ಕಾರವಾರ:
ರೈತರ ಪಾಲಿನ ದೊಡ್ಡ ಹಬ್ಬ ಅಂದ್ರೆ ಅದು ದೀಪಾವಳಿ. ಬಲೀಂದ್ರನನ್ನು ತಂದು ಪೂಜೆ ಸಲ್ಲಿಸುವುದರ ಜತೆಗೆ ರೈತರ ಓಡನಾಡಿ ಗೋವುಗಳಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಾತ್ರವಲ್ಲದೆ ಗೋವುಗಳನ್ನು ಸೃಂಗರಿಸಿ ಅವುಗಳನ್ನು ಬೆದರಿಸುವ ಮೂಲಕ ಇಲ್ಲೊಂದು ಗ್ರಾಮದಲ್ಲಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದು ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಒಂದೆಡೆ ಕಾಲ್ಕಿತ್ತು ಓಡುತ್ತಿರೋ ಹೋರಿಗಳು. ಇನ್ನೊಂದೆಡೆ ಅವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿರೋ ಯುವಕರು, ಮತ್ತೊಂದೆಡೆ ಈ ಸಾಹಸಮಯ ದೃಶ್ಯಗಳನ್ನು ಕಣ್ಣುಂಬಿಕೊಳ್ಳುತ್ತಿರುವ ಸಾರ್ವಜನಿಕರು, ಅರೆ ಇದೇನೂ ಹೋರಿ ಓಡಿಸೊ ಸ್ಪರ್ಧೆ ಅಂಡ್ಕೊಂಡ್ರಾ . . . ? ಖಂಡಿತಾ ಅಲ್ಲ . . . ! ರೈತರ ಪಾಲಿನ ದೊಡ್ಡಹಬ್ಬ ಎಂದೇ ಕರೆಸಿಕೊಳ್ಳುವ ದೀಪಾವಳಿ ಸಂಭ್ರಮ.
ಹೌದು, ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂಡ್ನಳ್ಳಿ ಗ್ರಾಮದಲ್ಲಿ ಕಂಡುಬಂದ ದೀಪಾವಳಿ ಸಂಭ್ರಮದ ದೃಶ್ಯಗಳಿವು. ರೈತರ ಪಾಲಿಗೆ ದೊಡ್ಡ ಹಬ್ಬ ಎಂದೇ ಕರಿಸಿಕೊಳ್ಳುವ ಹಬ್ಬವನ್ನು ಇಂದು ಊರಿನ ಜನರು ಅದ್ದೂರಿಯಾಗಿ ಆಚರಿಸಿದ್ರು. ಬಲೀಂದ್ರನನ್ನು ತಂದು ವಿಶೇಷ ಪೂಜೆ ಸಲಿಸಿದ ರೈತರು ಬಲಿಪಾಡ್ಯ ದಿನವಾದ ಇಂದು ಗೋವುಗಳಿಗೆ ಸಿಂಗಾರ, ರೊಟ್ಟಿ, ಪತ್ತೆತೆನ್ನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವುಗಳನ್ನು ಚೌಲೂ, ಬಲೂನ್, ಬಾಸಿಂಗ ಸೇರಿದಂತೆ ಬಣ್ಣದ ಕಾಗದ ಹೂವುಗಳಿಂದ ಶೃಂಗರಿಸಿ ಬೆದರಿಸಲಾಯಿತು.
ಇನ್ನು ಮೂಡ್ನಳ್ಳಿ ಗ್ರಾಮದಲ್ಲಿರುವ ಬಹುಸಂಖ್ಯಾತ ಒಕ್ಕಲಿಗ ಸಮುದಾಯದವರು ಸೇರಿದಂತೆ ಇತರೆ ಸಮುದಾಯದವರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿಯೇ ಹಬ್ಬವನ್ನು ಆಚರಿಸಲಾಗಿದೆ. ಗೋವುಗಳನ್ನು ಗೋಳಿಗೆ ತಂದು ಅವುಗಳನ್ನು ಬೆದರಿಸುವ ಮೂಲಕ ಸಂಭ್ರಮಿಸಿದರು. ಇನ್ನು ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಎಣ್ಣೆಕಂಬ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಈ ಭಾರಿ ಕೂಡ ಎಣ್ಣೆಕಂಬ ಸ್ಪರ್ಧೆ ಇಟ್ಟಿದ್ದು, ಊರ ಯುವಕರು ಸೇರಿದಂತೆ ಪರ ಊರಿನ ಜನರು ಉತ್ಸಾಹದಲ್ಲಿ ಭಾಗವಹಿಸಿ ಎಣ್ಣೆಕಂಬ ಏರಲು ಪ್ರಯತ್ನಿಸಿದರು.
ಒಟ್ಟಾರೆ ಬೆಳಕಿನ ಹಬ್ಬ ದೀಪಾವಳಿಯನ್ನು ಈ ಭಾಗದ ರೈತರು ಗೋವುಗಳೊಂದಿಗೆ ಆಚರಿಸುವ ಸಂಪ್ರದಾಯ ತಲೆ ತಲಾಂತರಗಳಿಂದ ಇದೆ. ಈ ಭಾರಿಯೂ ರೈತರು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದು ಹೋರಿಗಳ ಓಟ, ಹಾರಟ ನೋಡುಗರ ಗಮನ ಸೆಳೆಯಿತು.
Leave a Comment