
ಯಾವುದೇ ವ್ಯಕ್ತಿಯು ಕೋವಿಡ್-19 ಪಾಸಿಟಿವ್ ರೋಗಿ ಅಂತಾ ತಪಾಸಣೆಯಿಂದ ವರದಿಯಾದ ತಕ್ಷಣ ಅವರು ತಾನು ಹಿಂದಿನ 14 ದಿನಗಳ ಅವಧಿಯಲ್ಲಿ ಯಾರ ಯಾರೊಂದಿಗೆ ಸಂಪರ್ಕಕ್ಕೆ ಬಂದಿರುತ್ತೇನೆ ಹಾಗೂ ಎಷ್ಟು ಅವಧಿಗಳವರೆಗೆ ಅವರೊಂದಿಗೆ ಸಂಪರ್ಕಕ್ಕೆ ಬಂದಿರುತ್ತೇನೆ ಎಂಬ ಮಾಹಿತಿಯನ್ನು ಸತ್ಯ ಸಂಗತಿಗಳು ತಿಳಿಯಪಡಿಸಿ ಕಾಂಟ್ಯಾಕ್ಟ ಟ್ರೇಸಿಂಗನಲ್ಲಿ ಸರಿಯಾಗಿ ಸಹಕರಿಸಬೇಕು.
ಸರಕಾರದ ಆದೇಶದಂತೆ ಪ್ರತಿಯೊಂದು ಗ್ರಾಮದಲ್ಲಿಯೂ ಪಕ್ಷಾತೀತವಾದ ಕೋವಿಡ್-19 ಕಾರ್ಯಪಡೆಯನ್ನು ರಚಿಸಲಾಗಿದ್ದು ಈ ತಂಡದವರು ಕೋವಿಡ್-19ನ ಎಲ್ಲ ವಿಧವಾದ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದು ಅವರಿಗೆ ಸರಕಾರದಿಂದ ಯಾವುದೇ ರೀತಿಯ ಧನ ಸಹಾಯ/ಕಮೀಶನ/ಇನ್ಸೆಂಟಿವ್ ಇರುವುದಿಲ್ಲ ಕೋವಿಡ್-19 ರೋಗ ತಡೆಗಟ್ಟುವುದು ಸರಕಾರ ನಿರ್ದೇಶಿಸಿದ ನಿಯಂತ್ರಣ ಕೈಗೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಇವರಿಗೆ ಸಹಕಾರ ನೀಡಬೇಕು ಎಂದು ತಾಲೂಕಾಡಳಿತದ ಪ್ರಮುಖರಾಗಿರುವ ತಹಶೀಲ್ದಾರ್ ವಿದ್ಯಾದರ ಗುಳಗುಳೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
Leave a Comment