• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರು ರಾಜ್ಯಗಳ ಲೈಟ್ ಹೌಸ್ ಯೋಜನೆಗೆ ಶಂಕುಸ್ಥಾಪನೆ; ವಸತಿ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ: ಪ್ರಧಾನಿ ನರೇಂದ್ರ ಮೋದಿ

January 2, 2021 by Sachin Hegde Leave a Comment

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ (ಜಿಎಚ್‌ಟಿಸಿ) ಅಡಿಯಲ್ಲಿ ಲೈಟ್ ಹೌಸ್ ಯೋಜನೆಗಳಿಗೆ (ಎಲ್‌ಎಚ್‌ಪಿ) ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆರು ರಾಜ್ಯಗಳ ಆರು ಸ್ಥಳಗಳಲ್ಲಿ ಶಿಲಾನ್ಯಾಸ ನೆರವೇರಿಸಿದರು. ಪ್ರಧಾನ ಮಂತ್ರಿಯವರು ಇದೇ ಸಂದರ್ಭದಲ್ಲಿ ಕೈಗೆಟುಕುವ ಸುಸ್ಥಿರ ವಸತಿ ವೇಗವರ್ಧಕಗಳು – ಭಾರತ (ಆಶಾ-ಇಂಡಿಯಾ) ದ ವಿಜೇತರನ್ನು ಘೋಷಿಸಿದರು ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ (ಪಿಎಂಎವೈ-ಯು) ಮಿಷನ್ ನ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.


ನವಾರಿತಿಹ್ (ಹೊಸ, ಕೈಗೆಟುಕುವ, ಮೌಲ್ಯೀಕರಿಸಿದ, ಭಾರತೀಯ ವಸತಿಗಾಗಿ ಸಂಶೋಧನಾ ನಾವೀನ್ಯತೆ ತಂತ್ರಜ್ಞಾನಗಳು) ಹೆಸರಿನ ನವೀನ ನಿರ್ಮಾಣ ತಂತ್ರಜ್ಞಾನಗಳ ಪ್ರಮಾಣೀಕರಣ ಕೋರ್ಸ್ ಅನ್ನು ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶ, ತ್ರಿಪುರ, ಜಾರ್ಖಂಡ್, ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಇಂದು ಹೊಸ ಶಕ್ತಿಯೊಂದಿಗೆ ಮುಂದುವರಿಯುವ ದಿನ, ಹೊಸ ನಿರ್ಣಯಗಳನ್ನು ಸಾಬೀತುಪಡಿಸುವ ದಿನವಾಗಿದೆ ಮತ್ತು ಇಂದು ದೇಶವು ಬಡ, ಮಧ್ಯಮ ವರ್ಗದವರಿಗೆ ಮನೆಗಳನ್ನು ನಿರ್ಮಿಸಲು ಹೊಸ ತಂತ್ರಜ್ಞಾನವನ್ನು ಪಡೆಯುತ್ತಿದೆ ಎಂದರು. ಈ ಮನೆಗಳನ್ನು ತಾಂತ್ರಿಕ ಭಾಷೆಯಲ್ಲಿ ಲೈಟ್ ಹೌಸ್ ಪ್ರಾಜೆಕ್ಟ್‌ಗಳು ಎಂದು ಕರೆಯಲಾಗುತ್ತದೆ. ಆದರೆ ಈ 6 ಯೋಜನೆಗಳು ನಿಜವಾಗಿಯೂ ದೇಶದ ವಸತಿ ಕ್ಷೇತ್ರಕ್ಕೆ ಹೊಸ ದಿಕ್ಕನ್ನು ತೋರಿಸುವ ಲೈಟ್‌ಹೌಸ್‌ಗಳಾಗಿವೆ ಎಂದು ಅವರು ಹೇಳಿದರು.


