ಭಟ್ಕಳ: ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀ ಪೀಠದ ಹಿಂದುಗಡೆಯಲ್ಲಿ ಪೆಟ್ಟಿಗೆಯಲ್ಲಿಟ್ಟಿದ್ದ ಸುಮಾರು 35 ರಿಂದ 40 ಲಕ್ಷ ಬೆಲೆಬಾಳುವ ಚಿನ್ನದ ಆಭರಣಗಳು ಕಾಣೆಯಾಗಿರುವ ಕುರಿತು ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷ ಹೇಮಂತ ದುರ್ಗಪ್ಪ ಮೊಗೇರ ಅವರು ನೀಡಿದ ದೂರಿನಲ್ಲಿ ದೇವಸ್ಥಾನದ ಆಡಳಿತವನ್ನು 15/09/2019ರಂದು ನಾವು ವಹಿಸಿಕೊಳ್ಳುವಾಗ ಚಿನ್ನಾಭರಣಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿದ್ದು ಅವುಗಳನ್ನು ಮತ್ತೆ ನೋಡಿರಲಿಲ್ಲ. ಆದರೆ ದಿನಾಂಕ 17/10/2020ರಂದು ನವರಾತ್ರಿಯ ಪ್ರಯುಕ್ತ ದೇವಿಗೆ ಅಲಂಕಾರ ಮಾಡಲು ಚಿನ್ನಾಭರಣಗಳನ್ನು ತೆಗೆಯಲು ಪೆಟ್ಟಿಗೆಯನ್ನು ತೆರೆದಾಗ 670 ಗ್ರಾಂ ಚಿನ್ನದ ಆಭರಣ, 225 ಗ್ರಾಂ ಬೆಳ್ಳಿಯ ಆಭರಣ ಸೇರಿ ಒಟ್ಟೂ 30 ಲಕ್ಷ 25 ಸಾವಿರ ರೂಪಾಯಿಗಳಷ್ಟು ಬೆಲೆಯುಳ್ಳ ಆಭರಣ ಕಳುವಾಗಿದೆ. ಯಾರೋ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ತನಿಖೆ ನಡೆಸಿ ಚಿನ್ನಾಭರಣಗಳನ್ನು ಪತ್ತೆ ಮಾಡಿ ಕೊಡುವಂತೆ ದೂರಿನಲ್ಲಿ ಕೋರಿದ್ದಾರೆ.
ರವಿವಾರ ದೇವಸ್ಥಾನಕ್ಕೆ ಸಿಪಿಐ ದಿವಾಕರ, ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಧಾನ ಅರ್ಚಕರು ಮತ್ತು ಆಡಳಿತ ಕಮಿಟಿಯ ಪದಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
Leave a Comment