ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಪಂಚಾಯತಿ ಕೊಡಸೇ ಗ್ರಾಮದ ಜನಶೆಟ್ಟಿಕೊಪ್ಪ ಮಜಿರೆಯಲ್ಲಿ ಯುವಕನ ಮೇಲೆ ಕರಡಿ ದಾಳಿ ಮಾಡಿದೆ. ದಾಳಿಯಿಂದಾಗಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಪಂಚಾಯತಿ ಹಾಗೂ ಮಾಜಿ ಅಧ್ಯಕ್ಷ ಎಪಿಎಂಸಿ ಸದಸ್ಯ ಲಾರೆನ್ಸ್ ಸಿದ್ದಿ ಪುತ್ರ ಸಂತೋಷ್ ಸಿದ್ದಿ ಕರಡಿ ದಾಳಿಗೊಳಗಾದ ಯುವಕ. ಈತ ಜನಶೆಟ್ಟಿಕೊಪ್ಪದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ಏಕಾಏಕಿ ದಾಳಿ ಮಾಡಿದೆ.
ಸಂತೋಷ್ ತಲೆ, ಮುಖ ಹಾಗೂ ಕಣ್ಣಿಗೆ ಭಾರಿ ಪ್ರಮಾಣದಲ್ಲಿ ಗಾಯಗಳಾಗಿದ್ದು, ಗಾಯಾಳು ವನ್ನು ಯಲ್ಲಾಪುರದ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿಯ ಎಸ್ ಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎಲ್.ಎ.ಮಠ, ಉಪವಲಯ ಅರಣ್ಯಾಧಿಕಾರಿ ಗಳಾದ ನಾಗರಾಜ ಕಲಗುಟಕರ, ಶ್ರೀನಿವಾಸ ನಾಯ್ಕ ಮತ್ತು ಸಿಬ್ಬಂದಿ ಕರಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇತ್ತೀಚಿನ ಕೆಲವು ತಿಂಗಳಗಳಿಂದ ಕೊಡಸೆ ಕಣ್ಣಿಗೇರಿ ಭಾಗದಲ್ಲಿ ಕರಡಿ ಹಾಗೂ ಚಿರತೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದ್ದು, ಪ್ರತಿದಿನ ರಾತ್ರಿ ಗ್ರಾಮದ ಒಂದೆರಡು ನಾಯಿಗಳನ್ನು ಚಿರತೆ ಎತ್ತಿಕೊಂಡು ಹೋಗುತ್ತಿದೆ. ವನ್ಯಪ್ರಾಣಿಗಳಿಂದಾಗಿ ಅರಣ್ಯದಂಚಿನ ಗದ್ದೆಗಳಲ್ಲಿ ಕೆಲಸ ಮಾಡಲು ರೈತರು ಭಯ ಪಡುತ್ತಿದ್ದಾರೆ.
ವಾಸುದೇವ್ ಮಾಪ್ಲೇಕರ್, ಸ್ಥಳೀಯ
Leave a Comment