ಪ್ರಸ್ತುತ ಸರ್ಕಾರದ ಕಾರ್ಯವಿಧಾನಕ್ಕೆ ಉದಾಹರಣೆಯಾಗಿ ಈ ಲೈಟ್ ಹೌಸ್ ಯೋಜನೆಗಳನ್ನು ಪ್ರಧಾನಿಯವರು ಉಲ್ಲೇಖಿಸಿದರು. ಒಂದು ಕಾಲದಲ್ಲಿ ವಸತಿ ಯೋಜನೆಗಳು ಕೇಂದ್ರ ಸರ್ಕಾರದ ಆದ್ಯತೆಯೇ ಆಗಿರಲಿಲ್ಲ ಮತ್ತು ಮನೆ ನಿರ್ಮಾಣದ ಸೂಕ್ಷ್ಮಗಳು ಮತ್ತು ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎಂದು ಅವರು ಹೇಳಿದರು. ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸಲು ಇಂದು ದೇಶವು ವಿಭಿನ್ನ ಮಾರ್ಗ ಮತ್ತು ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಸರ್ಕಾರದ ಸಚಿವಾಲಯಗಳು ದೊಡ್ಡ ಮತ್ತು ನಿಧಾನಗತಿಯ ವ್ಯವಸ್ಥೆಗಳನ್ನು ಹೊಂದಿರಬಾರದು, ಬದಲಿಗೆ ಸ್ಟಾರ್ಟ್ಅಪ್‌ಗಳಂತೆ ಸದೃಢವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಪ್ರಪಂಚದಾದ್ಯಂತದ 50 ಕ್ಕೂ ಹೆಚ್ಚು ನವೀನ ನಿರ್ಮಾಣ ಕಂಪನಿಗಳು ಸಕ್ರಿಯವಾಗಿ ಭಾಗವಹಿಸುತ್ತಿರುವ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಈ ಜಾಗತಿಕ ಸವಾಲು ನಮಗೆ ಹೊಸ ತಂತ್ರಜ್ಞಾನದೊಂದಿಗೆ ಅನುಶೋಧನೆ ಮತ್ತು ಬೆಳವಣಿಗೆಗೆ ಅವಕಾಶವನ್ನು ನೀಡಿದೆ ಎಂದು ಅವರು ಹೇಳಿದರು.


ಇದೇ ಪ್ರಕ್ರಿಯೆಯ ಮುಂದಿನ ಹಂತವಾಗಿ ವಿವಿಧ ಸ್ಥಳಗಳಲ್ಲಿ 6 ಲೈಟ್ ಹೌಸ್ ಯೋಜನೆಗಳ ಕಾಮಗಾರಿಯು ಇಂದಿನಿಂದ ಪ್ರಾರಂಭವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಲೈಟ್ ಹೌಸ್ ಯೋಜನೆಗಳು ಆಧುನಿಕ ತಂತ್ರಜ್ಞಾನ ಮತ್ತು ನವೀನ ಪ್ರಕ್ರಿಯೆಗಳಿಂದ ಕೂಡಿವೆ ಮತ್ತು ನಿರ್ಮಾಣ ಸಮಯವನ್ನು ಕಡಿಮೆ ಮಾಡುತ್ತವೆ ಮತ್ತು ಬಡವರಿಗೆ ಹೆಚ್ಚು ಸ್ಥಿತಿಸ್ಥಾಪಕ, ಕೈಗೆಟುಕುವ ಮತ್ತು ಆರಾಮದಾಯಕವಾದ ಮನೆಯನ್ನು ಒದಗಿಸುತ್ತವೆ. ಈ ಮನೆಗಳು ನಿರ್ಮಾಣ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನು ಹೊಂದಿವೆ ಎಂದು ಅವರು ವಿವರಿಸಿದರು. ಉದಾಹರಣೆಗೆ ಇಂದೋರ್‌ನಲ್ಲಿನ ಯೋಜನೆಯು ಇಟ್ಟಿಗೆ ಮತ್ತು ಗಾರೆ ಗೋಡೆಗಳನ್ನು ಹೊಂದಿರುವುದಿಲ್ಲ, ಬದಲಿಗೆ ಅವುಗಳಲ್ಲಿ ಮೊದಲೇ ತಯಾರಿಸಿದ ಸ್ಯಾಂಡ್‌ವಿಚ್ ಪ್ಯಾನಲ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ರಾಜ್‌ಕೋಟ್‌ನಲ್ಲಿನ ಮನೆಗಳನ್ನು ಫ್ರೆಂಚ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗುವುದು ಮತ್ತು ಮಾನೊಲಿಥಿಕ್ ಕಾಂಕ್ರೀಟ್ ನಿರ್ಮಾಣ ತಂತ್ರಜ್ಞಾನವನ್ನು ಹೊಂದಿರುತ್ತವೆ. ಈ ಮನೆ ವಿಪತ್ತುಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಚೆನ್ನೈನಲ್ಲಿನ ಮನೆಗಳಲ್ಲಿ, ಅಮೆರಿಕಾ ಮತ್ತು ಫಿನ್ಲ್ಯಾಂಡ್ ತಂತ್ರಜ್ಞಾನಗಳು ಪ್ರಿಕಾಸ್ಟ್ ಕಾಂಕ್ರೀಟ್ ವ್ಯವಸ್ಥೆಯನ್ನು ಬಳಸಲಾಗುತ್ತದೆ.

