ಭಟ್ಕಳ:
ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಇರುವ ಕಡೆ ಸಮರ್ಪಕವಾಗಿ ನೀರು ಪೂರೈಸಲು ಹಾಗೂ ಹಾಳಾಗಿರುವ ಕುಡಿಯುವ ನೀರಿನ ಯೋಜನೆಯ ಪಂಪನ್ನು ದುರಸ್ಥಿ ಪಡಿಸಿ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮಾವಿನಕುರ್ವೆಯಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೊಂಡು ಒಂದು ವಾರ ಕಳೆದರೂ ಇನ್ನೂ ತನಕ ಪೈಪ್ ಲೈನ್ ವ್ಯವಸ್ಥೆ ಆಗಿಲ್ಲ ಎಂದು ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ ಸಂಬಂಧಪಟ್ಟ ಪಂಚಾಯತ್ರಾಜ್ ಇಂಜಿನಿಯರ್ ಫಯಾಜ್ ಅವರಲ್ಲಿ ಕೇಳಿದಾಗ, ಅವರು ಆದಷ್ಟು ಬೇಗ ಪೈಪ್ ಅಳವಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದರು. ಕಾಯ್ಕಿಣಿಯಲ್ಲೂ ಸಹ ಪಂಪ್ ಹಾಳಾಗಿ ಒಂದು ವಾರ ಕಳೆದಿದ್ದು ಇನ್ನೂ ರಿಪೇರಿ ಮಾಡಿಲ್ಲ. ಇದರಿಂದ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಆದಷ್ಟು ಬೇಗ ಪಂಪ್ ದುರಸ್ಥಿ ಮಾಡಿ ನೀರು ಕೊಡುವ ಕೆಲಸ ಮಾಡಿ ಎಂದು ತಾ.ಪಂ. ಅಧ್ಯಕ್ಷರು ಸೂಚಿಸಿದರು. ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡರೂ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತಾ.ಪಂ. ಅಧ್ಯಕ್ಷರು, ಪಂ.ರಾಜ್ ಇಂಜಿನಿಯರ್ ಬಳಿ ನೀವು ಎಲ್ಲದಕ್ಕೂ ಕಿರಿಯ ಇಂಜಿನಿಯುರ್ ಅವರ ಮಾತು ಕೇಳಬೇಡಿ. ಸ್ಥಳಕ್ಕೆ ನೀವು ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಆಲಿಸಿ ಎಂದು ಸೂಚಿಸಿದರು.
ಹೆಸ್ಕಾಂ ಇಂಜಿನಿಯರ್ ಶಿವಾನಂದ ನಾಯ್ಕ ಇಲಾಖೆ ಪ್ರಗತಿ ಬಗ್ಗೆ ಸಭೆಗೆ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ. ಟಿ. ನಾಯ್ಕ ತಾಲ್ಲೂಕಿನಲ್ಲಿ ಹಲವು ಭಾಗದಲ್ಲಿ ಹೊಳೆ ಬದಿಯಲ್ಲಿ ಅನಧಿಕೃತವಾಗಿ ಪಂಪು ಅಳವಡಿಸಲಾಗಿದೆ. ಇದರಿಂದ ಹೊಳೆ ನೀರು ಬತ್ತಿ ಹೋಗಿದ್ದು, ಕುಡಿಯಲು ನೀರು ಸಾಕಾಗುತ್ತಿಲ್ಲ. ಆದಷ್ಟು ಶೀಘ್ರದಲ್ಲಿ ಅನಧಿಕೃತ ಪಂಪಿಗೆ ನೀಡಲಾದ ಸಂಪರ್ಕವನ್ನು ನಿರ್ಧಾಕ್ಷಿಣ್ಯವಾಗಿ ಕಿತ್ತು ಹಾಕಿ ಎಂದು ಹೇಳಿದರು. ಇದಕ್ಕುತ್ತರಿಸಿದ ಇಂಜಿನಿಯರ್ ಶಿವಾನಂದ ನಾಯ್ಕ ನಮ್ಮಲ್ಲಿ ಯಾರ್ಯಾರು ಅನಧಿಕೃತ ಪಂಪ್ ಅಳವಡಿಸಿಕೊಂಡಿದ್ದಾರೆನ್ನುವ ಬಗ್ಗೆ ಯಾದಿ ಇಲ್ಲ. ಈ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಬಹುದಾಗಿದೆ ಎಂದಾಗ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಸಿ. ಟಿ. ನಾಯ್ಕ ನೀವು ಹೀಗೆ ಹೇಳಬಾರದು. ಅನಧಿಕೃತ ಪಂಪ್ ಸಂಪರ್ಕ ತೆಗೆಯಲು ಯಾರೂ ದೂರು ನೀಡುವ ಅಗತ್ಯವಿಲ್ಲ. ಹೊಳೆ ಬದಿಯಲ್ಲಿ ಅನಧಿಕೃತ ಪಂಪ್ ಅಳವಡಿಸಿ ನೀರು ಹಾಯಿಸುತ್ತಿರುವುದರಿಂದಲೇ ಹೊಳೆ ಒಣಗಿ ನೀರಿನ ಅಭಾವ ಉಂಟಾಗಿದೆ ಎಂದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರ ಮಾತಿಗೆ ಧ್ವನಿಗೂಡಿಸಿದ ತಾ.ಪಂ. ಅಧ್ಯಕ್ಷರು ಈ ಬಗ್ಗೆ ಆದಷ್ಟು ಬೇಗ ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಒಳಿತು ಎಂದು ಹೇಳಿದರು.
