ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸೂಳೆ ಮುರ್ಕಿ ಬಳಿ ರಾ.ಹೆ. 69ರಲ್ಲಿ ಅಪಘಾತ ಮಾಡಿದ ಆರೋಪಿ ಟೆಂಪೋ ಚಾಲಕ ಕೆಳಗಿನಮೂಡ್ಕಣಿ ಗ್ರಾಮದ, ಶಾಂತಾ ಡುಮ್ಮಿಂಗ್ ಗೊನ್ಸಾಲ್ವಿಸ್ ಎಂಬುವವನಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದಯವರು 2 ವರ್ಷ ಜೈಲು ಶಿಕ್ಷೆ, 2,500 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿಯು 2016ರ ಏ.24ರಂದು ಸಂಜೆ 5.30 ಗಂಟೆ ಸಮಯಕ್ಕೆ ಸಿದ್ದಾಪುರದ ಹಲಗೇರಿಯಲ್ಲಿ ರಿಷಪ್ಕçನ್ ಕಾರ್ಯಕ್ರಮವನ್ನು ಮುಗಿಸಿಕೊಂಡು ಮರಳಿ ಹೊನ್ನಾವರಕ್ಕೆ ಪ್ರಯಾಣಿಕರನ್ನು ಕೂರಿಸಿಕೊಂಡು ಬರುತ್ತಿರುವಾಗ ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿದ್ದ.
ಹೊನ್ನಾವರ ಕಡೆಯಿಂದ ಬರುತ್ತಿದ್ದ ಮಾರುತಿ 800 ವಾಹನವನ್ನು ನೋಡಿ ತಪ್ಪಿಸಲು ಹೋಗಿ ಒಮ್ಮೆಲೆ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ ಹೊಡೆದು, ಮಾರುತಿ 800 ವಾಹನಕ್ಕೆ ಡಿಕ್ಕಿಯಾಗಿತ್ತು. ಪರಿಣಾಮವಾಗಿ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಖಯುಂರವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಟೆಂಪೋದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತರಾಗಿದ್ದರು.
ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಹೊನ್ನಾವರ ಪೊಲೀಸ್ ಠಾಣೆಯ ಆಗಿನ ಎಎಸ್ಐ ಗಣೇಶ ಜಿ. ಜೋಗಳೇಕರ್ ಮತ್ತು ಆಗಿನ ಹೊನ್ನಾವರದ ವೃತ್ತ ನಿರೀಕ್ಷಕ ಕುಮಾರ ಸ್ವಾಮಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವೆಂಕಟೇಶ ಕೆ. ಗೌಡ 13 ಜನ ಸಾಕ್ಷಿದಾರರನ್ನು ವಿಚಾರಿಸಿ, ವಾದಿಸಿದ್ದರು.
Leave a Comment