ಇದರಿಂದ ಮನೆಯನ್ನು ವೇಗವಾಗಿ ಮತ್ತು ಅಗ್ಗವಾಗಿ ನಿರ್ಮಿಸಬಹುದು. ರಾಂಚಿಯಲ್ಲಿ ಜರ್ಮನಿಯ 3 ಡಿ ನಿರ್ಮಾಣ ವ್ಯವಸ್ಥೆಯನ್ನು ಬಳಸಿಕೊಂಡು ಮನೆಗಳನ್ನು ನಿರ್ಮಿಸಲಾಗುವುದು. ಪ್ರತಿಯೊಂದು ಕೋಣೆಯನ್ನು ಪ್ರತ್ಯೇಕವಾಗಿ ಮಾಡಲಾಗುವುದು ಮತ್ತು ನಂತರ ಸಂಪೂರ್ಣ ರಚನೆಯನ್ನು ಲೆಗೊ ಬ್ಲಾಕ್ ಆಟಿಕೆಗಳಂತೆಯೇ ಜೋಡಿಸಲಾಗುತ್ತದೆ. ಅಗರ್ತಲಾದಲ್ಲಿ ಭೂಕಂಪನ ಅಪಾಯವನ್ನು ತಡೆದುಕೊಳ್ಳಬಲ್ಲ ನ್ಯೂಜಿಲೆಂಡ್‌ನ ತಂತ್ರಜ್ಞಾನವನ್ನು ಬಳಸಿಕೊಂಡು ಉಕ್ಕಿನ ಚೌಕಟ್ಟುಗಳೊಂದಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಲಕ್ನೋದಲ್ಲಿ ಕೆನಡಾದ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ, ಇದಕ್ಕೆ ಪ್ಲ್ಯಾಸ್ಟರ್ ಮತ್ತು ಬಣ್ಣದ ಅಗತ್ಯವಿರುವುದಿಲ್ಲ ಮತ್ತು ಮನೆಗಳನ್ನು ವೇಗವಾಗಿ ನಿರ್ಮಿಸಲು ಈಗಾಗಲೇ ಸಿದ್ಧಪಡಿಸಿದ ಸಂಪೂರ್ಣ ಗೋಡೆಗಳನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದರು.. ಪ್ರತಿ ಸ್ಥಳದಲ್ಲಿ 12 ತಿಂಗಳಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಲಾಗುವುದು, ಇವುಗಳು ಬೆಳವಣಿಗೆ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ, ಇದರ ಮೂಲಕ ನಮ್ಮ ಯೋಜಕರು, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು ಮತ್ತು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಕಲಿಯಲು ಮತ್ತು ಪ್ರಯೋಗಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ, ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ನಿರ್ಮಾಣ ಕ್ಷೇತ್ರದ ಜನರಿಗೆ ನೀಡಲು ಪ್ರಮಾಣಪತ್ರ ಕೋರ್ಸ್ ಅನ್ನು ಪ್ರಾರಂಭಿಸಲಾಗುವುದು. ಇದರಿಂದ ಜನರು ಮನೆ ನಿರ್ಮಾಣದಲ್ಲಿ ವಿಶ್ವದ ಅತ್ಯುತ್ತಮ ತಂತ್ರಜ್ಞಾನ ಮತ್ತು ವಸ್ತುಗಳನ್ನು ಪಡೆಯಬಹುದು ಎಂದು ಪ್ರಧಾನಿ ತಿಳಿಸಿದರು.


ದೇಶದಲ್ಲಿ ಆಧುನಿಕ ವಸತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ನವೋದ್ಯಮಗಳನ್ನು ಉತ್ತೇಜಿಸಲು ಆಶಾ-ಇಂಡಿಯಾ ಕಾರ್ಯಕ್ರಮವನ್ನು ಜಾರಿಗಿಳಿಸಾಗಿದೆ ಎಂದು ಪ್ರಧಾನಿ ಹೇಳಿದರು. ಈ ಮೂಲಕ, 21 ನೇ ಶತಮಾನದ ಮನೆಗಳನ್ನು ನಿರ್ಮಿಸಲು ಹೊಸ ಮತ್ತು ಉತ್ತಮ ತಂತ್ರಜ್ಞಾನವನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು. ಈ ಅಭಿಯಾನದ ಅಡಿಯಲ್ಲಿ ಐದು ಅತ್ಯುತ್ತಮ ತಂತ್ರಗಳನ್ನು ಸಹ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು. ನಗರದಲ್ಲಿ ವಾಸಿಸುವ ಬಡ ಅಥವಾ ಮಧ್ಯಮ ವರ್ಗದ ಜನರ ದೊಡ್ಡ ಕನಸು ಸ್ವಂತ ಮನೆಯನ್ನು ಹೊಂದುವುದಾಗಿದೆ ಎಂದು ಅವರು ಹೇಳಿದರು. ಆದರೆ ವರ್ಷಗಳುರಿಳಿದಂತೆ, ಜನರು ತಮ್ಮ ಮನೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದರು. ವಿಶ್ವಾಸ ಗಳಿಸಿದ ನಂತರವೂ ಹೆಚ್ಚಿನ ಬೆಲೆ ಇರುವುದರಿಂದ ಬೇಡಿಕೆ ಕಡಿಮೆಯಾಯಿತು ಎಂದು ಅವರು ಹೇಳಿದರು. ಯಾವುದೇ ಸಮಸ್ಯೆ ತಲೆದೋರಿದರೆ ಕಾನೂನುಬದ್ಧ ರಕ್ಷಣೆ ಇಲ್ಲದೇ ಜನರು ನಂಬಿಕೆಯನ್ನು ಕಳೆದುಕೊಂಡರು. ಬ್ಯಾಂಕಿನ ಹೆಚ್ಚಿನ ಬಡ್ಡಿದರಗಳು ಮತ್ತು ಸಾಲ ಪಡೆಯುವಲ್ಲಿನ ತೊಂದರೆಗಳು, ಮನೆ ಹೊಂದುವ ಆಸಕ್ತಿಯನ್ನು ಮತ್ತಷ್ಟು ಕುಗ್ಗಿಸಿದವು ಎಂದು ಅವರು ತಿಳಿಸಿದರು. ತಾನೂ ಸಹ ಸ್ವಂತ ಮನೆ ಹೊಂದಬಹುದು ಎಂದು ಜನಸಾಮಾನ್ಯರಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸಲು ಕಳೆದ 6 ವರ್ಷಗಳಲ್ಲಿ ಕೈಗೊಂಡ ಪ್ರಯತ್ನಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದ ಅವರು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರಗಳಲ್ಲಿ ಲಕ್ಷಾಂತರ ಮನೆಗಳನ್ನು ಅಲ್ಪಾವಧಿಯಲ್ಲಿಯೇ ನಿರ್ಮಿಸಲಾಗಿದೆ ಎಂದರು.


