ಭಟ್ಕಳ: ಸ್ಕೂಬಾ ಡೈವಿಂಗ್ ಅಂದಾಕ್ಷಣ ಮೊದಲು ನೆನಪಾಗೋದು ಕರಾವಳಿ ಜಿಲ್ಲೆ ಉತ್ತರಕನ್ನಡ. ರಾಜ್ಯದಲ್ಲೇ ಸ್ಕೂಬಾ ಡೈವಿಂಗ್ ಮಾಡಲು ಅನುಕೂಲಕರ ವಾತಾವರಣ ಇರೋದು ಅಂದ್ರೆ ಅದು ಮುರುಡೇಶ್ವರದ ನೇತ್ರಾಣಿಯಲ್ಲಿ. ಕೊರೊನಾ ಹಿನ್ನಲೆಯಲ್ಲಿ ಬಂದ್ ಆಗಿದ್ದ ಸ್ಕೂಬಾ ಡೈವಿಂಗ್ಗೆ ಇದೀಗ ಮತ್ತೆ ಚಾಲನೆ ದೊರೆತಿದ್ದು ಪ್ರವಾಸಿಗರೂ ಸಹ ಸ್ಕೂಬಾ ಮಾಡಲು ಮುಗಿಬೀಳುತ್ತಿದ್ದಾರೆ.
ಹೌದು, ಒಂದೆಡೆ ವಿಶಾಲವಾದ ಕಡಲತೀರ, ಇನ್ನೊಂದೆಡೆ ಜಲಪಾತ, ಬೆಟ್ಟಗುಡ್ಡಗಳ ಸಾಲನ್ನ ಹೊಂದಿರುವ ಉತ್ತರಕನ್ನಡ ಜಿಲ್ಲೆಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಬಾರಿ ಕೊರೊನಾ ಕಾರಣದಿಂದಾಗಿ ಪ್ರವಾಸೋದ್ಯಮ ಸಾಕಷ್ಟು ನಷ್ಟ ಅನುಭವಿಸುವಂತಾಗಿದ್ದು ಅನ್ಲಾಕ್ 5.0 ಜಾರಿ ಬಳಿಕ ಬಂದ್ ಆಗಿದ್ದ ಕೆಲ ಪ್ರವಾಸಿ ತಾಣಗಳು ಮತ್ತೆ ತೆರೆದುಕೊಂಡಿದ್ದವು. ಇದೀಗ ಇದಕ್ಕೆ ಸ್ಕೂಬಾ ಡೈವಿಂಗ್ ಸೇರ್ಪಡೆಯಾಗಿದ್ದು, ಸಮುದ್ರದಾಳದ ವಿಸ್ಮಯ ವೀಕ್ಷಿಸುವ ಪ್ರವಾಸಿಗರಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ.ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಿಂದ ಸುಮಾರು 14 ಕಿಲೋ ಮೀಟರ್ ದೂರದಲ್ಲಿರುವ ನೇತ್ರಾಣಿ ನಡುಗಡ್ಡೆ ಸಮೀಪ ಸ್ಕೂಬಾ ಡೈವಿಂಗ್ ಮಾಡಲಾಗುತ್ತದೆ. ಅಂಡಮಾನ್ ನಿಕೋಬಾರ್ ಹೊರತುಪಡಿಸಿದ್ರೆ ದೇಶದಲ್ಲೇ ಸ್ಕೂಬಾ ಡೈವಿಂಗ್ ನಡೆಸಲು ಸೂಕ್ತ ಪರಿಸರವನ್ನು ಹೊಂದಿರುವ ಏಕೈಕ ತಾಣವಾಗಿರೋದ್ರಿಂದ ರಾಜ್ಯ, ದೇಶ, ವಿದೇಶಗಳ ಪ್ರವಾಸಿಗರೂ ಸಹ ಸ್ಕೂಬಾ ಡೈವಿಂಗ್ ಮಾಡೋದಕ್ಕೆ ಅಂತಾನೇ ಮುರುಡೇಶ್ವರಕ್ಕೆ ಭೇಟಿ ನೀಡುತ್ತಾರೆ. ಆದ್ರೆ ಕೊರೊನಾ ಕಾರಣದಿಂದ ಬಂದ್ ಆಗಿದ್ದ ಸ್ಕೂಬಾ ಡೈವಿಂಗ್ ಇದೀಗ ಮತ್ತೆ ಪ್ರಾರಂಭಗೊಂಡಿದ್ದು ಕೊರೊನಾ ಆತಂಕದ ನಡುವೆಯೂ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಇನ್ನು ಕೊರೊನಾ ಹಿನ್ನಲೆಯಲ್ಲಿ ಮೊದಲ ಹಂತದಲ್ಲಿ ಜಿಲ್ಲಾಡಳಿತ ಕಡಲತೀರಗಳು ಹಾಗೂ ದೇವಸ್ಥಾನಗಳಿಗೆ ಮಾತ್ರ ಪ್ರವೇಶಿಲು ಅವಕಾಶವನ್ನು ನೀಡಿತ್ತು. ಇದೀಗ ಜಿಲ್ಲೆಯ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರ ಜೊತೆಗೆ ಪ್ರವಾಸಿಗರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಸ್ಕೂಬಾ ಡೈವಿಂಗ್ ನಡೆಸಲೂ ಸಹ ಅನುಮತಿ ನೀಡಿದೆ. ಇನ್ನು ಸ್ಕೂಬಾ ಡೈವಿಂಗ್ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಮುಗಿಬೀಳುತ್ತಿದ್ದು ಕೊರೊನಾ ಮಾರ್ಗಸೂಚಿಯಂತೆ ಸ್ಕೂಬಾಕ್ಕೆ ಬಳಸುವ ಉಪಕರಣಗಳನ್ನು ಸ್ಯಾನಿಟೈಸ್ ಮಾಡುವಿಕೆಯಂತ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಪ್ರವಾಸಕ್ಕೆ ಬರಲು ಯಾವುದೇ ಆತಂಕ ಇಲ್ಲ ಅಂತಾ ಸ್ಕೂಬಾ ಆಯೋಜಕರು ತಿಳಿಸಿದ್ದಾರೆ.
ಒಟ್ಟಾರೇ ಕೊರೊನಾ ಸಂಕಷ್ಟದ ನಡುವೆ ಪ್ರವಾಸೋದ್ಯಮ ತೆರೆದುಕೊಳ್ಳುತ್ತಿದ್ದು ಧಾರ್ಮಿಕವಾಗಿಯೂ ಸಾಕಷ್ಟು ಪ್ರಸಿದ್ಧಿ ಹೊಂದಿರುವ ಮುರುಡೇಶ್ವರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಹೀಗಾಗಿ ಸ್ಕೂಬಾ ಜೊತೆಗೆ ಉಳಿದ ಜಲಸಾಹಸ ಕ್ರೀಡೆಗಳೂ ಸಹ ಚೇತರಿಕೆ ಕಾಣುವಂತಾಗಿದ್ದು ಆಯೋಜಕರೂ ಫುಲ್ ಖುಷ್ ಆಗಿದ್ದಾರೆ.
Leave a Comment