ಭಟ್ಕಳ: ಕೋವಿಡ್ ಎರಡನೇ ಅಲೆ ಹೆಚ್ಚಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳದ ತಾಲೂಕಾಸ್ಪತ್ರೆಯಲ್ಲಿನ ಒಳರೋಗಿಗಳನ್ನು (ಕೋವಿಡ್ ರಹಿತ) ಶಾಸಕ ಸುನೀಲ ನಾಯ್ಕ ಹಾಗೂ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ನೇತ್ರತ್ವದಲ್ಲಿ ಇಲ್ಲಿನ ಆಸ್ಪತ್ರೆ ಎದುರಿನ ನೂತನ ಬಿ.ಸಿ.ಎಮ್. ಹಾಸ್ಟೆಲ್ ಗೆ ಸ್ಥಳಾಂತರಿಸಿ ಒಳರೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮನವರಿಕೆ ಮಾಡಲಾಯಿತು.
ಈ ಬಗ್ಗೆ ಮಾಧ್ಯಮಕ್ಕೆ ಶಾಸಕ ಸುನೀಲ ನಾಯ್ಕ ಪ್ರತಿಕ್ರಿಯಿಸಿದ್ದು ‘ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಹಾಗೂ ಆಸ್ಪತ್ರೆ ವೈದ್ಯರನ್ನೊಳಗೊಂಡಂತೆ ನನ್ನ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಒಳ ರೋಗಿಗಳಿಗೆ ಕೋವಿಡನಿಂದ ಯಾವುದೇ ಸಮಸ್ಯೆಯಾಗಬಾರದು ಹಾಗೂ ಕೋವಿಡ್ ಸೋಂಕಿತರಿಗೆ ಸೂಕ್ತ ಬೆಡ್, ಆಕ್ಸಿಜನ್ ಜೊತೆಗೆ ಕೋಣೆಯ ಅವಶ್ಯಕತೆ ಇದ್ದ ಹಿನ್ನೆಲೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷದ ಕೋವಿಡ್ ವೇಳೆ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಿತ್ತು. ಅದರ ಹಿನ್ನೆಲೆ ಈ ಬಾರಿ ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಕಾರಣ ಮೊದಲೇ (ಕೋವಿಡ ರಹಿತ) ಆಸ್ಪತ್ರೆಯ ಒಳರೋಗಿಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನೂತನ ಬಿ.ಸಿ.ಎಮ್. ಹಾಸ್ಟೆಲ್ ಗೆ ಸ್ಥಳಾಂತರಿಸಲಾಗಿದೆ ಎಂದರು.
‘ಈಗಾಗಲೇ ಬಿ.ಸಿ.ಎಮ್. ಹಾಸ್ಟೆಲ್ ನಲ್ಲಿ ಒಳರೋಗಿಗಳಿಗೆ 30 ಬೆಡ್ ಸಿದ್ದ ಪಡಿಸಲಾಗಿದ್ದು, ಈಗ ಸದ್ಯಕ್ಕೆ 21 ರೋಗಿಗಳನ್ನು ಸ್ಥಳಾಂತರಿಸಿ ಅವರಿಗೆ ಆಸ್ಪತ್ರೆಯಲ್ಲಿನ ಎಲ್ಲಾ ವ್ಯವಸ್ಥೆ ಉಪಚಾರವನ್ನು ಮುಂದುವರೆಸಲಾಗುವುದು. ಒಳರೋಗಿಗಳು ಈ ಬಗ್ಗೆ ಯಾವುದೇ ಭಯ ಗೊಂದಲಕ್ಕೆ ಒಳಪಡುವ ಅವಶ್ಯಕತೆಯಿಲ್ಲ. ಅನಿವಾರ್ಯವಿದ್ದರೆ ಇನ್ನು 30 ಬೆಡ್ ಗಳನ್ನು ಹಾಕುವ ವ್ಯವಸ್ಥೆ ಸಹ ಇದ್ದು ಒಳರೋಗಿಗಳಲ್ಲಿ ಗರ್ಭಿಣಿಯರು, ವಯಸ್ಸಾದವರು, ಅಫಘಾತಕ್ಕೊಳಗಾದವರು ಇದ್ದು ಅವರೆಲ್ಲರ ಕ್ಷೇಮ ಸಹ ಮುಖ್ಯವಾಗಿದೆ.
ಇನ್ನು ಕೋವಿಡ್ ಸೋಂಕಿತರಿಗೆ ಈ ಬಾರಿ ಹೆಚ್ಚಿನವರು ಆಕ್ಸಿಜನ್ ಅವಶ್ಯಕತೆ ಇದ್ದವರಾಗಿದ್ದು ಎರಡನೇ ಅಲೆಯೂ ಉಸಿರಾಟಕ್ಕೆ ಸಮಸ್ಯೆ ನೀಡುತ್ತಿರುವುದು ಬೆಂಗಳುರು, ಮೈಸೂರು, ತುಮಕೂರಿನಲ್ಲಿನ ಪ್ರಕರಣದಿಂದ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕೋವಿಡ್ ಸೋಂಕಿತರ ಆರೋಗ್ಯ ರಕ್ಷಣೆ ಅವರಿಗೆ ವ್ಯವಸ್ಥೆ ಕಲ್ಪಿಸುವ ದ್ರಷ್ಟಿಯಿಂದ ಒಳರೋಗಿಯ ಸ್ಥಳಾಂತರ ಅಗತ್ಯವಾಗಿದೆ.
ಭಟ್ಕಳದಲ್ಲಿ ಜನರು ಕೋವಿಡ್ ಬಗ್ಗೆ ಭಯ ಪಡುವ ಅವಶ್ಯಕತೆಯಿಲ್ಲ. ಕೋವಿಡ್ ನಿಯಮ ಪಾಲಿಸಿ ಜನರು ಮಾಸ್ಕ ಕಡ್ಡಾಯ ಮಾಡಿದ್ದಲ್ಲ ಯಾವುದೇ ಭಯಪಡುವ ಅವಶ್ಯಕತೆ ಇಲ್ಲ. ಏನಾದರು ಕೊವಿಡ್ ಹಿನ್ನೆಲೆ ತುರ್ತು ಸಂಧರ್ಬ, ಅಗತ್ಯ ವೇಳೆಯಲ್ಲಿ ಸಮಸ್ಯೆ ಉಂಟಾದಲ್ಲಿ ಪರಿಹಾರಕ್ಕೆ, ಸಹಾಯಕ್ಕೆ ನನ್ನ ಮೂರು ಆಪ್ತ ಕಾರ್ಯದರ್ಶಿಗಳು ಸಹಿತ ನನ್ನ ದೂರವಾಣಿ ನಂಬರ ಸಹ ಪ್ರಕಟಣೆ ಮೂಲಕ ತಿಳಿಸಲಾಗಿದ್ದು ಕರೆ ಮಾಡಬಹುದಾಗಿದೆ ಎಂದರು.
ನಂತರ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ‘ ಕೆಲ ತಿಂಗಳುಗಳ ಕಾಲ ಕೋವಿಡ್ ಪ್ರಕರಣ ಕಡಿಮೆಯಿದ್ದ ಹಿನ್ನೆಲೆ ಒಳರೋಗಿಗಳ ಸಂಖ್ಯೆ ಹೆಚ್ಚಿದ್ದವು. ಇದರಿಂದ ಕೇವಲ 16 ಬೆಡಗಳುಳ್ಳ ವಾರ್ಡನನ್ನು ಮಾತ್ರ ಮೀಸಲಿಡಲಾಗಿತ್ತು. ಈ ಹಿಂದೆ ಉಳಿದ ಸೇವೆಯನ್ನು ಬಂದ್ ಮಾಡಿ ಕೇವಲ ಕೋವಿಡ್ ಪ್ರಕರಣ ಮಾತ್ರ ನೋಡುತ್ತಿದ್ದೆವು. ಅದು ಈ ಬಾರಿ ಮಾಡಲು ಸಾಧ್ಯವಿಲ್ಲ. ಇವೆಲ್ಲವನ್ನು ಶಾಸಕರಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಈಗ ಎರಡನೇ ಅಲೆಯ ಮೀತಿ ವೇಗ ಹೆಚ್ಚಾಗಿದ್ದು ಸದ್ಯಕ್ಕೆ 11 ಪ್ರಕರಣಗಳಿದ್ದು, ದಿನೇ ದಿನೇ ಪ್ರಕರಜನರಿಕೆಯಾದಲ್ಲಿ ಆಸ್ಪತ್ರೆಗಳಿಗೆ ಬೆಡ್ ಗಳ ಬೇಡಿಕೆ ಇರಲಿದೆ. ಬೆಂಗಳುರಿನಲ್ಲಿ ಬೆಡ್ ಕೊರತೆಯಿಂದ ಶನಿವಾರದಂದು ತಡರಾತ್ರಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಬಂದಿದ್ದು ಎಲ್ಲದಕ್ಕು ನಾವು ಸಿದ್ದರಾಗಿರಬೇಕು. ಈ ಹಿನ್ನೆಲೆ ಇಲ್ಲಿನ ಒಳರೋಗಿಗಳನ್ನು ಹಾಸ್ಟೆಲ್ ಗೆ ಸ್ಥಳಾಂತರಿಸಲಾಗಿದೆ. ಸದ್ಯ ಅಲ್ಲಿ ಆಸ್ಪತ್ರೆಯ ಸ್ಟಾಪ್ ನರ್ಸಗಳು 24 ಗಂಟೆಯೂ ರೋಗಿಗಳನ್ನು ನೋಡಿಕೊಳ್ಳಲಿದ್ದು ವೈದ್ಯರು ಸಹ ಸಮಯಕ್ಕೆ ಸರಿಯಾಗಿ ರೋಗಿಗಳನ್ನು ಪರೀಕ್ಷಿಸಲಿದ್ದು, ಆಸ್ಪತ್ರೆಯ ಒಂದು ಅಂಗವಾಗಿ ಹಾಸ್ಟೆಲ್ ಕೆಲಸ ಮಾಡಲಿದೆ ಎಂದರು.
ನಂತರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಸ್ಥಳಾಂತರದ ಬಗ್ಗೆ ಮನವರಿಕೆ ಮಾಡಿ ರೋಗಿಗಳಿಗೆ ಮಾಹಿತಿ ನೀಡಿ ಒಟ್ಟು 21 ಒಳರೋಗಿಗಳನ್ನು ಬಿ.ಸಿ.ಎಮ್. ಹಾಸ್ಟೆಲ್ ಗೆ ಅಂಬ್ಯುಲೆನ್ ಮೂಲಕ ಸ್ಥಳಾಂತರಿಸಲಾಯಿತು.
ಇದೇ ವೇಳೆ ಶಾಸಕ ಸುನೀಲ ನಾಯ್ಕ,ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರು ಬಿ.ಸಿ.ಎಮ್. ಹಾಸ್ಟೆಲ್ ಗೆ ತೆರಳಿ ಒಳರೋಗಿಗಳನ್ನು ಆಹ್ವಾನಿಸಿದರು.
Leave a Comment