ಪಿಎಂ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣದಲ್ಲಿ ಸ್ಥಳೀಯ ಅಗತ್ಯತೆಗಳು ಮತ್ತು ಮನೆ ಮಾಲೀಕರ ನಿರೀಕ್ಷೆಗೆ ಅನುಗುಣವಾಗಿ ನಾವೀನ್ಯತೆ ಮತ್ತು ಅನುಷ್ಠಾನಕ್ಕೆ ಗಮನ ಹರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರತಿ ಘಟಕವು ವಿದ್ಯುತ್-ನೀರು-ಅನಿಲ ಸಂಪರ್ಕವನ್ನು ಹೊಂದಿರುವುದರಿಂದ ಇದು ಸಂಪೂರ್ಣ ಪ್ಯಾಕೇಜ್ ಆಗಿದೆ. ಫಲಾನುಭವಿಗಳಿಗೆ ಜಿಯೋ-ಟ್ಯಾಗಿಂಗ್ ಮತ್ತು ನೇರ ಲಾಭ ವರ್ಗಾವಣೆ (ಡಿಬಿಟಿ) ಯಂತಹ ತಂತ್ರಜ್ಞಾನಗಳ ಮೂಲಕ ಪಾರದರ್ಶಕತೆ ಖಾತ್ರಿಪಡಿಸಲಾಗುತ್ತಿದೆ ಎಂದರು.
ಮಧ್ಯಮ ವರ್ಗದವರಿಗೆ ಆಗುವ ಪ್ರಯೋಜನಗಳ ಕುರಿತು ಮಾತನಾಡಿದ ಶ್ರೀ ಮೋದಿ, ಅವರು ಗೃಹ ಸಾಲದ ಮೇಲಿನ ಬಡ್ಡಿಗೆ ರಿಯಾಯಿತಿ ಪಡೆಯುತ್ತಿದ್ದಾರೆ ಎಂದು ಹೇಳಿದರು. ಅಪೂರ್ಣ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ರಚಿಸಲಾದ 25 ಸಾವಿರ ಕೋಟಿ ರೂಪಾಯಿಗಳ ವಿಶೇಷ ನಿಧಿ ಮಧ್ಯಮ ವರ್ಗದವರಿಗೆ ಸಹಾಯ ಮಾಡುತ್ತದೆ. ರೇರಾದಂತಹ ಕ್ರಮಗಳು ಮನೆ ಮಾಲೀಕರಲ್ಲಿ ವಿಶ್ವಾಸವನ್ನು ಮರಳಿ ತಂದಿವೆ ಮತ್ತು ಅವರು ಕಷ್ಟಪಟ್ಟು ಸಂಪಾದಿಸಿದ ಹಣಕ್ಕೆ ಮೋಸ ವಾಗುವುದಿಲ್ಲ ಎಂಬ ವಿಶ್ವಾಸವನ್ನು ಪಡೆದಿದ್ದಾರೆ. ರೇರಾ ಅಡಿಯಲ್ಲಿ 60 ಸಾವಿರ ಯೋಜನೆಗಳು ನೋಂದಣಿಯಾಗಿವೆ ಮತ್ತು ಸಾವಿರಾರು ಕುಂದುಕೊರತೆಗಳನ್ನು ಕಾನೂನಿನಡಿಯಲ್ಲಿ ಪರಿಹರಿಸಲಾಗಿದೆ ಎಂದು ಹೇಳಿದರು.


