ದಾಂಡೇಲಿ :
ಹಲವಾರು ಎಡವಟ್ಟುಗಳ ಮೂಲಕ ಗಮನ ಸೆಳೆಯುತ್ತಿರುವ ಜಿಲ್ಲೆಯ ಮೊದಲ ನಗರ ಸಭೆ ದಾಂಡೇಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪ್ರಮುಖವಾಗಿ ನಗರದಲ್ಲಿ ಅತಿಕ್ರಮಣದ ಸದ್ದು ಮುಗಿಲು ಮುಟ್ಟಿದ್ದು, ನಗರ ಸಭೆಯ ಅಧ್ಯಕ್ಷ ಸಾಳೊಂಕೆಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದಿರುವುದರ ಹಿಂದೆ ಸಾಳೊಂಕೆಯವರ ಷಡ್ಯಂತ್ರವಿದೆಯೆ ಎಂಬ ಪ್ರಶ್ನೆ ಸಧ್ಯಕ್ಕೆ ತೀವ್ರ ಚರ್ಚೆಯಲ್ಲಿದೆ.
ಈಗಾಗಲೆ ನಗರದ ಹಲವೆಡೆಗಳಲ್ಲಿ ನಡೆಯುತ್ತಿರುವ ಅತಿಕ್ರಮಣ ಜಾಗ ಹಾಗೂ ಕಟ್ಟಡದ ಬಗ್ಗೆ ಚಿತ್ರ ಸಹಿತ ವರದಿ ಮಾಡಲಾಗಿದ್ದು, ವರದಿಯನ್ನು ನೋಡಿದ ನಗರಾಡಳಿತ ಒಂದು ದಿನ ಗಣೇಶ ನಗರ ಸಮೀಪದ ಸಾಯಿನಗರದ ಕಾಲೋನಿಯಲ್ಲಿ ಅನಧಿಕೃತ ಒಂದು ಬೃಹತ್ ಮನೆ ಮತ್ತು ಒಂದು ಜೋಪಡಿ ಮನೆಯನ್ನು ತೆರವುಗೊಳಿಸಿ ಘರ್ಜಿಸಿತ್ತು. ಆದರೆ ಈ ಘರ್ಜನೆ ಒಂದೆ ದಿನಕ್ಕೆ ಸೈಲೆಂಟಾಗಿರುವುದು ಹಲವು ಅನುಮಾನಕ್ಕೆ ಪುಷ್ಟಿ ನೀಡುತ್ತಿದೆ.
ಉಳಿದಂತೆ ಬಹುಮುಖ್ಯವಾಗಿ ನಗರದ ಆಶ್ರಯ ಕಾಲೋನಿ ಹಾಗೂ ಇತರೆಡೆಗಳಲ್ಲಿ ನಡೆಯುತ್ತಿರುವ ಮತ್ತು ನಡೆದಿರುವ ಅತಿಕ್ರಮಣಗಳನ್ನು ತೆರವುಗೊಳಿಸುವಲ್ಲಿ ನಗರ ಸಭೆ ದಿವ್ಯ ಮೌನ ವಹಿಸಿರುವುದು ಆಶ್ವರ್ಯಕರ ಸಂಗತಿ. ಆಶ್ರಯ ಕಾಲೋನಿಯಲ್ಲಿ ಸರಿ ಸುಮಾರು ನಗರ ಸಭೆಯ ಜಾಗೆಯಲ್ಲಿ 18 ಸೈಟುಗಳನ್ನು ಅತಿಕ್ರಮಣ ಮಾಡಿ ಮನೆ ನಿರ್ಮಿಸಲು ಅಡಿಪಾಯವನ್ನು ಹಾಕಲಾಗಿದ್ದು, ಒಂದು ಮೂಲಗಳ ಪ್ರಕಾರ ಇಲ್ಲಿ ಭಾರಿ ಪ್ರಮಾಣದಲ್ಲಿ ಕೊಂಡು ಕೊಳ್ಳುವ ವ್ಯವಹಾರ ನಡೆದಿದ್ದು, ಆ ಕಾರಣಕ್ಕಾಗಿಯೆ ಇಲ್ಲಿಯ ಅತಿಕ್ರಮಣಗಳನ್ನು ತೆರವುಗೊಳಿಸಲಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇಲ್ಲಿ ಅತಿಕ್ರಮಿತ ಜಾಗವು ಸ್ಥಳೀಯ ನಗರ ಸಭಾ ಸದಸ್ಯ ಅಡಿವೆಪ್ಪ ಭದ್ರಕಾಳಿಯವರ ಮನೆ ಸಮೀಪದಲ್ಲೆ ಇದ್ದು, ನಗರ ಸಭಾ ಸದಸ್ಯರಿದ್ದು ಏನು ಪ್ರಯೋಜನ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ನಗರದ ಯಾವುದೇ ಪ್ರದೇಶದಲ್ಲಿ ಅತಿಕ್ರಮಣ ಮಾಡಿದ್ದರೂ ಕೊಡುವುದನ್ನು ಕೊಟ್ಟರೆ ಎಲ್ಲವು ಸರಿ ಹೋಗುತ್ತದೆ. ಅತಿಕ್ರಮಣ ಕಟ್ಟಡಗಳು ಶರವೇಗದಲ್ಲಿ ಎದ್ದು ನಿಲ್ಲುತ್ತದೆ ಎಂಬ ಆರೋಪ ನಗರ ಸಭೆಯ ಮೇಲಿದ್ದು, ನಗರ ಸಭೆ ಎಲ್ಲವು ಗೊತ್ತಿದ್ದು, ಗೊತ್ತಿಲ್ಲದ್ದಂತೆ ನಾಟಕವಾಡುತ್ತಿರುವ ಮರ್ಮವೇನು ಎಂಬುವುದನ್ನು ಮೇಲಾಧಿಕಾರಿಗಳೆ ಬಂದೆ ಪರಿಶೀಲನೆ ಮಾಡಬೇಕೆಂಬ ಆಗ್ರಹವು ಕೇಳಿ ಬರುತ್ತಿದೆ.
