ಹೊನ್ನಾವರ: ಸಾವಿನ ಬಾಗಿಲಲ್ಲಿ ಜೀವ ಪಣಕ್ಕಿಟ್ಟು ಇನ್ನೊಂದು ಜೀವವನ್ನು ರಕ್ಷಿಸಿ ಗೆಲ್ಲುವ ರೋಮಾಂಚನಕಾರಿ ಕ್ಷಣ ಮೀನುಗಾರರಿಗೆ ಆಗಾಗ ವೇದ್ಯವಾಗುತ್ತಿರುತ್ತದೆ. ಇಂತಹ ಒಂದು ಸನ್ನಿವೇಶ ಸೋಮವಾರ ಸಾಯಂಕಾಲ 6:30ರ ವೇಳೆಗೆ ನಸು ಸಂಜೆಯ ಮಬ್ಬು ಗತ್ತಲಿನಲ್ಲಿ ಶರಾವತಿ ಸೇತುವೆಯ ಕೆಳಗಡೆ ನಡೆಯಿತು.
ಶರಾವತಿ ಸೇತುವೆ ಮೇಲೆ ಕಾರು ಮತ್ತು ಬೈಕ್ ಅಪಘಾತಕ್ಕೀಡಾಗಿ ಬೈಕ್ನಲ್ಲಿದ್ದ ಅಕ್ಷಯ ತಾಂಡೇಲ್ ಮತ್ತು ಸುನೀಲ್ ಕುಡ್ತಾಲ್ಕರ್ ಸೇತುವೆಯಿಂದ ನದಿಗೆ ಬಿದ್ದಿದ್ದರು. ಕತ್ತಲು ಆವರಿಸುತ್ತಿದ್ದ ಕ್ಷಣದಲ್ಲಿ ನೀರಿಗೆ ಬಿದ್ದ ಯುವಕರ ರಕ್ಷಣೆಗೆ ಸಾವಿನೊಂದಿಗೆ ಹೋರಾಡಿ ಕೊನೆಗೂ ಶರಾವತಿ ಸಾಹಸಿಗಳಾದ ವೆಂಕಟೇಶ ನಾರಾಯಣ ಮೇಸ್ತ ಹಾಗೂ ಹರೀಶ ವಾಮನ ಮೇಸ್ತನದಿಗೆ ಬಿದ್ದ ಇಬ್ಬರ ಪೈಕಿ ಒಬ್ಬನ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾದರು.
ಸಾಹಸಿಗಳ ಪ್ರಕಾರ ಎಂದಿನಂತೆ ಮಿತ್ರರಿಬ್ಬರು ಸೋಮವಾರ ಸಾಯಂಕಾಲ ಶರಾವತಿಯಲ್ಲಿ ಬಲೆ ಹರಡಿ ಮೀನು ಶಿಕಾರಿಗಾಗಿ ಕುಳಿತಿದ್ದರು. ಸೇತುವೆ ಬಳಿ ಏನೋ ಬಿದ್ದಂತೆ ಶಬ್ದವಾಯಿತು. ಇದ್ದಕ್ಕಿದ್ದಂತೆ ಸೇತುವೆಯ ಮೇಲೆ ಆಕ್ರಂದನ
ಕೇಳಿ ಬಂತು. ತಕ್ಷಣ ಬಲೆ ಎತ್ತಿ ದೋಣಿಗೆ ಹಾಕಿಕೊ೦ಡು ಸೇತುವೆ ಪಿಲ್ಲರ್ ಕಡೆ ನಡೆದವು. ಸೇತುವೆಯ ಫಿಲ್ಲರ್, ಸನಿಹ ವ್ಯಕ್ತಿಯೊಬ್ಬನ ದೇಹ
