ಭಟ್ಕಳ: ಕೇಂದ್ರ ಸರಕಾರದ ಆತ್ಮ ನಿರ್ಭರ ಯೋಜನೆಯಡಿಯಲ್ಲಿ ವ್ಯಾಪಾರ ವೃದ್ಧಿಗಾಗಿ ಸಾಲ ನೀಡುವ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ಹಾಗೂ ಸಾಲ ವಿತರಣಾ ಕಾರ್ಯಕ್ರಮ ಸ್ಥಳೀಯ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮುದಾಯ ಸಂಘಟನಾ ಅಧಿಕಾರಿ ವೇಣುಗೋಪಾಲ ಶಾಸ್ತ್ರಿಯವರು ಪುರಸಭೆಯ ವತಿಯಿಂದ ಈಗಾಗಲೇ ನಾವು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರನ್ನು ಗುರುತಿಸಿ ಅವರಿಗೆ ಲೈಸನ್ಸ್ ಸೇರಿದಂತೆ ಅಗತ್ಯದ ದಾಖಲೆಗಳನ್ನು ಮಾಡಿಕೊಟ್ಟಿದ್ದೇವೆ. ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಸಾಲ ಸೌಲಭ್ಯವನ್ನು ನೀಡುವಂತೆ ಬ್ಯಾಂಕುಗಳಿಗೆ ಮಾಹಿತಿಯನ್ನು ಕೂಡಾ ರವಾನಿಸಲಾಗಿದ್ದು ಹೆಚ್ಚಿನ ಬ್ಯಾಂಕುಗಳನ್ನು ತಮಗೆ ಬಂದಿರುವ ಪಟ್ಟಿಯಂತೆ ಈಗಾಗಲೇ ಸಾಲವನ್ನು ನೀಡಿದ್ದಾರೆ. ಕೆಲವರು ದಾಖಲೆಗಳನ್ನು ವದಗಿಸಿಲ್ಲವಾದ್ದರಿಂದ ಸಾಲ ನೀಡುವುದಕ್ಕೆ ವಿಳಂಬವಾಗಿದೆ. ಆದಷ್ಟು ಶೀಘ್ರದಲ್ಲಿ ತಮ್ಮ ದಾಖಲೆಗಳನ್ನು ಬ್ಯಾಂಕುಗಳಿಗೆ ನೀಡಿ ಸಾಲ ಪಡೆದುಕೊಂಡು ಸಕಾಲದಲ್ಲಿ ಮರು ಪಾವತಿ ಮಾಡುವಂತೆ ಕರೆ ನೀಡಿದರು. ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ವಿನಾಯಕ ಮೊಗೇರ ಮಾತನಾಡಿ ಸಾಲವನ್ನು ಪಡೆಯುವವರ ಪಟ್ಟಿ ನಮಗೆ ಬಂದಿದ್ದರೂ ಕೂಡಾ ನಾವು ಅವರನ್ನು ಸಂಪರ್ಕ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಕೆಲವರು ಮಾತ್ರ ಬ್ಯಾಂಕಿಗೆ ಬಂದಿದ್ದು ಅವರಿಗೆ ಸಾಲ ನೀಡಿದ್ದೇವೆ ಎಂದರು. ಪ್ರತಿಯೋರ್ವರೂ ಕೂಡಾ ಬ್ಯಾಂಕ್ನೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಿ ನೀವು ಈಗ ಪಡೆದ ಸಾಲವನ್ನು ಸದುಪಯೋಗ ಪಡಿಸಿಕೊಂಡು ಮತ್ತೆ ಇದಕ್ಕಿಂತ ಹೆಚ್ಚಿನ ಸಾಲವನ್ನ ಪಡೆಯುವಂತಾಗಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಈ ಯೋಜನೆಯನ್ನು ತಂದಿದೆ. ಈ ಯೋಜನೆಯ ಲಾಭವನ್ನು ಪಡೆದು ವ್ಯಾಪಾರ ವೃದ್ಧಿಸಿಕೊಳ್ಳುವಲ್ಲಿ ಇದೊಂದು ಉತ್ತಮ ಅವಕಾಶವಾಗಿದ್ದು ಪ್ರತಿಯೋರ್ವರೂ ಕುಡಾ ಬ್ಯಾಂಕುಗಳಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿ ಯೋಜನೆಯನ್ನು ಯಶಸ್ವೀಗೊಳಿಸಿದಲ್ಲಿ ಮುಂದೆ ಇದರ ದುಪ್ಪಟ್ಟು ಹಣ ಸಾಲ ರೂಪದಲ್ಲಿ ಪಡೆಯಬಹುದು. ನಿಮ್ಮ ವ್ಯಾಪಾವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವಲ್ಲಿ ಅನುಕೂಲವಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆನರಾ ಬ್ಯಾಂಕ್ ಬಂದರ್ ರಸ್ತೆಯ ವ್ಯವಸ್ಥಾಪಕ ಸಂಜೀತ್ ಸಿಂಗ್ ಮಾತನಾಡಿ ಸರಕಾರದ ಈ ಯೋಜನೆಯನ್ನು ನೀವು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಸಾಲದ ಮೊತ್ತ ದುಪ್ಪಾಟ್ಟಾಗುವುದರೊಂದಿಗೆ ನಿಮ್ಮ ವ್ಯವಹಾರಕ್ಕೆ ಅನುಕೂಲವಾಗುತ್ತದೆ. ಸಾಲ ಪಡೆದ ದಿನದಿಂದ ದಿನಕ್ಕೆ ನೀಡು ಐವತ್ತು ರೂಪಾಯಿಯನ್ನು ತೆಗೆದಿರಿಸಿದರೆ ತಿಂಗಳ ಕಂತು ತುಂಬಬಹುದು. ಪ್ರತಿಯೋರ್ವರೂ ಕೂಡಾ ನಗದು ವ್ಯವಹಾರವನ್ನು ಅದಷ್ಟು ಕಡಿಮೆ ಮಾಡಿ ಡಿಜಿಟಲ್ ಪಾವತಿಗೆ ಮುಂದಾಗಬೇಕು, ಅಲ್ಲಿಯೂ ನಿಮಗೆ ಇನ್ಸೆಂಟಿವ್ ದೊರೆಯುತ್ತದೆ ಎಂದರು. ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಫಲಾನುಭವಿಗಳಿಗೆ ಸಾಲ ಮಂಜೂರಿ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಅನೂಪ್ ಪೈ, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ ಪ್ರಭು, ಬ್ಯಾಂಕ್ ಆಫ್ ಬರೋಡಾದ ಅಮೋಲ್ ರಿಚಾಲೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಾಗರಾಜ ನಾಯ್ಕ ಕರ್ಣಾಟಕ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment