ಹೊನ್ನಾವರ : ಕೇಂದ್ರದ ಮೋದಿ ಸರಕಾರ ಮತ್ತು ರಾಜ್ಯದ ಯಡಿಯೂರಪ್ಪ ಸರಕಾರ ಕರೋನಾದಿಂದ ಬಳಲುತ್ತಿರುವ ಜನರ ಸಂಕಷ್ಟಗಳಿಗೆ ಸ್ಪಂದಿಸದೇ ಬರೇ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ವಂಚಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಸಹಾಯ ಹಸ್ತ ಕಾರ್ಯಕ್ರಮದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಆರೋಪಿಸಿದ್ದಾರೆ. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾ ಭವನದಲ್ಲಿ ಏರ್ಪಡಿಸಿದ “ಸಹಾಯ ಹಸ್ತ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕೇವಲ ಸುಳ್ಳಿನಿಂದಲೇ ಹುಟ್ಟಿಕೊಂಡ ಬಿ.ಜೆ.ಪಿ. ಪಕ್ಷದಿಂದ ಬಡವರ ದುಖಃವನ್ನು ದೂರ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಡವರ ಕಣ್ಣಿರೊರೆಸುವ ಶಕ್ತಿ ಇದೆ ಎಂದು ಹರಿಪ್ರಸಾದ ನುಡಿದರು.
ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಮಾತನಾಡಿ ನಾವು ಕರೋನಾದಿಂದ ನಷ್ಟ ಅನುಭವಿಸಿದ ಮನೆಗಳಿಗೆ ತೆರಳಿದಾಗ ಬಿ.ಜೆ.ಪಿ. ಸರಕಾರದ ನಿಲುವಿನ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದರು. ಜನರ ಕಷ್ಟಕ್ಕೆ ಸ್ಪಂದಿಸದ ಸರಕಾರ ಕರೋನಾ ಸಂದರ್ಭದಲ್ಲಿ ವೈದ್ಯಕೀಯ ಕಿಟ್ ವಿತರಿಸುವಲ್ಲಿ ರಾಜ್ಯ ಸರಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದು, ಕರ್ನಾಟಕದ ದುರಂತ ಎಂದರು. ಇಂತಹ ಬೇಜವಾಬ್ದಾರಿ ಬಿ.ಜೆ.ಪಿ. ಸರಕಾರವನ್ನು ಜನ ಕಿತ್ತೋಗೆಯುವ ದಿನ ದೂರವಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀಮಣ್ಣ ನಾಯ್ಕ ಮಾತನಾಡಿ ಕರೋನಾ ಮೊದಲನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಪದೇ ಪದೇ ಎಚ್ಚರಿಸಿದರೂ ಮೋದಿ ಸರಕಾರ ರಾಹುಲ್ ಗಾಂಧಿಯವರನ್ನು ಅಪಹಾಸ್ಯಕ್ಕಿಡು ಮಾಡಿತ್ತು. ಆದರೆ ಅಂದು ರಾಹುಲ್ ಗಾಂಧಿಯವರ ಮಾತು ಕೇಂದ್ರ ಸರಕಾರ ಪರಿಗಣಿಸಿದ್ದರೆ ದೇಶದಲ್ಲಿ ಕರೋನಾ ಇಷ್ಟೊಂದು ವ್ಯಾಪಕವಾಗಿ ಬೆಳೆಯುತ್ತಿರಲಿಲ್ಲ ಎಂದರು. ಆದರೂ ಕಾಂಗ್ರೆಸ್ ಪಕ್ಷ ದೇಶದ ಪ್ರತಿ ಮನೆ ಮನೆಗೆ ತೆರಳಿ ಜನರ ನೋವುಗಳಿಗೆ ಸ್ಪಂಧಿಸುತ್ತಿದೆ ಎಂದರು. ಕೆ.ಪಿ.ಸಿ.ಸಿ ವೀಕ್ಷಕರಾದ ವಿ.ಎಸ್. ಆರಾಧ್ಯ, ನವೀನಚಂದ್ರ ಶೆಟ್ಟಿ, ಜಿ.ಎ. ಬಾವ ಮಾತನಾಡಿದರು. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮಜೀದ್ ಶೇಖ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಬಸವರಾಜ ದೊಡ್ಡಮನಿ, ಜಿಲ್ಲಾ ಕಾಂಗ್ರೆಸ್ ವೀಕ್ಷಕ, ಹೊನ್ನಪ್ಪ ನಾಯ್ಕ, ನಾಗೇಶ ನಾಯ್ಕ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ ಉಪಸ್ಥಿತರಿದ್ದರು.
Leave a Comment