ಭಟ್ಕಳ: ತಾಲೂಕಿನ ಹಳೆ ಬಸ್ ನಿಲ್ದಾಣದಲ್ಲಿರುವ ನಾಗಬನದ ಕಂಪೌಂಡ ಗೋಡೆ ಕಟ್ಟುವ ವಿಚಾರದಲ್ಲಿ ಉಭಯ ಕೋಮಿನ ನಡುವೆ ವಿವಾದ ತಾರಕ್ಕೆರಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮಾ. 13ರ ಯುಗಾದಿಯಂದು ಶಾಸಕ ಸುನೀಲ ನಾಯ್ಕ ನಾಗಬನದ ಕಂಪೌಂಡ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಿದ್ದರು. ಅದರಂತೆ ಕಾರ್ಮಿಕರು ಶುಕ್ರವಾರ ಗೋಡೆ ನಿರ್ಮಿಸಲು ಪಾಯ ತೆಗೆಯುವಾಗ ಮುಸ್ಲಿಂ ಸಂಘಟನೆಯ ಸದಸ್ಯರು ಗುಂಪು ಕಟ್ಟಿಕೊಂಡು ಬಂದು ತಡೆ ಒಡ್ಡಿದ್ದಾರೆ. ನಿಮಗೆ ಇಲ್ಲಿ ಗೋಡೆ ಕಟ್ಟಲು ಹೇಳಿದವರು ಯಾರು ? ಯಾರಿಂದ ಅನುಮತಿ ಪಡೆದಿದ್ದಿರಿ? ಮೊದಲು ದಾಖಲೆ ತೋರಿಸಿ, ಪುರಸಭೆಯ ಪರವಾನಿಗೆ ಪಡೆಯದೆ ಇದನ್ನು ಕಟ್ಟಲು ನಮ್ಮ ವಿರೋಧವಿದೆ ಎಂದು ಕಾಮಗಾರಿ ನಡೆಸಲು ಅಡ್ಡಿಪಡಿಸಿದ್ದಾರೆ.
ಎರಡೂ ಕೋಮುಗಳ ನಡುವೆ ಮಾತಿನ ಚಕಮಕಿ ನಡೆದು ಅಲ್ಲಿ ಹಿಂದೂ ಸಂಘಟನೆಯ ಸದಸ್ಯರೂ ಜಮಾಯಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯಶಸ್ವಿಯಾದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಸ್ಥಳಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಪೊಲೀಸ ಪಡೆಯನ್ನು ನೀಯೋಜಿಸಲಾಗಿದೆ.
ನಾಗಬನದ ವಿವಾದದ ವಿಷಯ ಅರಿವಿಗೆ ಬರುತ್ತಿದ್ದಂತೆ ಶಾಸಕ ಸುನೀಲ ನಾಯ್ಕ ಸ್ಥಳಕ್ಕೆ ಆಗಮಿಸಿದ್ದಾರೆ.
ಇದು ಸರ್ಕಾರಿ ಜಾಗವಾಗಿದ್ದು ಆರ್ಟಿಸಿಯಲ್ಲಿ 3 ಗುಂಟೆ 12 ಆಣೆ ಜಾಗವಿದೆ. ಇಲ್ಲಿನ ಸ್ಥಳವನ್ನು ಇನ್ನೊಂದು ಕೋಮಿನ ಜನರು ಅತಿಕ್ರಮಣ ಮಾಡಿಕೊಂಡಿದ್ದಾರೆ. ನಾಗಬನವಿದ್ದ ಸ್ಥಳ ಅಭಿವೃದ್ಧಿ ಪಡಿಸಲು ಸರ್ಕಾರ 7.5 ಲಕ್ಷ ಮಂಜೂರಿ ಮಾಡಿದೆ. ಅದರಲ್ಲಿನ 2 ಲಕ್ಷವನ್ನು ಜಿಲ್ಲಾಧಿಕಾರಿಗಳು ಈಗಾಗಲೆ ಸಮಿತಿಯ ಖಾತೆಗೆ ಜಮಾ ಮಾಡಿದ್ದಾರೆ. ನಾಗಬನ ಅಭಿವೃದ್ಧಿ ಪಡಿಸಲು ಅಡ್ಡಿ ಪಡಿಸುವವರು ಯಾರು? ಇಂತಹ ವಿರೋಧಕ್ಕೆ ನಾವು ಅಂಜುವುದಿಲ್ಲ. ಪೊಲೀಸರೇ ನಮಗೆ ಭದ್ರತೆ ಕೊಡಿ ನಾವು ಕಾಂಪೌಂಡ ಕಟ್ಟುತ್ತೇವೆ ಎಂದರು.
ಇದಕ್ಕೆ ಉತ್ತರಿಸಿದ ಡಿವೈಎಸ್ಪಿ ಬೆಳ್ಳಿಯಪ್ಪ ಇದೆ ವಿಷಯದ ಕುರಿತು ಇನ್ನೊಂದು ಕೋಮಿನ ಮುಖಂಡರು ಎಸಿ ಕಚೇರಿಗೆ ತೆರಳಿದ್ದಾರೆ. ನೀವು ಕೂಡ ಅಲ್ಲಿಗೆ ಹೋಗಿ ಅಲ್ಲಿಂದಲೆ ಪ್ರೋಸಿಡಿಂಗ್ ಮಾಡಿಸಿಕೊಡಿ. ಕಾನೂನಿನ ಪ್ರಕಾರ ನಾವು ಭದ್ರತೆ ನೀಡುತ್ತೇವೆ ಎಂದರು.
ನಾಗಬನದ ವಿವಾದ ಸಂಬಂದಸಹಾಯಕ ಆಯುಕ್ತರ ನೇತೃತ್ವದಲ್ಲಿ ಇಲ್ಲಿನ ಸಹಾಯಕ ಆಯುಕ್ತರ ಕಚೇರಿ ಯಲ್ಲಿ ಸಭೆ ನಡೆಸಲಾಯಿತು
ಸಭೆಯಲ್ಲಿ ನಾಗಬನ ಸ್ಥಳದಲ್ಲಿ ಯಾವುದೇ ಮಾತುಕತೆ ನಡೆಸದೇ ನೇರವಾಗಿ ಶಾಸಕರು ಹಾಗೂ ನಾಗಬನ ಪರವಾಗಿರುವ ಮುಖಂಡರು ಸಹಾಯಕ ಆಯುಕ್ತರ ಕಛೇರಿಗೆ ತೆರಳಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರ ಅಧ್ಯಕ್ಷತೆಯಲ್ಲಿ ಅನ್ಯಕೋಮಿನ ಮುಖಂಡರನ್ನೊಳಗೊಂಡಂತೆ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ನಾಗಬನದ ಪರವಾಗಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಧಾರ್ಮಿಕ ಸ್ಥಳಕ್ಕೆ ಸರಕಾರದಿಂದ ಕಾಯ್ದಿಟ್ಟ ಜಾಗದಲ್ಲಿ ಕಂಪೌಂಡ ಕಟ್ಟಲು ತಕರಾರು ಯಾಕೆ. ಭಟ್ಕಳದಲ್ಲಿ ಸಾಕಷ್ಟು ಕಡೆ ಮಸೀದಿ ಮನೆಗಳು ಯಾವುದೇ ಪರವಾನಿಗೆ ಇಲ್ಲದೇ ಕಟ್ಟಲಾಗಿದೆ. ಇದಕ್ಕೆ ನಮ್ಮದಾರದು ತಕರಾರು ಅಡ್ಡಿಯಿಲ್ಲ. ಈಗಾಗಲೇ 7.50 ಲಕ್ಷ ಹಣ ಮಂಜೂರಾಗಿದ್ದು ಅದರಲ್ಲಿ 2 ಲಕ್ಷ ಕಂಪೌಂಡ ನಿರ್ಮಾಣ ಮಾಡಬೇಕಾಗಿದೆ ಎಂದರು.ಇದಕ್ಕೆ ಅನ್ಯಕೋಮಿನ ಮುಖಂಡರು ನಾಗಬನ ಜಾಗವೂ ಯಾವೊಬ್ಬ ವ್ಯಕ್ತಿಯ ಹಕ್ಕಾಗಿಲ್ಲ. ಇಂತಹ ಸಂಧರ್ಭದಲ್ಲಿ ಹೇಗೆ ಕಂಪೌಂಡ ಕಟ್ಟಲು ಅವಕಾಶವಿಲ್ಲ. ಇದೊಂದು ವಿವಾದಿತ ಸ್ಥಳವಾಗಿದ್ದು ಅನ್ಯಕೋಮಿನ ಮುಖಂಡರನ್ನು ಕರೆದು ಸಭೆ ನಡೆಸಿ ಕಂಪೌಂಡ ಕಟ್ಟಬೇಕೆಂದು ಸಭೆಗೆ ತಿಳಿಸಿದರು. ಇದಕ್ಕೆ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಸಿಟ್ಟಿಗೆದ್ದು ನಮ್ಮ ಜಾಗದಲ್ಲಿ ನಾವು ಧಾರ್ಮಿಕ ಸ್ಥಳದಲ್ಲಿ ಕಂಪೌಂಡ ಕಟ್ಟಲು ಯಾರ ಒಪ್ಪಿಗೆ ಬೇಕು. ನಾವೇನು ಬೇರೆ ದೇಶದಲ್ಲಿದ್ದೇವೆಯಾ ಎಂದು ಪ್ರಶ್ನಿಸಿದ್ದಕ್ಕೆ ಅನ್ಯಕೋಮಿನ ಜನರು ಸಭೆಯನ್ನು ತಿರಸ್ಕರಿಸಿ ಸಭೆಯಿಂದ ಹೊರನಡೆದರು.ಕೊನೆಯಲ್ಲಿ ಮಾತುಕತೆಯಿಂದ ಒಂದು ತಾರ್ಕಿಕ ಅಂತ್ಯ ಕಾಣಬೇಕಾಗಿದ್ದ ಸಭೆಯು ಗದ್ದಲ ಗಲಾಟೆಯಲ್ಲಿ ಅಂತ್ಯಗೊಂಡಿತು.ತಹಸೀಲ್ದಾರ ರವಿಚಂದ್ರ ಎಸ್. ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ ಮುಂತಾದವರು ಇದ್ದರು.
Leave a Comment