ಕಾರವಾರ:
ಕುಮಟಾ ತಾಲ್ಲೂಕಿನ ಗೋಕರ್ಣದ ಗಂಗಾವಳಿ ಪ್ರದೇಶದಲ್ಲಿ ವಾಸಿಸುತ್ತಿರುವ 8 ಸಲಫಿ ಕುಟುಂಬಗಳ ಮೇಲೆ ಅಲ್ಲಿನ ಸುನ್ನಿ ಸಮುದಾಯದವರು ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದು, ಈ ಕುರಿತು ದೂರು ನೀಡಿದರೂ ಸಹ ಸ್ಥಳೀಯ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಕ್ಷಿಣ ಕರ್ನಾಟಕ ಸಲಫಿ ಮೂವ್ಮೆಂಟ್ನ ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾವಳಿ ಪ್ರದೇಶದಲ್ಲಿ ಸುಮಾರು 80ಕ್ಕೂ ಅಧಿಕ ಸುನ್ನಿ ಕುಟುಂಬಗಳಿವೆ. ಅವು ಅಲ್ಲಿರುವ 8 ಸಲಫಿ ಕಟುಂಬಗಳ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು, ಸಮುದಾಯದವರ ವಿವಾಹ ಕಾರ್ಯಗಳಿಗೆ ಬಹಿಷ್ಕಾರ ಹಾಕುವುದು, ಕುಟುಂಬದ ಸದಸ್ಯರಿಗೆ ಜೀವಬೆದರಿಕೆ ಹಾಕುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಲಫಿಗಳ ಅಶ್ಲೀಲ ಚಿತ್ರಗಳನ್ನು ರವಾನಿಸುವ ಕಾರ್ಯವನ್ನು ಮಾಡುತ್ತಿದೆ. ಯಾವುದೋ ಆಮಿಷಕ್ಕೆ ಒಳಗಾಗಿ ಅಥವಾ ಯಾರದೋ ಪ್ರಭಾವಕ್ಕೆ ಒಳಗಾಗಿರುವ ಅಲ್ಲಿನ ಪೊಲೀಸರಿಗೆ ಈ ಕುರಿತು ದೂರು ನೀಡಿದರೂ ಸಹ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ಅವರು ದೂರಿದರು.
ಸಲಫಿಗಳು ಇಸ್ಲಾಂನ ಪವಿತ್ರ ಖುರಾನ್ ಹಾಗೂ ಪ್ರವಾದಿಯವರ ಮಾರ್ಗಗಳನ್ನು ಮಾತ್ರ ಅನುಸರಿಸುತ್ತಾರೆ. ಪವಿತ್ರ ಖರಾನ್ನಲ್ಲಿ ಹೇಳಿರುವಂತೆ ಮೂರ್ತಿ ಪೂಜೆಗೆ ಯಾವುದೇ ಅವಕಾಶ ಸಲಫಿಗಳಲ್ಲಿ ಇಲ್ಲ. ಆದರೆ ಸುನ್ನಿಗಳು ಮುಸ್ಲಿಮರಲ್ಲಿ ಅಂಧ ವಿಶ್ವಾಸ ಹರಡಿ, ಇಸ್ಲಾಂನ್ನು ವಿರೂಪಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ದರ್ಗಾಗಳಲ್ಲಿ ಗೋರಿಗಳನ್ನು ಕಟ್ಟಿ ಅದಕ್ಕೆ ಪೂಜೆ ಮಾಡಿ, ಆಧ್ಯಾತ್ಮಿಕವಾಗಿ ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಮೂಢನಂಬಿಕೆಗಳನ್ನು ಹುಟ್ಟು ಹಾಕಿ ಅದರಿಂದ ಹಣಗಳಿಸುವ ತಂತ್ರ ಹೂಡುತ್ತಿದ್ದಾರೆ. ಅಲ್ಲದೇ ಸಲಫಿಗಳು ಐಸಿಸ್ಗೆ ನಂಟು ಹೊಂದಿದ್ದವರು ಎಂದು ಬಿಂಬಿಸಿ, ಅನ್ಯಕೋಮಿನ ಜನರು ಅವರ ವಿರುದ್ಧ ದಂಗೆ ಏಳುವಂತೆ ಮಾಡುತ್ತಿದ್ದಾರೆ ಎಂದು ಅವರು ಆಪಾದಿಸಿದರು.
ಗಂಗಾವಳಿಯ ಸುನ್ನಿ ಪಂಗಡದವರ ನಿರಂತರ ದಬ್ಬಾಳಿಕೆ, ದೌರ್ಜನ್ಯಗಳಿಂದಾಗಿ ಅಲ್ಲಿನ ಒಂದು ಕುಟುಂಬ ಬೇರೆಡೆ ಪಲಾಯನ ಮಾಡಿದೆ. ಅವರ ದಬ್ಬಾಳಿಕೆ ತಾಳಲಾರದೆ ಸಂಘಟನೆ ವತಿಯಿಂದ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅವರಿಗೆ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಅವರಿಗೂ ಸಹ ದೂರು ನೀಡಿದ್ದೇವೆ. ಪೊಲೀಸ್ ಇಲಾಖೆ ಅವರ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭಾವಿಸಿದ್ದು, ಸರ್ಕಾರ ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಅಹ್ಮದ್ ಅನ್ಸಾರ್, ಕಾರ್ಯದರ್ಶಿ ಟಿಎಮ್ ಹನೀಫ್, ಗಂಗಾವಳಿಯ ಸಲಫಿ ಮುಖಂಡ ಮೊಹಮ್ಮದ್ ಹಾರೀಸ್, ಕಾರ್ಯದರ್ಶಿ ರಿಯಾಜ್ ಅಹ್ಮದ್ ಇದ್ದರು.
Leave a Comment