ಹಳಿಯಾಳ ;
ಸಚಿವ ಆರ್.ವಿ. ದೇಶಪಾಂಡೆ, ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ಅವರು ಮುಂದಿನ ದಿನಗಳಲ್ಲಿ ದಲಿತರ ಬಹುದಿನಗಳ ಬೇಡಿಕೆಯಾದ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಇಂದಿರಾನಗರದ ಮುಂದಿನ ಪುರಸಭೆಗೆ ಸೇರಿದ ಖಾಲಿ ನಿವೇಶನದಲ್ಲಿ ಅಂಬೇಡ್ಕರ ಭವನ ನಿರ್ಮಿಸಲು ಮುಂದಾಗಬೇಕು ಇದನ್ನು ಬಿಟ್ಟು ವಿಳಂಭ ಧೋರಣೆಯನ್ನು ಅನುಸರಿಸಿ ದಲಿತರ ತಾಳ್ಮೆಯನ್ನು ಪರೀಕ್ಷಿಸಲು ಮುಂದಾದಲ್ಲಿ ಸಚಿವ ದೇಶಪಾಂಡೆ ಮತ್ತು ಎಮ್.ಎಲ್.ಸಿ ಮನೆಗಳ ಮುಂದೆ ಊಗ್ರಸ್ವರೂಪದ ಹೋರಾಟ ಹಮ್ಮಿಕೊಳ್ಳಲು ದಲಿತ ಸಂಘಟನೆಗಳು ಹಿಂಜರಿಯುವುದಿಲ್ಲವೆಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ ಖಡಕ್ ಎಚ್ಚರಿಕೆ ನೀಡಿದರು.
ಬುಧವಾರ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ದಲಿತ ಒಕ್ಕೂಟದ ಸಹಯೋಗದಲ್ಲಿ ನಡೆದ ಡಾ. ಬಾಬಾಸಾಹೇಬ ಅಂಬೇಡ್ಕರ ನಿವೇಶನ ಮಂಜೂರಾತಿಗಾಗಿ ಸರಕಾರದ ಗಮನ ಸೆಳೆಯಲು ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ರ್ಯಾಲಿ ಹಾಗೂ ಅಹೋರಾತ್ರಿ ಹೋರಾಟಕ್ಕೆ ಶ್ರೀ ಭಗವಾನ್ ಬುದ್ದ ವೇದಿಕೆಯಲ್ಲಿ ಚಾಲನೆ ನೀಡಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪುರಸಭೆಗೆ ಮುತ್ತಿಗೆ ಕಪ್ಪು ಬಾವುಟ ಹಾರಿಸುವ ಎಚ್ಚರಿಕೆ :- ಪಟ್ಟಣದ ಮೌರ್ಯ ಹೋಟೆಲ್ ಪಕ್ಕದ 20 ಗುಂಟೆ ನಿವೇಶನದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಭವನ ನಿರ್ಮಿಸಲು ತಾಲೂಕಾ ಆಡಳಿತ ಮತ್ತು ಪುರಸಭೆಯವರು ವಿಳಂಭಧೋರಣೆಯನ್ನು ಅನುಸರಿಸುತ್ತಿದ್ದಾರೆ. ಹಲವಾರು ಬಾರಿ ಸಚಿವರು ಸೇರಿದಂತೆ ಸಂಬಂದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದಿರುವುದರಿಂದ ಇದೀಗ ಪ್ರತಿಭಟನೆಯ ಮಾಡಬೇಕಾಗಿದೆ ಎಂದರು. ಅಲ್ಲದೇ ಇದೇ ದಿ 12 ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸೂಕ್ತವಾದ ಠರಾವು ಪಾಸ್ ಮಾಡುವಲ್ಲಿ ಆಡಳಿತ ಮಂಡಳಿಯವರು ವಿಫಲರಾದಲ್ಲಿ ಪುರಸಭೆಗೆ ಮುತ್ತಿಗೆ ಮತ್ತು ಕಪ್ಪು ಬಾವುಟ ಹಾರಿಸುವುದರ ಮೂಲಕ ದಲಿತರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪಟ್ಟಣದ ಹೊರ ಭಾಗದಲ್ಲಿ ಭವನ ನಿರ್ಮಿಸುವ ನಿರ್ಣಯವನ್ನು ಕೈಬಿಡಬೇಕು, ದಲಿತರ ದಶಕಗಳ ಬೇಡಿಕೆಯಾದ ಅಂಬೇಡ್ಕರ ಭವನಕ್ಕೆ ಆದಷ್ಟು ಬೇಗನೆ ಅಡಿಗಲ್ಲು ಹಾಕಬೇಕು ಅದು ಆಗುವವರೆಗೂ ಅಹೋರಾತ್ರಿ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಗಮನ ಸೆಳೆದ ಬೃಹತ್ ಪ್ರತಿಭಟನೆ:- ಬೃಹತ್ ಪ್ರತಿಭಟನೆ ಪ್ರಯುಕ್ತ ಮುಂಜಾನೆ ಪಟ್ಟಣದ ಯಲ್ಲಾಪೂರನಾಕಾದಲ್ಲಿರುವ ಅಂಬೇಡ್ಕರ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ, ಹಲಗೆ ಬಾರಿಸುವುದರ ಮೂಲಕ ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಲಾಯಿತು. ಅಂಬೇಡ್ಕರ ಅವರ ಭಾವಚಿತ್ರ ಹೊತ್ತ ಸಪ್ತ ಅಶ್ವಗಳನ್ನು ಹೊಂದಿದ ರಥದ ಮೇಲೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಂಜ್ ಪಥಕ, ಜಗ್ಗಲಗಿ, ಸಿದ್ದಿ ಸಮುದಾಯದ ಸಾಂಪ್ರದಾಯಿಕ ನೃತ್ಯ, ಕರಡಿ ಮಜಲುಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನಾ ರ್ಯಾಲಿಯಲ್ಲಿ ಮುಖಂಡರಾದ ಮಾರುತಿ ಕಲಭಾವಿ, ಯಲ್ಲಪ್ಪಾ ಹೊನ್ನೋಜಿ, ಮೇಘರಾಜ್ ಮೇತ್ರಿ, ಮಂಜುನಾಥ ಚಲವಾದಿ, ಅಯ್ಯರ ನಾರಾಯಣಸ್ವಾಮಿ, ಜಯಮ್ಮಾ, ವಸಂತಕುಮಾರಿ, ಸಂತೋಷ ಘಟಕಾಂಬಳೆ, ಆನಂದ, ಅಣ್ಣಪ್ಪಾ, ಈರಣ್ಣಾ ವಡ್ಡರ, ಜ್ಞಾನೇಶ್ವರ ಗಜಾಕೋಶ, ಆನಂದ ಮಾದರ, ಬಡೇಸಾಬ ಕಕ್ಕೇರಿ, ಭರಮೋಜಿ ಮಣ್ಣವಡ್ಡರ, ಮಾರುತಿ ಕುರಿಯಾರ್, ವಿಲಾಸ ಕಣಗಲಿ, ಹನುಮಂತ ತಳವಾರ, ಮತ್ತಯ್ಯಾ ಮಾದರ, ಸುಂದರ ಮಾದರ, ನಾಗಪ್ಪಾ ಮೇತ್ರಿ, ಗೋಪಾಲ ಮೇತ್ರಿ, ಸುರೇಶ ಮೇತ್ರಿ ಇದ್ದರು.
Leave a Comment