ಭಟ್ಕಳ: ಭಟ್ಕಳ ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಸೆಂಟರನಲ್ಲಿ ರೋಗಿಗಳಿಗೆ ಸಿಗಬೇಕಾದ ವ್ಯವಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹಿನ್ನೆಲೆ ಇದನ್ನು ಮನಗಂಡು ಶಾಸಕ ಸುನೀಲ ನಾಯ್ಕ ಭಟ್ಕಳ ಹೊನ್ನಾವರ ಎರಡು ಸರಕಾರಿ ಆಸ್ಪತ್ರೆಯಲ್ಲಿ ಮತ್ತೆ ಡಯಾಲಿಸಿಸ್ ವ್ಯವಸ್ಥೆ ಸಿಗಬೇಕೆಂಬ ಉದ್ದೇಶದಿಂದ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ಮೊದಲ ಹಂತದಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಗೆ 50 ಸಾವಿರ ರೂ. ಚೆಕನ್ನು ಭಟ್ಕಳ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರಿಗೆ ಹಸ್ತಾಂತರಿಸಲಾಯಿತು.
ಸದ್ಯ ಡಾ. ಬಿ.ಆರ್.ಶೆಟ್ಟಿ ಅಂಗ ಸಂಸ್ಥೆ ಅವರು ರಾಜ್ಯದಾದ್ಯಂತ ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅದರಂತೆ ಭಟ್ಕಳ ಹಾಗೂ ಹೊನ್ನಾವರ ಸರಕಾರಿ ಆಸ್ಪತ್ರೆಯೂ ಒಳಪಟ್ಟಿತ್ತು. ಸ್ಥಗಿತಗೊಂಡಿದ್ದ ಭಟ್ಕಳ ಹೊನ್ನಾವರದಲ್ಲಿ ಇದರಿಂದ ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ರೋಗಿಗಳಿಗೆ ಸಮಸ್ಯೆಯಾಗುತ್ತಿತ್ತು. ಇವೆಲ್ಲವನ್ನು ಮನಗಂಡು ಶಾಸಕ ಸುನೀಲ ನಾಯ್ಕ ರಾಜ್ಯ ಸರಕಾರ ಹಾಗೂ ಬಿ.ಆರ್.ಶೆಟ್ಟಿ ಸಂಸ್ಥೆ ನಡುವಿನ ತೀರ್ಮಾನ ಆಗುವವರೆಗೂ ನಿರಂತರವಾಗಿ ವೈಯಕ್ತಿಕ ಧನ ಸಹಾಯ ನೀಡುವುದಾಗಿ ಮೊದಲ ಹಂತದಲ್ಲಿ ಸೋಮವಾರದಂದು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಭಟ್ಕಳ ಸರಕಾರಿ ಆಸ್ಪತ್ರೆಗೆ 50 ಸಾವಿರ ರೂ. ಚೆಕ್ ನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಶಾಸಕ ಸುನೀಲ ನಾಯ್ಕ ‘ಡಯಾಲಿಸಿಸ್ ಗೆ ಒಳಪಡುವ ರೋಗಿಗಳ ಸಂಕಷ್ಟವನ್ನು ನಾನು ನೋಡಿದ್ದೇನೆ. ಸದ್ಯ ಭಟ್ಕಳ ಹೊನ್ನಾವರ ಡಯಾಲಿಸಿಸ್ ಕೇಂದ್ರವೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು ಇದು ರೋಗಿಗಳಿಗೆ ಸಮಸ್ಯೆಯಾಗಬಾರದು ಎಂಬ ದೃಷ್ಠಿಯಿಂದ ಈ ಸಹಾಯಕ್ಕೆ ಮುಂದಾಗಿದ್ದೇನೆ. ಇದು ನನ್ನ ಕರ್ತವ್ಯವೆಂದು ಅರಿತು ಮಾಡುತ್ತಿದ್ದೇನೆ. ಈ ಸೇವೆಯೂ ನಿರಂತರವಾಗಿ ಮುಂದುವರೆಯಲಿದೆ. ಕ್ಷೇತ್ರದ ಯಾವುದೇ ಡಯಾಲಿಸಿಸ್ ರೋಗಿಗೆ ಈ ಸೇವೆ ನಿಲ್ಲಬಾರದು. ಮುಂದಿನ ದಿನದಲ್ಲಿಯೂ ಸಹ ವ್ಯವಸ್ಥೆ ಮುಂದುವರೆಯಲು ಹಣ ಸಹಾಯ ಮಾಡಲಿದ್ದೇನೆ ಎಂದರು.
ಭಟ್ಕಳ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ ’ಈ ಹಿಂದಿನಿಂದಲೂ ಬಿ.ಆರ್.ಶೆಟ್ಟಿ ಸಂಸ್ಥೆಯಿಂದ ಭಟ್ಕಳ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ವ್ಯವಸ್ಥೆ, ಉಪಕರಣ ಒದಗಿಸಿ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಸದ್ಯಕ್ಕೆ ಅದಕ್ಕೆ ಬೇಕಾದ ಕೆಲ ವಸ್ತುಗಳ ಖರೀದಿ ಆಸ್ಪತ್ರೆಗಳ ಪಂಡ್ನಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸಂಬಳ ಇನ್ನು ತನಕವಾಗಿಲ್ಲ. ಮುಂದಿನ ಹಂತದಲ್ಲಿ ಸರಕಾರದ ತೀರ್ಮಾನದ ತನಕ ರೋಗಿಗಳ ಹಿತದೃಷ್ಟಿಯಿಂದ ಶಾಸಕರು ಇದರ ವೆಚ್ಚ ಭರಿಸಲು ಮುಂದಾಗಿರುವುದು ಸಂತಸವಾಗಿದೆ. ಎಂದರು.
ಇದೇ ಸಂಧರ್ಬಧಲ್ಲಿ ಹೊನ್ನಾವರಕ್ಕೆ ಆಪ್ತ ಕಾರ್ಯದರ್ಶಿಯ ಮೂಲಕ 50 ರೂ. ಚೆಕ್ನ್ನು ತಲುಪಿಸಲಾಯಿತು.ಈ ಸಂಧರ್ಬದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ನಿಕಟಪೂರ್ವ ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ನಾಯ್ಕ, ಬಿಜೆಪಿ ಪ್ರಮುಖ ದಿನೇಶ ನಾಯ್ಕ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ವಿವೇಕ ನಾಯ್ಕ, ಪಾಂಡು ನಾಯ್ಕ ಇದ್ದರು.
Leave a Comment