ತಾಡಪತ್ರಿಗೆ ಬೇಡಿಕೆ ಹೆಚ್ಚಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಸಭೆ ತಿಳಿಸಿದಾಗ, ಅಧ್ಯಕ್ಷರು ನಾವು ಆಯ್ಕೆ ಮಾಡಿದ ಫಲಾನುಭವಿಗಳಿಗೆಲ್ಲರಿಗೂ ತಾಡಪತ್ರಿ ಸಿಗಲಿಲ್ಲ. ನೀವು ನಿಮಗೆ ಬೇಕಾದವರಿಗೆ ತಾಡಪತ್ರಿ ವಿತರಿಸಿದ್ದು ಹೀಗಾಗಕೂಡದು. ಹಿಂದೆ ತಾಡಪತ್ರಿ ತೆಗೆದುಕೊಂಡವರಿಗೆ ಮತ್ತೆ ತಾಡಪತ್ರಿ ವಿತರಿಸದೇ ಯಾರಿಗೆ ಸಿಕ್ಕಿಲ್ಲವೋ ಅಂತಹ ಫಲಾನುಭವಿಗಳಿಗೆ ನೀಡಿ ಎಂದು ತಾಕೀತು ಮಾಡಿದರು. ನೂತನವಾಗಿ ಕೃಷಿ ಭಾಗ್ಯ ಯೋಜನೆ ಜ್ಯಾರಿಯಾಗಿದ್ದು, ಈ ಯೋಜನೆಯ ಲಾಭವನ್ನು ತಾಲ್ಲೂಕಿನ ರೈತರು ಪಡೆಯಬಹುದಾಗಿದೆ ಎಂದು ಕೃಷಿ ಅಧಿಕಾರಿ ತಿಳಿಸಿದರು. ಪಡಿತರ ಸಾಮಗ್ರಿಯನ್ನು ಅರ್ಧಂಬರ್ಧ ವಿತರಿಸಬೇಡಿ. ವಿತರಿಸುವುದಿದ್ದರೆ ಸರಿಯಾಗಿ ವಿತರಿಸಿ ಎಂದು ಆಹಾರ ಅಧಿಕಾರಿಗೆ ತಾ.ಪಂ. ಅಧ್ಯಕ್ಷರು ಸೂಚಿಸಿದರು.
ಕಂದಾಯ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತಾ.ಪಂ. ಅಧ್ಯಕ್ಷರು ನಿಮ್ಮ ಇಲಾಖೆಗೆ ಯಾವುದೇ ಪ್ರಮಾಣ ಪತ್ರಕ್ಕೆ ಅಗತ್ಯ ದಾಖಲೆ ನೀಡಿ ಅರ್ಜಿ ಸಲ್ಲಿಸಿದ್ದರೂ ವಿನಾ ಕಾರಣ ಸತಾಯಿಸಲಾಗುತ್ತಿದೆ. ಇಲಾಖೆಯಲ್ಲಿ ಜನಸಾಮಾನ್ಯರು ನೇರವಾಗಿ ಅರ್ಜಿ ನೀಡಿದರೆ ಕೆಲವನ್ನು ವಿಳಂಬವಾಗಿ ಮಾಡಲಾಗುತ್ತಿದೆ. ಜನಸಾಮಾನ್ಯರ ಕೆಲಸಕ್ಕೆ ಸತಾಯಿಸದೇ ತ್ವರಿತಗತಿಯಲ್ಲಿ ಮಾಡಿಕೊಡಿ ಎಂದು ತಹಶೀಲ್ದಾರರ ಪರವಾಗಿ ಸಭೆಗೆ ಆಗಮಿಸಿದ ಉಪತಹಶೀಲ್ದಾರರಿಗೆ ಸೂಚಿಸಿದರು. ಅಗತ್ಯ ದಾಖಲೆ ಇದ್ದಾಗ್ಯೂ ಮರಣ ಪ್ರಮಾಣ ಪತ್ರ ನೀಡಲು ಸತಾಯಿಸಿದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು. ಇದಕ್ಕುತ್ತರಿಸಿದ ಉಪತಹಶೀಲ್ದಾರರು ಯಾರಿಗೂ ಸತಾಯಿಸುತ್ತಿಲ್ಲ. ದಾಖಲೆ ಸರಿಯಾಗಿದ್ದರೆ ಇಲಾಖೆಯ ನಿಯಮದಡಿಯಲ್ಲಿ ನಿಗದಿತ ಅವಧಿಯಲ್ಲೇ ಕೆಲಸ ಮಾಡಿಕೊಡಲಾಗುತ್ತಿದೆ ಎಂದು ಸಮಜಾಯಿಸಿದರು. ಸಭೆಯಲ್ಲಿ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ವ್ಯವಸ್ಥಾಪಕ ಸುಧೀರ್ ಗಾಂವಕರ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
Leave a Comment