ತೇಲುತ್ತಿರುವುದು ಅಸ್ಪಷ್ಟವಾಗಿ ಕಂಡು ಬಂತು. ಅದು ಅಪಾಯದಸ್ಥಳವಾಗಿತ್ತು. ಇಳಿತ ಇದ್ದಿದ್ದರಿಂದ ನೀರು ವೇಗವಾಗಿ ಸಮುದ್ರದ ಕಡೆಗೆ ಹೋಗುತ್ತಿತ್ತು. ಅಂತಹ ಸಮಯದಲ್ಲಿ ಫಿಲ್ಲರ್ ಸಮೀಪ ಹೋಗುವದೇ ಅಪಾಯ. ಆದರೂ ಜಾಗೃತವಾಗಿ ದೋಣಿಯನ್ನು ಕಂಬದ ಬಳಿ ತಂದು ಕಂಬಕ್ಕೆ ಇದ್ದ ರೋಪ್ ಒಂದನ್ನು ಹಿಡಿದು ತೇಲುತ್ತಿದ್ದ ಸುನೀಲ್ ಕುಡ್ತಾಲಕರ್ನನ್ನು ರಕ್ಷಿಸಿದೆವು. ಇದು ಸಾಹಸ ಅಲ್ಲ ನಮ್ಮ ಕರ್ತವ್ಯ. ಹೀಗೆ ಹಲವಾರು ಬಾರಿ ನಾವು ನೀರಿಗೆ ಬಿದ್ದ ಜನರ ಜೀವವನ್ನು, ಜಾನುವಾರುಗಳನ್ನು ರಕ್ಷಿಸಿದ್ದೇವೆ.
ದೋಣಿಯಲ್ಲಿ ನಮ್ಮೊಂದಿಗೆ ವೆಂಕಟೇಶನ ಚಿಕ್ಕ ಮಗನಿದ್ದ, ದೋಣಿಯಲ್ಲಿದ್ದ ಮಗನ ರಕ್ಷಣೆ ದೇವರಿಗೆ ಬಿಟ್ಟು ನಾವು ಕಣ್ಣೆದುರಿಗೆ ಅಪಾಯಕ್ಕೆ ಸಿಲುಕಿದ ಜೀವಗಳ ರಕ್ಷಣೆಗೆ ಧಾವಿಸಿದೆವು. ನಮಗೆ ಜಾತಿ, ಧರ್ಮ ಮುಖ್ಯವಲ್ಲ.
ಮಾನವ ಧರ್ಮ ಮುಖ್ಯ ಎಂದು ಹೇಳುವ ಸಾಹಸಿ ಹುಡುಗರು ತಾಲೂಕಿನ ನೆರಹಾವಳಿ ಸಮಯದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಹೋಗಿ ಹಡಿನಬಾಳ, ಗುಂಡಿಬೈಲ್, ನಾಥಗೇರಿ ಭಾಗದಲ್ಲಿ ಅಪಾಯಕ್ಕೀಡಾದ ಜನರನ್ನು ಮೀನುಗಾರ ಮುಖಂಡ ಉಮೇಶ್ ಮೇಸ್ತಾ ನೇತೃತ್ವದಲ್ಲಿ ದಂಡೆಗೆ ತಂದು ಸಾಹಸ ಮೆರೆದಿದ್ದರು.
ಹಲವು ಶವಗಳನ್ನು ನೀರಿನಿಂದ ಎತ್ತಿ ದಡಕ್ಕೆ ತಂದಿದ್ದಾರೆ. ಅವರ ಸಾಹಸವನ್ನು ಜಿಲ್ಲಾಡಳಿತ ಗುರುತಿಸಬೇಕು. ಜೀವ ರಕ್ಷಣೆ ಮಾಡಿದ ಇಬ್ಬರು ಯುವಕರನ್ನು ಜಿಲ್ಲಾಡಳಿತ ಗೌರವಿಸಲಿ ಎಂದು ಮೀನುಗಾರ ಮುಖಂಡ ಗಣಪತಿ ಮೇಸ್ತ, ತುಳಸಿ ನಗರ ಆಗ್ರಹಿಸಿದ್ದಾರೆ.
Leave a Comment