ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ (ಡಿಬಿಐಎಲ್) ಜೊತೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಲಿಮಿಟೆಡ್ (ಎಲ್ ವಿ ಬಿ) ವಿಲೀನ ಯೋಜನೆಗೆ ಅನುಮೋದನೆ ನೀಡಿದೆ.
ಠೇವಣಿದಾರರ ಹಿತಕಾಯಲು ಮತ್ತು ಬ್ಯಾಂಕಿಂಗ್ ಸ್ಥಿರತೆ ಮತ್ತು ಹಣಕಾಸು ರಕ್ಷಿಸಲು ಆರ್ ಬಿಐ, 17.11.2020ರಂದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 45ರ ಪ್ರಕಾರ ಎಲ್ ವಿ ಬಿಗೆ 30 ದಿನಗಳ ಅವಧಿಯ ಮಾರಟೋರಿಯಂ ಘೋಷಿಸಲಾಗಿತ್ತು. ಅದಕ್ಕೆ ಸಮನಾಂತರವಾಗಿ, ಆರ್ ಬಿಐ, ಎಲ್ ವಿ ಬಿಯ ಆಡಳಿತ ಮಂಡಳಿಯ ನಿರ್ದೇಶಕರ ಜೊತೆ ಮತ್ತು ಸರ್ಕಾರದ ಜೊತೆ ಸಮಾಲೋಚನೆ ನಡೆಸಿ, ಸೂಪರ್ ಸೀಡ್ ಮಾಡಲಾಗಿದ್ದು, ಠೇವಣಿದಾರರ ಹಿತರಕ್ಷಣೆಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ.
ಸಾರ್ವಜನಿಕರು ಮತ್ತು ಷೇರುದಾರರ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿದ ನಂತರ ಆರ್ ಬಿ ಐ, ಸರ್ಕಾರದ ಅನುಮೋದನೆಗಾಗಿ ಬ್ಯಾಂಕ್ ಗಳ ವಿಲೀನ ಯೋಜನೆಯನ್ನು ಸಿದ್ಧಪಡಿಸಿತ್ತು. ಠೇವಣಿದಾರರು ಹಣಕಾಸು ಹಿಂತೆಗೆಯಲು ಎದುರಿಸುವ ಕಷ್ಟಗಳನ್ನು ಹಾಗೂ ನಿರ್ಬಂಧಗಳನ್ನು ದೂರ ಮಾಡಲು ಹಾಗೂ ಮಾರಿಟೋರಿಯಂ ಅವಧಿ ಮುಕ್ತಾಯವಾಗುವುದಕ್ಕಿಂತ ಮುಂಚಿತವಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ. ಇದೀಗ ವಿಲೀನ ಯೋಜನೆ ಅನುಮೋದನೆಯಿಂದಾಗಿ ಎಲ್ ವಿ ಬಿ, ಡಿಬಿಐಎಲ್ ಜೊತೆ ವಿಲೀನಗೊಳ್ಳಲಿದೆ ಮತ್ತು ಠೇವಣಿದಾರರಿಗೆ ಇನ್ನು ಮುಂದೆ ತಮ್ಮ ಠೇವಣಿಗಳನ್ನು ಹಿಂಪಡೆದುಕೊಳ್ಳಲು ಯಾವುದೇ ಬಗೆಯ ನಿರ್ಬಂಧಗಳು ಇರುವುದಿಲ್ಲ.
ಡಿಬಿಐಎಲ್, ಆರ್ ಬಿ ಐ ನಿಂದ ಲೈಸನ್ಸ್ ಪಡೆದಿರುವ ಬ್ಯಾಂಕಿಂಗ್ ಕಂಪನಿಯಾಗಿದ್ದು, ಅದು ಭಾರತದಾದ್ಯಂತ ತನ್ನದೇ ಆದ ಮಾದರಿಯನ್ನು ಹೊಂದಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಅದರ ಬ್ಯಾಲೆನ್ಸ್ ಶೀಟ್ ಸದೃಢವಾಗಿದ್ದು, ಬಂಡವಾಳದ ಬೆಂಬಲವಿದೆ. ಅದರಲ್ಲಿ ಏಷ್ಯಾದ ಅತಿ ದೊಡ್ಡ ಹಣಕಾಸು ಸೇವೆಗಳ ಬಳಗ ಡಿಬಿಎಸ್ ಹೆಚ್ಚಿನ ಪ್ರಮಾಣದ ಶೇಕಡಾವಾರು ಷೇರುಗಳನ್ನು ಹೊಂದಿದೆ. ಡಿಬಿಎಸ್ ಕಂಪನಿ 18 ಷೇರು ಮಾರುಕಟ್ಟೆಗಳಲ್ಲಿ ಉಪಸ್ಥಿತಿಯಿದ್ದು, ಕೇಂದ್ರ ಕಚೇರಿಯನ್ನು ಹೊಂದಿದೆ ಹಾಗೂ ಸಿಂಗಾಪುರ ಷೇರು ಮಾರುಕಟ್ಟೆಯಲ್ಲೂ ವಹಿವಾಟು ನಡೆಸುತ್ತಿದೆ. ಡಿಬಿಐಎಲ್ ನ ಬ್ಯಾಲೆನ್ಸ್ ಶೀಟ್ ಆರೋಗ್ಯಕರವಾಗಿದ್ದು, ವಿಲೀನದ ನಂತರ ಅದರ ಶಾಖೆಗಳು 600ಕ್ಕೆ ಹೆಚ್ಚಳವಾಗಲಿವೆ.
ತ್ವರಿತ ವಿಲೀನ ಮತ್ತು ಇತ್ಯರ್ಥ ಪ್ರಕ್ರಿಯೆಯಿಂದ ಎಲ್ ವಿ ಬಿ ಮೇಲಿನ ಒತ್ತಡ ತಗ್ಗಲಿದೆ ಮತ್ತು ಶುದ್ಧ ಬ್ಯಾಂಕಿಂಗ್ ವ್ಯವಸ್ಥೆಯ ಸರ್ಕಾರದ ಬದ್ಧತೆಗೆ ಅನುಗುಣವಾಗಿ ಕಾರ್ಯ ನಿರ್ವಹಣೆಯಾಗಲಿದೆ. ಜೊತೆಗೆ ಠೇವಣಿದಾರರ ಹಿತ ರಕ್ಷಿಸುವುದಲ್ಲದೆ, ಸಾರ್ವಜನಿಕರು ಮತ್ತು ಹಣಕಾಸು ವ್ಯವಸ್ಥೆಯನ್ನು ರಕ್ಷಿಸಿದಂತಾಗುತ್ತದೆ.
Leave a Comment