ಭಟ್ಕಳ:ತಾಲೂಕಿನ ಗಾಂಧಿನಗರ ಗ್ರಾಮದ ನಿವಾಸಿಯೋರ್ವರು ತಮ್ಮ ಅಂಗಡಿಯ ರಿಪೇರಿ ಮಾಡುವ ವೇಳೆ ಸ್ಥಳಕ್ಕೆ ಬಂದ ಅರಣ್ಯ ಇಲಾಖಾಧಿಕಾರಿಗಳು ತಡೆಯೊಡ್ಡಿದ ಕಾರಣ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಮಂಗಳವಾರ ನಡೆದಿದೆ.
ಗಾಂಧಿನಗರ ಸ್ಥಳೀಯ ನಿವಾಸಿ ಶನಿಯಾರ ನಾಯ್ಕ ಎಂಬವರು ಕಳೆದ 35 ವರ್ಷಗಳಿಂದ ಈ ಅಂಗಡಿಯನ್ನು ನಡೆಸುತ್ತಾ ಬಂದಿದ್ದು, ಅವರ ಸಾವಿನ ಬಳಿಕ ಈ ಅಂಗಡಿ ಅವರ ಪತ್ನಿಯ ಹೆಸರಿನಲ್ಲಿತ್ತು. ಹಲವು ದಿನಗಳಿಂದ ಮುಚ್ಚಿದ್ದ ಅಂಗಡಿಯ ಮೇಲ್ಛಾವಣಿ ರಿಪೇರಿಗೆಂದು ಮಂಗಳವಾರ ಶೀಟು ಹಾಕಲು ಅಂಗಡಿ ಮಾಲಕರು ಮುಂದಾಗಿದ್ದಾರೆ.
ಈ ವೇಳೆ ಯಾರೋ ಕೊಟ್ಟ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಆಗಮಿಸಿದ ಭಟ್ಕಳ ವಲಯ ಆರ್ಎಫ್ಒ ಹಾಗೂ ಸಿಬ್ಬಂದಿ, ಅಂಗಡಿ ಜಾಗ ಅರಣ್ಯ ಭೂಮಿಗೆ ಸೇರಿದ್ದು ಎಂದು ಹೇಳಿ ಅಂಗಡಿಗೆ ಹಾಕಲಾಗಿದ್ದ ಶೀಟನಿ ತೆರವಿಗೆ ಮುಂದಾಗಿದ್ದು ಅರಣ್ಯ ಅಧಿಕಾರಿಗಳು ನಡೆಸುತ್ತಿದ್ದ ಕೆಲಸವನ್ನು ವಿಡಿಯೋ ಮಾಡುತ್ತಿದ್ದ ಸ್ಥಳೀಯರಿಗೆ ಏಕವಚನದಿಂದ ದಭಾಯಿಸಿದ್ದಲ್ಲದೇ, ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ವಾಗ್ವಾದಕ್ಕಿಳಿದಿದ್ದಾರೆ.
ಸ್ಥಳೀಯರು ಈ ಬಗ್ಗೆ ದೂರು ನೀಡೋದಾಗಿ ಹೇಳಿದಾಗ ಏನ್ ಮಾಡ್ಕೋತ್ತೀರಾ ಮಾಡ್ಕೊಳ್ಳಿ ಹೋಗಿ ಎಂದು ಅಧಿಕಾರಿ ಆವಾಜ್ ಹಾಕಿದ್ದಾರೆ. ಘಟನೆಯ ಮಾಹಿತಿ ಪಡೆದು ದಿ. ಶನಿಯಾರ ನಾಯ್ಕ ಅವರ ಪತ್ನಿ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಹರಿದಾಡುತ್ತಿದ್ದು, ಅಧಿಕಾರಿಗಳು ದರ್ಪ ತೋರಿಸುತ್ತಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Leave a Comment