ನವದೆಹಲಿ: ರಾಜಸ್ಥಾನ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ
ನಡೆದ ಮೂರು ಪತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು 68 ಮಂದಿ
ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದಲ್ಲಿ ಸುರಿದ ಭಾರೀ
ಮಳೆಯ ಸಂದರ್ಭದಲ್ಲಿ ಸಿಡಿಲಿಗೆ 41 ಮಂದಿ ಬಲಿಯಾಗಿದ್ದಾರೆ.
ಮಧ್ಯಪ್ರದೇಶದಲ್ಲಿ 7 ಮಂದಿ ಸಿಡಿಲು ಬಡಿದು ಸಾವನ್ನಪ್ಪಿರುವುದು
ವರದಿಯಾಗಿದೆ. ರಾಜಸ್ಥಾನದಲ್ಲಿ 7 ಮಕ್ಕಳು ಸೇರಿದಂತೆ 20 ಮಂದಿ
ಸಿಡಿಲಿಗೆ ಮೃತರಾಗಿದ್ದಾರೆ. ರಾಜಸ್ಥಾನದ ಕೋಟಾ ಮತ್ತು ದೋಲ್ಪುರ್
ಜಿಲ್ಲೆಗಳಲ್ಲಿ ಸಿಡಿಲು ಬಡಿದು ಮಕ್ಕಳು ಸಾವನ್ನಪ್ಪಿದ್ದಾರೆ. ರಾಜಸ್ಥಾನದ
ಜೈಪುರ ಸೇರಿದಂತೆ ಹಲವು ಪಟ್ಟಣಗಳಲ್ಲಿ ಮಿಂಚಿನ ಆಘಾತಕ್ಕೆ
ಜನರು ಸಾವನ್ನಪ್ಪಿದ್ದು, ಜೈಪುರದಲ್ಲಿ 11 ಮಂದಿ, ದೋಲ್ಪುರದಲ್ಲಿ
3, ಕೋಟಾದಲ್ಲಿ 4, ಜಲ್ವಾರ್, ಬರಾನ್ನಲ್ಲಿ ತಲಾ ಒಬ್ಬರು ಮಿಂಚಿನ
ಆಘಾತಕ್ಕೆ ಬಲಿಯಾಗಿದ್ದಾರೆ.
ಜೈಪುರ ಸಮೀಪದ 12ನೇ ಶತಮಾನದ ಅಮೀರ್ ಪ್ಯಾಲೆಸ್ನ
ವಾಚ್ಟವರ್ ಮೇಲೆ ಮಳೆಯಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಡಿಲು
ಬಡಿದ ಪರಿಣಾಮ 11 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರು
ಸಿಡಿಲಿನ ಶಬ್ಧಕ್ಕೆ ಭಯಭೀತರಾಗಿ ಟವರ್ ಮೇಲಿನಿಂದ ಬಿದ್ದು
ಗಾಯಗೊಂಡಿದ್ದಾರೆ. ಒಟ್ಟು 17 ಮಂದಿ ಗಾಯಗೊಂಡಿದ್ದು,
ಗಾಯಗೊಂಡವರನ್ನು ಜೈಪುರದ ಸವಾಯ್ ಮನ್ಸಿಂಗ್ ಆಸ್ಪತ್ರೆಗೆ
ದಾಖಲಿಸಲಾಗಿದೆ.
ರಾಜಸ್ಥಾನದಲ್ಲಿ ನಡೆದ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೃತರ ಕುಟುಂಬದ ಸದಸ್ಯರಿಗೆ
ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಘಟನೆ ಕುರಿತು
ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ
ಕುರಿತು ಟ್ವಿಟ್ ಮಾಡಿರುವ ಅವರು, ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ
ಮಿಂಚಿನಿಂದಾಗಿ ಅನೇಕರು ಪ್ರಾಣ ಕಳೆದುಕೊಂಡಿರುವುದು ತುಂಬ
ದುಃಖಕರವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
Leave a Comment