ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ಜನರ ಸುರಕ್ಷತೆಯ ದೃಷ್ಠಿಯಿಂದ ತಮ್ಮ ಕಾರ್ಖಾನೆಯ ಹೊಗೆ ಉಗುಳುವ ಚಿಮಣಿಗಳಿಗೆ ಹಾಗೂ ಕಲುಷಿತ ನೀರು ಬಿಡುವ ಸ್ಥಳಕ್ಕೆ ಸೆಂಸರ್ಸ್, ಸರ್ವರ್, ಓನಲೈನ್ ಮಾನಿಟರಿಂಗ್ತಂಹ ಅವಶ್ಯಕತೆಗಳ ನಿರ್ವಹಣೆ ಮಾಡದೇ ಇರುವ ಬಗ್ಗೆ ಬಸವರಾಜ ತಟ್ಟಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಲಿಖಿತ ಪತ್ರವನ್ನು ರವಾನಿಸಿದ್ದಾರೆಂದು ಕಾರ್ಮಿಕ ಮುಖಂಡ ಶಿವಾನಂದ ಗಗ್ಗರಿ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಪತ್ರದ ಪ್ರತಿಯನ್ನು ಮಾದ್ಯಮಗಳಿಗೆ ನೀಡಿದರು. ಕಾರ್ಖಾನೆಯವರಿಗೆ ವಿಧಿಸಿರುವ ಶರತ್ತುಗಳಿಗೆ ಅನುಗುಣವಾಗಿ ಏನಮಾಸ್ ಪ್ಲಾಂಟಿಗೆ ಇ.ಎಸ್.ಪಿ.ಗಳನ್ನು ಅವೈಜ್ಞಾನಿಕವಾಗಿ ಅಳವಡಿಸಿ ಅವುಗಳ ಕಾರ್ಯ ದಕ್ಷತೆಯನ್ನು ನೋಡಿಕೊಳ್ಳದೆ ಇರುವುದರಿಂದ ಎಸ್.ಪಿ.ಎಂ. 150ಜಿ.ಎಂ/ಎನ್.ಎಂ3 ಕಿಂತಲೂ ಗರಿಷ್ಠ ಪ್ರಮಾಣದಲ್ಲಿ ರಾಸಾಯಿಕ ಕಣಗಳನ್ನು ಹೊರ ಚೆಲ್ಲುತ್ತಿದ್ದು ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಮತ್ತು ವಿಧಿಸಿರುವ ಶರತ್ತುಗಳನ್ನು ಉಲ್ಲಂಘಿಸಿ ಹೆಚ್ಚು ಕಲ್ಲಿದ್ದಲನ್ನು ಉಪಯೋಗಿಸುತ್ತಿರುವುದರಿಂದ ವಾಯು ಮಾಲಿನ್ಯ, ಹಾಗೂ ಜಲ ಮಾಲಿನ್ಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.
2013ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ವಿಷಯದ ಕುರಿತು ದೂರುಗಳನ್ನು ನೀಡಿ ಅವರ ಗಮನ ಸೆಳೆದರೂ ವೈಜ್ಞಾನಿಕವಾಗಿ ಸರಿಯಾಗಿ ಪರಿಶೀಲಿಸದೇ ಮಾಲಿನ್ಯ ನಿಯಂತ್ರಣ ಮಂಡಳಿಯು ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿರುವದರಿಂದ ಸಮಸ್ಯೆಗಳು ಪರಿಹಾರ ಕಾಣದೆ ಜಿವಂತವಾಗಿಯೇ ಉಳಿದಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯವೈಖರಿಯನ್ನು ಕಂಡು ಬೆಸತ್ತು ಎಸಿಬಿಗೆ ದೂರುಗಳನ್ನು ಸಲ್ಲಿಸಿದಾಗ, ಎಸಿಬಿ ಬಿಸಿದ ಬಲೆಗೆ ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಸೇರಿ ಮೂರು ಜನರು ಆರೋಪವನ್ನು ಎದುರಿಸುತ್ತಿದ್ದಾರೆ.
ದಾಂಡೇಲಿ ನಗರದಲ್ಲಿ ವಾಯುಮಾಲಿನ್ಯ ಜಲಮಾಲಿನ್ಯಗಳಿಗೆ ಸಿಲುಕಿ ಚಿಕ್ಕ ಮಕ್ಕಳು, ಯುವಜನರು, ಹಿರಿಯ ನಾಗರೀಕರು, ದುಡಿಯುವ ಜನರು ಕಾಮಾಲೆ ರೋಗ, ಹೃದಯ ಸಂಬಂಧಿ ಕಾಯಿಲೆಗಳಿಂದ ನರಳುತ್ತಿದ್ದಾರೆ ಇದು ಜಲ ಮತ್ತು ವಾಯುಮಾಲಿನ್ಯವಾಗಿರುವದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ದಾಂಡೇಲಿ ವ್ಯಾಪಾರಿ ಸಂಘದ ವಾಸುದೇವ ಪ್ರಭು, ಪ್ರಮುಖರಾದ ಗೌರೀಶ ಬಾಬ್ರೇಕರ, ಅನಂತರಾಜ ನಾಯಕ, ಸಂದೀಪ ಭಂಡಾರಿ, ಫೀರೋಜ ಪಿರ್ಜಾದೆ, ಜಹಂಗೀರ ಖಾನ್, ಮುಂತಾದವರು ಉಪಸ್ಥಿತರಿದ್ದರು.
Leave a Comment