ಇನ್ನೂ ಪ್ರಮುಖವಾಗಿ ಕೇಳಿ ಬರುತ್ತಿರುವುದೇನೆಂದರೆ ನಗರ ಸಭೆಯಲ್ಲಿ ಯಾರ್ದೊ ಜಾಗ ಯಾರ ಹೆಸರಿಗೂ ಆಗುತ್ತದೆ. ಈ ರೀತಿಯಾಗಿ ಕೆಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಖಾತಾ ಬದಲಾವಣೆಯಲ್ಲಿ ಭಾರೀ ಪ್ರಮಾಣದ ಗೋಲ್ ಮಾಲ್ ನಡೆಯುತ್ತಿರುವ ಶಂಕೆ ವ್ಯಕ್ತವಾಗುತ್ತಿದ್ದು, ಏಜೆಂಟ್ ಹಾವಾಳಿಯು ಮೀತಿ ಮೀರಿ ಇದ್ದು, ನಗರ ಸಭೆಯ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ.
ಸಚಿವರ ನಿರೀಕ್ಷೆ ಹುಸಿಗೊಳಿಸಿದ ಸಾಳೊಂಕೆ :
ಸಚಿವ ದೇಶಪಾಂಡೆಯವರು ನಗರ ಸಭೆಯ ಹಿರಿಯ ಸದಸ್ಯ ಅನುಭವಿ ಎನ್.ಜಿ.ಸಾಳೊಂಕೆಯವರ ಮೇಲೆ ಬಲವಾದ ನಿರೀಕ್ಷೆಯನ್ನಿಟ್ಟು ನಗರ ಸಭೆಯ ಅಧ್ಯಕ್ಷ ಪಟ್ಟವೇರಲು ಮಹತ್ವದ ಅವಕಾಶ ಕಲ್ಪಿಸಿಕೊಟ್ಟಿದ್ದರು. ಆದರೆ ಸಚಿವರಿಟ್ಟ ನಿರೀಕ್ಷೆಯನ್ನು ಸಕಾರಗೊಳಿಸುವಲ್ಲಿ ಎನ್.ಜಿ.ಸಾಳೊಂಕೆಯವರು ಸಂಪೂರ್ಣ ಹಿನ್ನಡೆ ಸಾಧಿಸಿರುವುದು ಸಚಿವರ ಕೆಂಗಣ್ಣಿಗೆ ಗುರಿಯಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಈಗಿನ ಅಧ್ಯಕ್ಷರ ಅವಧಿಯಲ್ಲಿ ಅತಿಕ್ರಮಣ ಮತ್ತು ಕಾನೂನು ಬಾಹಿರ ಕಟ್ಟಡ ನಿರ್ಮಾಣ ಕಾರ್ಯ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದು, ಈ ಕಾರಣಕ್ಕಾಗಿ ಸಾಳೊಂಕೆಯವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಆಗ್ರಹ ನಗರದಲ್ಲಿ ಕೇಳಿ ಬರುತ್ತಿದೆ.
ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಾಗುವುದು-ಜತ್ತಣ್ಣ
ನಗರದಲ್ಲಿ ನಡೆಯುತ್ತಿರುವ ಅತಿಕ್ರಮಣಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ನಗರ ಸಭೆಯ ಪೌರಾಯುಕ್ತ ಜತ್ತಣ್ಣ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಅತಿಕ್ರಮಣ ತೆರವುಗೊಳಿಸಲು ಪೌರಾಯುಕ್ತರಿಗೆ ಆದೇಶ ನೀಡಲಾಗಿದೆ- ಎನ್.ಜಿ.ಸಾಳೊಂಕೆ
ಅತಿಕ್ರಮಣ ತೆರವುಗೊಳಿಸುವುದರ ಬಗ್ಗೆ ಪೌರಾಯುಕ್ತರಿಗೆ ಈಗಾಗಲೆ ಆದೇಶ ನೀಡಲಾಗಿದೆ. ಈ ಬಗ್ಗೆ ನನಗೆ ಎರೆಸ್ಮೆಂಟ್ ಮಾಡಬೇಡಿ ಎಂದು ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆಯವರು ಪತ್ರಿಕೆಗೆ ತಿಳಿಸಿದ್ದಾರೆ.
Leave a Comment