ಭಟ್ಕಳ: ಋತುಚಕ್ರವು ಮಹಿಳೆಯರ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದು, ಈ ಸಂಧರ್ಭದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಗಮನವನ್ನು ಕೊಡಬೇಕು” ಎಂದು ಭಟ್ಕಳ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮತ ಹೇಳಿದರು.
ಪಟ್ಟಣದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಭಟ್ಕಳದ ರೋಟರಿ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಸಹಭಾಗಿತ್ವದಲ್ಲಿ ಆಯೋಜಿಸಲ್ಪಟ್ಟ ಸ್ಯಾನಿಟರಿ ನಾಪ್ಕಿನ್ ವಿಲೇವಾರಿ ಯಂತ್ರ ಸಮರ್ಪಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು “ಹಿಂದಿನ ಕಾಲದಲ್ಲಿ ಋತುಚಕ್ರದ ಅವಧಿಯನ್ನು ಶಾಪವೆಂದು ಪರಿಗಣಿಸಲಾಗುತ್ತಿತ್ತು ಆದರೆ ಇಂದು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರಲ್ಲಿ ಈ ವಿಷಯದ ಬಗ್ಗೆ ಜಾಗರೂಕತೆ ಮೂಡುತ್ತಿದೆ” ಎಂದರು.
ಕಾರ್ಯಕ್ರಮದ ಮತ್ತೋರ್ವ ಅತಿಥಿ ಭಟ್ಕಳ ರೋಟರಿ ಕ್ಲಬ್ನ ಅಧ್ಯಕ್ಷ ಡಾ. ಗೌರೀಶ್ ಪಡುಕೋಣೆ ಮಾತನಾಡಿ,”ಋತು ಚಕ್ರದ ಅವಧಿಯಲ್ಲಿ ಬಳಕೆಯಾದ ಸ್ಯಾನಿಟರಿ ನಾಪ್ಕಿನ್ ಗಳು ಸರಿಯಾಗಿ ವಿಲೇವಾರಿಯಾಗದಿದ್ದರೆ ಅದರಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳು ಆಗುತ್ತವೆ ಆದುದರಿಂದ ರೋಟರಿ ಕ್ಲಬ್ ವತಿಯಿಂದ ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧೀನ ಸಂಸ್ಥೆಗಳಿಗೆ ಪರಿಸರ ಸ್ನೇಹಿ ಸ್ಯಾನಿಟರಿ ನಾಪ್ಕಿನ್ ವಿಲೇವಾರಿ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಗಿದ್ದು, ವಿದ್ಯಾರ್ಥಿನಿಯರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು” ಎಂದರು.
ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ ಡಾ. ಸವಿತಾ ಕಾಮತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಟ್ಕಳ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ ನಾಯಕ್ ವಹಿಸಿದ್ದರು. ರೋಟರಿ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಪ್ರಮುಖರಾದ ರಾಜೇಶ ನಾಯಕ, ಶಾಕೀರ ಹುಸೇನ, ನಜೀರ ಹಾಗೂ ಭಟ್ಕಳ ಎಜುಕೇಶನ್ ಟ್ರಸ್ಟಿನ ಅಧೀನ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕಿಯರು, ವಿದ್ಯಾರ್ಥಿನಿಯರು, ರೊಟರಾಕ್ಟ್ ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು.
ಕ್ಲಬ್ನ ಉಪಾಧ್ಯಕ್ಷೆ ಕುಮಾರಿ ಶ್ವೇತಾ ಸ್ವಾಗತಿಸಿದರು, ಸದಸ್ಯರುಗಳಾದ ಮನಿಷಾ ಮೇಸ್ತ ನಿರೂಪಿಸಿದರು ಹಾಗೂ ನರಸಿಂಹ ಕಾಮತ ವಂದಿಸಿದರು.
Leave a Comment