ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿಯಾದ ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಸಿದ್ದಾಪುರದ ಯುವಕನೋರ್ವ ಆಯ್ಕೆಯಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾನೆ.ಸಿದ್ದಾಪುರ ತಾಲೂಕಿನ ಕ್ಯಾದಗಿ ಸಮೀಪದ ಸಸಿಗುಳಿಯ ದಿನೇಶ ವಸಂತ ಹೆಗಡೆ, ದಿ. ವಸಂತ ಹೆಗಡೆ ಹಾಗೂ ಗಂಗಾ ದಂಪತಿಗಳ ಪುತ್ರರಾಗಿ ಜಿಲ್ಲೆಗೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಪ್ರಸ್ತುತ ಅಮೆರಿಕದ ಹ೦ಟ್ಸ್ ವಿಲ್ಲೆ ಯಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ ವಸಂತ ಹೆಗಡೆ, ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಆಯ್ಕೆಯಾಗಿ ಭಾರತದ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ.ಈ ಪ್ರಶಸ್ತಿಗೆ ವಿಜ್ಞಾನದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ ಹೆಗಡೆ ಹಾಗೂ ಕ್ಯಾಥರೀನ್ ಡೇವಿಡ್ಸನ್ ಅವರ ಜೊತೆ ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆ ಆಯ್ಕೆಯಾಗಿದೆ.
ಈ ಸಂಶೋಧನೆಯನ್ನು (UAH) ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FI-NESST) ಅನುದಾನದಲ್ಲಿ ನಾಸಾ ಪ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.ಈ ಪ್ರಶಸ್ತಿಗೆ ಆಯ್ಕೆಯಾದ ಈ ಇಬ್ಬರು ವಿದ್ಯಾರ್ಥಿಗಳಿಗೂ ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಲು ತಲಾ 1,35,00,000 ಅಮಿರಿಕನ್ ಡಾಲರ್ ಸ್ಟೈಫಂಡ್ ನೀಡಲಾಗುವುದು ಎಂದು ವಿಶ್ವವಿದ್ಯಾನಿಲಯದ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಬಾಹ್ಯಾಕಾಶ ವಿಜ್ಞಾನದ ವಿಶೇಷ ಪ್ರಾಧ್ಯಾಪಕ ಡಾ.ನಿಕೊಲಾಯ್ ಪೋಗೊರೆಲೋವ್ ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಅನಿಶ್ಚಿತತೆಯಿಂದ ಕೂಡಿರುವ ಬಾಹ್ಯಾಕಾಶ ಹವಾಮಾನವನ್ನು ಅಭ್ಯಾಸ ಮಾಡುವ ವಿಧಾನವನ್ನು ಸಂಶೋದನಾ ವಿಷಯವಾಗಿ ಆಯ್ದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ.
ಈ ಜೊತೆಗೆ ಸೌರ ಮಾರುತದ ಗುಣಲಕ್ಷಣಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ದಿನೇಶ್, ಪ್ಲಾಸ್ಮಾ ಸ್ಥಿತಿಯಲ್ಲಿ ಪ್ರೋಟಾನ್ಗಳು
ಮತ್ತು ಎಲೆಕ್ಟ್ರಾನ್ಗಳನ್ನು ಒಳಗೊಂಡಿರುವ ನಿರಂತರ ಹರಿವು ಸೂರ್ಯನಿಂದ ಹೊರಕ್ಕೆ ಹೇಗೆ ಹರಿಯುತ್ತದೆ ಮತ್ತು ತನ್ನೊಳಗಿನ ಸೌರ ಕಾಂತೀಯ ಕ್ಷೇತ್ರವನ್ನು ಅದರೊಂದಿಗೆ ಹೇಗೆ ಒಯ್ಯುತ್ತದೆ ಎಂಬ ವಿಷಯದ ಬಗ್ಗೆಯೂ ಅಧ್ಯಯನ ನಡೆಸಿದ್ದಾರೆ.ದಿನೇಶ ಹೆಗಡೆ ಅವರು ಸಮಯ ಅವಲಂಬಿತ, ಡೇಟಾಚಾಲಿತ ಮತ್ತು ಸೌರ ವಾತಾವರಣದ ಸುಮಾರು ನೈಜ-ಸಮಯದ ಸಂಖ್ಯಾತ್ಮಕ ಮಾದರಿಗಳನ್ನು ಮತ್ತು ಡಾ. ಪೋಗೊರೆಲೋವ್ ಅವರ ಸಂಶೋಧನಾ ಗುಂಪಿನಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಸಂಖ್ಯಾತ್ಮಕ ಮಾದರಿಗಳನ್ನು, ಪಾರ್ಕರ್ ಸೋಲಾರ್ ಪ್ರೋ ಬ್ (ಪಿಎಸ್ಪಿ) ಸೇರಿದಂತೆ ನಾಸಾ ಕಾರ್ಯಾಚರಣೆಗಳ ದತ್ತಾಂಶವನ್ನು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದ ವಾಟೆಹಕ್ಲುವಿನಲ್ಲಿ ಅವರ ಬಂಧು ಆಪ್ತೇಷ್ಟರಿಗೆ ಕರೆ ಮಾಡಿ ಸಂತಸ ಸುದ್ಧಿ ಹಂಚಿಕೊಂಡಿದ್ದಾರೆ. ಅಧಿಸೂಚನೆಯ ಗಡುವು ಮುಗಿದಿತ್ತು. ಹೀಗಾಗಿ ನಮ್ಮ ಯೋಜನೆಯನ್ನು ಆಯ್ಕೆ ಮಾಡಲಾಗುವುದಿಲ್ಲ ಎಂದೇ ನಾವು ಭಾವಿಸಿದ್ದೆವು. ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ನಾನು ಆಫರ್ ಲೆಟರ್ನ್ನು ಎರಡು ಬಾರಿ ಪರಿಶೀಲಿಸಿದೆ. ಸ್ವಲ್ಪ ಸಮಯದ ನಂತರ, ನನ್ನ ಮೇಲ್ವಿಚಾರಕರಿಂದ ನನಗೆ ಇಮೇಲ್ ಬಂದಿದ್ದು ಅದು ದೃಢಪಟ್ಟಿದೆ.
ತಕ್ಷಣವೇ ನಾನು ಭಾರತದಲ್ಲಿರುವ ನನ್ನ ಸಹೋದರಿಗೆ ಈ ಶುಭ ಸುದ್ದಿಯನ್ನು ಹಂಚಿಕೊಳ್ಳಲು ಕರೆ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.ದಿನೇಶ ಹೆಗಡೆ ಪ್ರಾಥಮಿಕ ಶಿಕ್ಷಣವನ್ನು ಸಿದ್ಧಾಪುರ ತಾಲೂಕಿನಲ್ಲಿ ಮುಗಿಸಿ, ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮುಗಿಸಿ, ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತನ್ನ ಎಂಎಸ್ಸಿ ಪದವಿ ಪೂರೈಸಿ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೇರಿಕಾಕ್ಕೆ ತೆರಳಿದ್ದರು. ಈಗ ಅಮೇರಿಕಾದ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿ ಜೊತೆಗೆ 1.20ಕೋಟಿ ರೂ.ಗಳ ಬಹುಮಾನವನ್ನೂ ಗೆಲ್ಲುವ ಮೂಲಕ ಭಾರತದ ಕೀರ್ತಿಪತಾಕೆ ಹಾರಿಸಿದ್ದಾರೆ.
Leave a Comment