ಕಾರವಾರ:
ಮೂರನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಒಂದು ವರ್ಷದವರೆಗೆ ರಾಜ್ಯದಾದ್ಯಂತ ಯೋಗಮಯ ಕರ್ನಾಟಕ ಅಭಿಯಾನ ನಡೆಸಲಾಗುತ್ತಿದೆ. ಅದೇ ರೀತಿ ಯೋಗಮಯ ಉತ್ತರ ಕನ್ನಡ ಅಭಿಯಾನ ಸಹ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದ ನಿಮಿತ್ತ ಯೋಗ ಶಿಬಿರ, ಯೋಗ ಶಿಕ್ಷಕರ ತರಬೇತಿ ಶಿಬಿರ, ಬೊಜ್ಜು ನಿವಾರಣಾ ಶಿಬಿರವನ್ನು ಜಿಲ್ಲೆಯ ಪ್ರತಿ ವಾರ್ಡ್ ಹಾಗೂ ಗ್ರಾಮ ಮಟ್ಟದಲ್ಲಿ ನಡೆಸಲಾಗುವುದು ಎಂದರು. ಜಿಲ್ಲೆಯ ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲ್ಲೂಕುಗಳಲ್ಲಿ ಇದೇ 5 ರಿಂದ ಜಿಲ್ಲಾಮಟ್ಟದ ಯೋಗ ಶಿಕ್ಷಕರ ತರಬೇತಿ ಶಿಬಿರ ಆರಂಭವಾಗಿದ್ದು, 25 ದಿನಗಳು ಇದು ನಡೆಯಲಿದೆ. ತಾಲ್ಲೂಕು ಮಟ್ಟದ ಶಿಬಿರ ಕೂಡ ಎಲ್ಲ ತಾಲ್ಲೂಕುಗಳಲ್ಲಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ತರಬೇತಿ ಪಡೆದವರಲ್ಲಿ ಅರ್ಹರನ್ನು ಸಂಸ್ಥೆಯು ಯೋಗ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಿದೆ. ಅವರು ತಮ್ಮೂರಿನಲ್ಲಿಯೇ ಶಿಬಿರ ಆಯೋಜಿಸಿ, ಜನರಿಗೆ ಉಚಿತವಾಗಿ ಯೋಗಾಭ್ಯಾಸ ಮಾಡಿಸುವರು ಎಂದು ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಚಾರ್ಯ ಗುರುಕುಲ ಪದ್ಧತಿಯನ್ನು ಆರಂಭಿಸಲಾಗುವುದು. ಇದಕ್ಕಾಗಿ ಪ್ರತಿ ಜಿಲ್ಲೆಗೆ ₨ 50 ಕೋಟಿ ಮೀಸಲಿಟ್ಟಿದ್ದೇವೆ. ಅಲ್ಲಿ ಪುರಾತನ ವೇದ, ವ್ಯಾಕರಣ, ಯೋಗ, ಆಸನ, ಸಂಸ್ಕೃತ ಅಧ್ಯಯನಗಳ ಜತೆ ಈಗಿನ ಆಧುನಿಕ ಶಿಕ್ಷಣವನ್ನು ಕಲಿಸಲಾಗುವುದು. ವಿದ್ಯಾರ್ಥಿಗಳು ಗುರುಕುಲದಲ್ಲಿ ದೇಶದ ಸಂಸ್ಕೃತಿ ಅಧ್ಯಯನ ಮಾಡುವುದರ ಜತೆಯಲ್ಲಿ ಉನ್ನತ ವ್ಯಾಸಂಗ ಮಾಡಲು ಅವಕಾಶ ರೂಪಿಸಲಾಗುತ್ತಿದೆ. ಗುರುಕುಲ ಪ್ರಾರಂಭ ಮಾಡಲು 5ರಿಂದ 10 ಎಕರೆ ಅವಶ್ಯವಿದ್ದು, ದಾನಿಗಳು ಯಾರಾದರೂ ನೀಡಿದ್ದಲ್ಲಿ ಅವರ ಹೆಸರನ್ನಿಟ್ಟು ಪ್ರಾರಂಭಿಸಲಾಗುತ್ತದೆ. ದಾನಿಗಲು ಮುಂದೆ ಬರದಿದ್ದರೆ ಸಂಸ್ಥೆಯೇ ಸ್ವಂತವಾಗಿ ಖರೀದಿ ಮಾಡಿ ಗುರುಕುಲ ಶಿಕ್ಷಣವನ್ನು ಪ್ರಾರಂಭಿಸಲಿದೆ’ ಎಂದು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಿದ್ದು, ಅದರಿಂದ ಆಹಾರ ಧಾನ್ಯ, ಪರಿಸರಕ್ಕೆ ಹಾನಿಯಾಗಿದೆ. ಹೀಗಾಗಿ ಸೇವಿಸುವ ಆಹಾರವೂ ವಿಷಯುಕ್ತವಾಗಿದೆ. ಹೀಗಾಗಿ ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಷಮುಕ್ತ ಕೃಷಿ ವಿಚಾರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕೃಷಿ ತಜ್ಞ ನಾರಾಯಣರೆಡ್ಡಿ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು.
‘ಗೋವುಗಳ ರಕ್ಷಣೆಗೋಸ್ಕರ ಗೋ ಶಾಲೆಗಳನ್ನು ತೆರೆಯಲಾಗುವುದು. ಇದಕ್ಕಾಗಿ ₨ 5 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಅಲ್ಲದೇ ಎಲ್ಲೆಡೆ ಗೋಮೂತ್ರ ಸಂಗ್ರಹ ಕೇಂದ್ರವನ್ನು ಪ್ರಾರಂಭ ಮಾಡಲಾಗುತ್ತಿದ್ದು, ಗೋವಿನಿಂದ ಪಡೆದ ಮೂತ್ರದಿಂದ ಫಿನಾಯಿಲ್, ಸೊಳ್ಳೆ ಬತ್ತಿಗಳಂತಹ ಉತ್ಪನ್ನ ತಯಾರಿಕಾ ಘಟಕ ನಿರ್ಮಾಣ ಮಾಡಲಿದ್ದೇವೆ’ ಎಂದು ಹೇಳಿದರು.
ಭಾರತ ಸ್ವಾಭಿಮಾನ ಟ್ರಸ್ಟ್ನ ಜಿಲ್ಲಾ ಪ್ರಭಾರಿ ರಾಮಚಂದ್ರ ಹೆಗಡೆ, ಪತಂಜಲಿ ಯೋಗ ಸಮಿತಿಯ ಮಾರ್ಗದರ್ಶಕ ಬಿ.ಜಿ.ಮೋಹನ್, ಮಹಿಳಾ ಘಟಕದ ಸದಸ್ಯೆ ನಯನಾ ನೀಲಾವರ, ಶ್ರೀನಾಥ್ ಉಪಸ್ಥಿತರಿದ್ದರು
Leave a Comment