ಮನೆಯ ಕೀಲಿಯನ್ನು ಪಡೆಯುವುದೆಂದರೆ, ಕೇವಲ ವಾಸದ ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳುವುದಲ್ಲ. ಅದು ಘನತೆ, ವಿಶ್ವಾಸ, ಸುರಕ್ಷಿತ ಭವಿಷ್ಯ, ಹೊಸ ಗುರುತು ಮತ್ತು ಸಾಧ್ಯತೆಗಳ ಬಾಗಿಲು ತೆರೆಯುತ್ತದೆ ಎಂದು ಪ್ರಧಾನಿ ಹೇಳಿದರು. ‘ಎಲ್ಲರಿಗೂ ವಸತಿ’ಎಂಬ ಧ್ಯೇಯದೊಂದಿಗೆ ಮಾಡಲಾಗುತ್ತಿರುವ ಸರ್ವತೋಮುಖ ಕೆಲಸಗಳು ಕೋಟ್ಯಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತಿವೆ ಎಂದು ಅವರು ಹೇಳಿದರು.
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಕೈಗೆತ್ತಿಕೊಂಡ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣ ಹೊಸ ಯೋಜನೆಯ ಬಗ್ಗೆ ಪ್ರಧಾನಿಯವರು ಉಲ್ಲೇಖಿಸಿದರು. ವಿವಿಧ ರಾಜ್ಯಗಳಿಂದ ವಿವಿಧ ರಾಜ್ಯಗಳಿಗೆ ಕೆಲಸಕ್ಕೆ ಬರುವ ಕಾರ್ಮಿಕರಿಗೆ ನ್ಯಾಯಯುತ ಬಾಡಿಗೆಯೊಂದಿಗೆ ವಸತಿ ಒದಗಿಸಲು ಸರ್ಕಾರ ಉದ್ಯಮ ಮತ್ತು ಇತರ ಹೂಡಿಕೆದಾರರೊಂದಿಗೆ ಕೆಲಸ ಮಾಡುತ್ತಿದೆ. ಕೆಲಸದ ಸ್ಥಳದ ಸಮೀಪದಲ್ಲಿಯೇ ಅವರಿಗೆ ನ್ಯಾಯಯುತ ಬಾಡಿಗೆಗೆ ವಾಸಸ್ಥಾನಗಳನ್ನು ಒದಗಿಸುವುದು ಈ ಪ್ರಯತ್ನವಾಗಿದೆ. ನಮ್ಮ ಶ್ರಮಿಕ ಸ್ನೇಹಿತರು ಗೌರವದಿಂದ ಬದುಕಬೇಕು ಎಂಬುದು ನಮ್ಮ ಜವಾಬ್ದಾರಿ ಎಂದು ಶ್ರೀ ಮೋದಿ ಹೇಳಿದರು.


ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಹಾಯ ಮಾಡಲು ಇತ್ತೀಚೆಗೆ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಧಾನಿ ವಿವರಿಸಿದರು. ಅಗ್ಗದ ಮನೆಗಳ ಮೇಲಿನ ತೆರಿಗೆಯನ್ನು ಶೇಕಡಾ 8 ರಿಂದ 1 ಕ್ಕೆ ಇಳಿಸುವುದು, ಜಿಎಸ್‌ಟಿಯನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸುವುದು, ಅಗ್ಗದ ಸಾಲಗಳಿಗೆ ಅರ್ಹರಾಗಲು ಈ ಕ್ಷೇತ್ರವನ್ನು ಮೂಲಸೌಕರ್ಯ ಕ್ಷೇತ್ರವೆಂದು ಗುರುತಿಸುವುದು ಮೊದಲಾದ ಕ್ರಮಗಳ ಬಗ್ಗೆ ಅವರು ತಿಳಿಸಿದರು. ನಿರ್ಮಾಣ ಪರವಾನಗಿಯಲ್ಲಿನ ನಮ್ಮ ಶ್ರೇಯಾಂಕವು 185 ರಿಂದ 27ಕ್ಕೆ ಸುಧಾರಿಸಿದೆ. 2000 ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಆನ್‌ಲೈನ್‌ನಲ್ಲಿ ಅನುಮತಿಗಳನ್ನು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಗ್ರಾಮೀಣ ಭಾರತದಲ್ಲಿ 2 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಈ ವರ್ಷ ಗ್ರಾಮೀಣ ವಸತಿ ನಿರ್ಮಾಣದ ವೇಗವನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Trending Tagged With: bank high interest rates, borrowing difficulties, fast financing, home ownership, housing accelerators, six places to address, The real estate sector, ಆರು ಸ್ಥಳಗಳಲ್ಲಿ ಶಿಲಾನ್ಯಾಸ, ಬ್ಯಾಂಕಿನ ಹೆಚ್ಚಿನ ಬಡ್ಡಿದರಗಳು, ಮನೆ ಹೊಂದುವ ಆಸಕ್ತಿ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ, ವಸತಿ ವೇಗವರ್ಧಕಗಳು, ವೇಗವಾಗಿ ಪೂರ್ಣಗೊಳಿಸಲು, ಸಾಲ ಪಡೆಯುವಲ್ಲಿನ ತೊಂದರೆಗಳು

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar