ಭಟ್ಕಳ: ಅಧಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತೆ ಗರ್ಭಿಣಿಯೋರ್ವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ ಭಟ್ಕಳ ಸಹಾಯಕ ಆಯುಕತೆ ಉಪಸ್ಥಿತಿಯಲ್ಲಿ ಅಪಾಯದಲ್ಲೂ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವ ಘಟನೆ ಬುಧವಾರ ತಡರಾತ್ರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಭಟ್ಕಳ ಮೂಲದ 27 ವರ್ಷದ ಕೋವಿಡ್ ಸೋಂಕಿತೆ ಗರ್ಭಿಣಿಯೋರ್ವರ ಡಿ ಡ್ರೆಮರ್ ಲೆವಲ್ ಅತಿ ಹೆಚ್ಚಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸೋಂಕಿತೆ 8.5 ತಿಂಗಳ ಗರ್ಭಿಣಿಯಾಗಿದ್ದರು. ಅಚಾನಕ್ಕಾಗಿ ಮಗುವಿನ ಹೊಕ್ಕುಳ ಬಳ್ಳಿ ಕಟ್ ಆಗಿ ರಕ್ತಸ್ರಾವ ಆರಂಭವಾಗಿದೆ. ಭಟ್ಕಳದ ಬ್ಲಡ್ ಯೂನಿಟ್ನ ಸಿಬ್ಬಂದಿ ಕೋವಿಡ್ ಸೋಂಕಿತಳಾಗಿ ಚಿಕಿತ್ಸೆ ಪಡೆಯುತ್ತಿದ್ದು ಭಟ್ಕಳ ಬ್ಲಡ್ ಸ್ಟೋರೇಜ್ನಲ್ಲಿ ಲಭ್ಯತೆ ಇದ್ದಿರಲಿಲ್ಲ.
ಮಹಿಳೆಯ ಗಂಭೀರತೆಯನ್ನು ಅರಿತ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ಜಿಲ್ಲಾಸ್ಪತ್ರೆಯ ಹೆರಿಗೆ ತಜ್ಞ ಡಾ.ಶಿವಾನಂದ ಕುಡ್ತರಕರ್ ಅವರಿಗೆ ರಾತ್ರಿ 1:15ಕ್ಕೆ ಕರೆ ಮಾಡಿದ್ದಾರೆ. ಮಹಿಳೆ ಗಂಭೀರ ಸ್ಥಿತಿಯನ್ನು ವಿವರಿಸಿದ್ದು, ತುರ್ತಾಗಿ ಶಸ್ತ್ರಚಿಕಿತ್ಸೆ ನೀಡುವುದು ಅನಿವಾರ್ಯ. ಆಕೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಎಂದು ಮನವಿ ಮಾಡಿದ್ದಾರೆ. ನೀವು ರಿಸ್ಕ್ ತೆಗೆದುಕೊಂಡು ಅಲ್ಲಿಯೆ ಶಸ್ತ್ರಚಿಕಿತ್ಸೆ ನಡೆಸಿ ಎಂದು ಡಾ.ಕುಡ್ತರಕರ್ ದಾಖಲಾತಿಗೆ ನಿರಾಕರಿಸಿದ್ದಾರೆ.
ಇಲ್ಲಿ ರಕ್ತದ ಪೊರೈಕೆ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸುವುದು ಕಷ್ಟ, ಆಪರೇಷನ್ ಮಾಡಿದರೂ, ಮಾಡದಿದ್ದರೂ ಮಹಿಳೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಹೇಗಾದರೂ ಮಾಡಿ ಮಹಿಳೆ ಮತ್ತು ಮಗುವನ್ನು ಉಳಿಸಲೇಬೇಕು ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್. ಅವರಿಗೆ ಡಾ.ಸವಿತಾ ಕಾಮತ್ ವಿಷಯ ತಿಳಿಸಿದ್ದಾರೆ.
ರಾತ್ರಿ 2 ಗಂಟೆಗೆ ಆಸ್ಪತ್ರೆಗೆ ಆಗಮಿಸಿದ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಶಸ್ತ್ರಚಿಕಿತ್ಸೆ ನಡೆಸುವಂತೆ ಸೂಚಿಸಿದ್ದಾರೆ. ಡಾ.ಲಕ್ಷ್ಮೀಶ, ಡಾ.ಶಂಸನೂರ್, ಶುಷ್ರೂಶಕಿಯರಾದ ಪವಿತ್ರಾ ಹಾಗೂ ಶಶಿಕಲಾ ಅವರು ರಾತ್ರಿ ಡಾ.ಸವಿತಾ ಕಾಮತ್ ಜೊತೆ ಇದ್ದು ಸಹಕಾರ ನೀಡಿದ್ದು, ಅಪಾಯದಲ್ಲಿದ್ದ ಮಹಿಳೆಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹೆಣ್ಣು ಮಗುವಿಗೆ ಜನ್ಮವಿತ್ತ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾಳೆ ಎನ್ನುವಷ್ಟರಲ್ಲಿ ಅರ್ಧಗಂಟೆಯ ಬಳಿಕ ಮತ್ತೆ ಅತ್ಯಧಿಕ ರಕ್ತ ಸ್ರಾವ ಅರಂಭವಾಗಿದೆ. ಇನ್ನು ಇಲ್ಲಿನ ಆಸ್ಪತ್ರೆಯಲ್ಲಿ ಸೌಲಭ್ಯದ ಕೊರತೆ ಇದ್ದು ಉಡುಪಿ ಮಂಗಳೂರು, ಕುಂದಾಪುರ ಆಸ್ಪತ್ರೆಗೂ ಬೆಡ್ಗಾಗಿ ಕರೆ ಮಾಡಿದರೂ ಪ್ರಯೋಜನವಾಗಿಲ್ಲ.
ಮತ್ತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಮಹಿಳೆಯ ಅಪಾಯದ ಸ್ಥಿತಿಯ ಕುರಿತು ವಿವರಿಸಿ ಅವರನ್ನು ದಾಖಲಿಸಿಕೊಂಡು ತಾಯಿ ಮಗುವಿನ ಜೀವ ಕಾಪಾಡುವಂತೆ ಡಾ. ಸವಿತಾ ಮನವಿ ಮಾಡಿದ್ದಾರೆ. ಅಂತೂ ನಸುಕಿನ 3 ಗಂಟೆಗೆ ತನ್ನ ಆಸ್ಪತ್ರೆಯ ಶುಷ್ರೂಶಕಿಯರಾದ ಶಶಿಕಲಾ ಹಾಗೂ ಶ್ರೀಲತಾರೊಂದಿಗೆ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದೆ.
ಆದರೆ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ರಾತ್ರಿಯೇ ಕಾರವಾರದ ಜಿಲ್ಲಾಸ್ಪತ್ರೆಯ ವೈದ್ಯರು ಮಹಿಳೆಯನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದರೆ ಇಂತಹ ಸ್ಥಿತಿ ಉದ್ಬವವಾಗುತ್ತಿರಲಿಲ್ಲ ಎಂದು ಮಹಿಳೆಯ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ
Leave a Comment