ಭಟ್ಕಳ:
ಇಲ್ಲಿನ ಅಂಜುಮಾನ್ ಇನ್ಸ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎಂಡ್ ಮೆನೇಜ್ಮೆಂಟ್ ಕಾಲೇಜಿನ ಗ್ರಾಜ್ಯುಯೇಶನ್ ಡೇ ಸಂಸ್ಥೆಯ ಅಧ್ಯಕ್ಷ ಅಬ್ದುರ್ ರೆಹಮಾನ್ ಜುಕಾಕು ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ವಿ.ಟಿ.ಯು. ಬೆಳಗಾವಿಯ ಡಾ. ಆನಂದ ವಿ. ಶಿವಪುರ ಪದವಿ ಪ್ರಧಾನ ಸಮಾರಂಭ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಒಂದು ಹಬ್ಬದ ವಾತಾವರಣವನ್ನು ಕಲ್ಪಿಸುತ್ತದೆ. ಇಲ್ಲಿಯ ತನಕ ನೀವು ವಿದ್ಯಾರ್ಥಿಗಳಾಗಿದ್ದೀರಿ, ಇನ್ನು ಮುಂದೆ ನೀವು ಪದವೀಧರರಾಗಿದ್ದು ನಿಮ್ಮ ಮೇಲೆ ಸಾಮಾಜಿಕ ಜವಾಬ್ದಾರಿ ಬಂದಿದೆ. ಸಮಾಜದಲ್ಲಿ ನೀವು ಉತ್ತಮರಾಗಿ ನೀವು ಕಲಿತ ವಿದ್ಯೆಯನ್ನು ಉತ್ತಮ ಕಾರ್ಯಗಳಿಗಾಗಿ ಬಳಸಿ ದೇಶ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಇಂದು ಇಂಜಿನಿಯರಿಂಗ್ ಪದವೀಧರರ ಜವಾಬ್ದಾರಿ ಹೆಚ್ಚಿದೆ. ಅಂದರೆ ಕೇವಲ ಇಂಜಿನಿಯರ್ ಅವರ ಜವಾಬ್ದಾರಿ ಮಾತ್ರವಲ್ಲ, ಎಲ್ಲರ ಜವಾಬ್ದಾರಿಯೂ ಕೂಡಾ ಹೆಚ್ಚಿದ್ದು ಅದರಲ್ಲಿ ನಿಮ್ಮ ಪಾತ್ರ ಮುಖ್ಯವಾದುದಾಗಿದೆ. ನೀವು ನಿಮ್ಮ ಗುರಿಯನ್ನು ಮುಟ್ಟಲು ಇರುವ ದಾರಿ ಸುಲಭದಲ್ಲ ಎನ್ನುವುದನ್ನು ತಿಳಿದು ಕೊಂಡಿ ಮುಂದಡಿಯಿಡಬೇಕಾಗುತ್ತದೆ. ನಿಮ್ಮ ಗುರಿ ಸಾಧನೆಗೆ ಹಲವಾರು ಎಳು ಬೀಳುಗಳು ಸಾಮಾನ್ಯವಾಗಿದ್ದರೂ ಕೂಡಾ ನಿಮ್ಮ ಗುರಿ ಸಾಧನೆಯತ್ತ ಛಲಬಿಡದೇ ಮುನ್ನುಗ್ಗಿದಾಗ ಮಾತ್ರ ನಿಮಗೆ ಗುರಿ ತಲುಪಲು ಸಾಧ್ಯವಾಗುವುದು. ಗುರಿ ತಲುಪುವುದಕ್ಕಾಗಿ ಎಂದಿಗೂ ನಿಮ್ಮ ಉತ್ತಮ ದಾರಿಯನ್ನೆಂದೂ ಬದಲಿಸ ಬೇಡಿ ಎಂದೂ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಜಮಾತುಲ್ ಮುಸ್ಲಿಮೀನ್ನ ಮಾಜಿ ಅಧ್ಯಕ್ಷ ಹಾಗೂ ಜಾನ್ ಬ್ರದರ್ಸ್ ಇದರ ನಿರ್ದೇಶಕ ಮೊಹತೆಶಂ ಅಬ್ದುಲ್ ರೆಹಮಾನ್ ವಿದ್ಯಾರ್ಥಿ ಜೀವನದಿಂದ ಸಾಮಾಜಿಕ ಜೀವನಕ್ಕೆ ಇಂದಿನಿಂದ ಕಾಲಿಟ್ಟ ನೀವು ಸಮಾಜದ ಒಳಿತನ್ನೇ ಬಯಸಬೇಕು. ಪ್ರತಿಯೋರ್ವರೂ ಕೂಡಾ ತಮ್ಮ ತಮ್ಮ ಜೀವನದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಾ ಸಮಾಜ ಮುಖಿಯಾಗಿರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಜುಮಾನ್ ಪ್ರಧಾನ ಕಾರ್ಯದರ್ಶಿ ಸಿದ್ಧಿಕ್ ಇಸ್ಮಾಯಿಲ್, ಕಾಲೇಜ್ ಬೋರ್ಡ ನಿರ್ದೇಶಕ ಡಾ. ಉದಯಪ್ರಸನ್ನ, ಉಪಪ್ರಾಂಶುಪಾಲ ಪ್ರೊ. ಎಚ್.ಎಂ.ಫಾಲಚಂದ್ರ, ಪ್ರೊ. ಟಿ.ಎನ್.ಪಿ. ರಾಜಕುಮಾರ್, ಪ್ರೊ. ಅನಿಲ್ ಕಡ್ಲೆ, ಪ್ರೊ. ಜಾಹಿದ್ ಖರೂರಿ, ಡಾ. ಕೆ. ಫಜ್ಲುಲ್ರೆಹಮಾನ್ ಮುಂತಾದವರು ಉಪಸ್ಥಿತರಿದ್ದರು.
ಎಂ.ಬಿ.ಎ. ಮತ್ತು ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಉತ್ತೀರ್ಣರಾದವರಿಗೆ ಪದವಿ ಪ್ರಧಾನ ಮಾಡಲಾಯಿತು.
ಅಲಿ ಮರ್ತುಜಾ ಖಾಜಿಯಾ ಖುರಾನ್ ಪಠಣ ಮಾಡಿದರು. ಪ್ರಾಂಶುಪಾಲ ಡಾ. ಮುಷ್ತಾಕ್ ಅಹಮ್ಮದ್ ಭಾವಿಕಟ್ಟಿ ಸ್ವಾಗತಿಸಿದರು. ಡಾ. ಅನಂತಮೂರ್ತಿ ಶಾಸ್ತ್ರಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಶ್ರೀಧರ ಯಲ್ಲೂರ್ಕರ್ ವಂದಿಸಿದರು. ಪ್ರೊ. ಸುಬ್ರಹ್ಮಣ್ಯ ಭಾಗವತ್, ಪ್ರೊ. ಮಿರ್ಜಾ ನಾಯ್ಕ ಮುಂತಾದವರು ಸಹಕರಿಸಿದರು.
Leave a Comment