ದಾಂಡೇಲಿ:
ಭಾರತೀಯ ಜನತಾ ಪಕ್ಷದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯು ಜೊಯಿಡಾದಲ್ಲಿ ಮೇ 13 ರಂದು ನಡೆಯಲಿದೆ. ಈ ಸಭೆಯಲ್ಲಿ ಬಾ.ಜ.ಪ ರಾಜ್ಯ ಪ್ರಧಾನ ಕಾರ್ಯದರ್ಶಿ, ಪಕ್ಷದ ಜಿಲ್ಲಾ ಉಸ್ತುವಾರಿ ಎನ್.ರವಿಕುಮಾರ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಷೇತ್ರ ಉಸ್ತುವಾರಿ ಎನ್.ಎಸ್. ಹೆಗಡೆ, ಹಾಗೂ ಜಿಲ್ಲೆಯ ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಮಂಡಳ ಅಧ್ಯಕ್ಷರು, ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದು ಬಾ.ಜ.ಪ ದಾಂಡೇಲಿ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ. ದೇಶಪಾಂಡೆಯವರ ಸ್ವ ಕ್ಷೇತ್ರ ದಾಂಡೇಲಿಯಲ್ಲಿ ಮಟಕಾ, ಜೂಜಾಟಗಳು ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದಂತಾಗಿದ್ದಾರೆ. ಇದರಿಂದ ಬಡವರು ಬೀದಿ ಪಾಲಾಗುತ್ತಿದ್ದಾರೆ. ನಗರದಲ್ಲಿ ನಡೆಯುವ ಭಾಗಶಹ ಆ ಎಲ್ಲ ಕಾಮಗಾರಿಗಳೂ ಕಳಪೆಯಿಂದ ಕೂಡಿವೆ. ಈ ಬಗ್ಗೆಯೂ ಪರಿಶೀಲನೆಯಾಗಬೇಕು. ನಗರದ ಎಲ್ಲ ಕಸವನ್ನು ತಂದು ನಗರದ ಮದ್ಯ ಭಾಗದಲ್ಲಿರುವ ಅಂಚೆ ಕಾರ್ಯಾಲಯದ ಹಿಂದುಗಡೆಯ ಖಾಲಿ ಜಾಗದಲ್ಲಿ ಹಾಕಲಾಗುತ್ತಿದೆ. ಇದರಿಂದ ಸುತ್ತ ಮುತ್ತಲಿನ ಪರಿಸರ ಹಾಳಾಗುತ್ತಿದೆ. ಶಾಲೆ ಮತ್ತು ಸರಕಾರಿ ಕಚೇರಿಗಳಿಗೆ ತೊಂದರೆಯಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಸ್ಥಳ ಮಂಜೂರಿಯಾಗಿದ್ದರೂ ಇನ್ನೂ ಕಾರ್ಯಾರಂಭ ಆಗಿಲ್ಲ.
ಪಟೇಲನಗರ, ದೇಶಪಾಂಡೆ ಕಾಲನಿ, ಗಾಂಧಿನಗರ, ಆಶ್ರಯ ಕಾಲೊನಿ, ಜೆ.ಎನ್. ರಸ್ತೆ ಸೇರಿದಂತೆ ನಗರದಲ್ಲಿ ಹಲವೆಡೆ ಅತಿಕ್ರಮಣಗಳು ನಡೆಯುತಿವೆ. ಪುಟಪಾತ್ಗಳನ್ನೂ ಆಕ್ರಮಿಸಿದ್ದಾರೆ. ಇದಕ್ಕೆ ಕೆಲವು ನಗರಸಭಾ ಸದಸ್ಯರ ಕುಮ್ಮಕ್ಕೂ ಇದೆ. ಈ ಬಗ್ಗೆ ನಗರಾಡಳಿತ ಗಮನ ಹರಿಸುತ್ತಿಲ್ಲ. ರಸ್ತೆ, ದಾರಿ ದೀಪ, ಸ್ವಚ್ಚತೆಯ ಬಗ್ಗೆ ಕೇಳುವವರೇ ಇಲ್ಲ. ನಗರಾಡಳಿತ ಸಂಪೂರ್ಣವಾಗಿ ಕುಸಿದಿದ್ದು, ಜನರೂ ಬೇಸತ್ತಿದ್ದಾರೆ. ಈ ಬಗ್ಗೆ ಸಚಿವರಾದರೂ ಗಮನ ಹರಿಸಿ ಸರಿ ಪಡಿಸಬೇಕು. ಇಲ್ಲವಾದಲ್ಲಿ ನಗರದ ಜನತೆಯ ಸೇರಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ. ಕಾಂಗ್ರೆಸ್ ಸರಕಾರದ ಎಲ್ಲಾ ಅಭಿವೃದ್ದಿ ಕೆಲಸಗಳು ಜನರ ಮೂಗಿಗೆ ತುಪ್ಪ ಸವರುವ ರೀತಿಯಂತಾಗಿದೆ. ಎಲ್ಲವನ್ಣೂ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಬಾ.ಜ.ಪ ಪ್ರಧಾನ ಕಾರ್ಯದರ್ಶಿಗಳಾದ ನರೇಂದ್ರ ಚೌಹಾಣ, ಸುಭಾಸ ಅರವೇಕರ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾದ ಅಶೋಕ ಪಾಟೀಲ, ಅಬ್ದುಲ್ ವಹಾಬ ಬಾನ್ಸರಿ, ನಗರ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ದೇವಕ್ಕ ಕೆರೆಮನೆ, ಅಲ್ಪ ಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ರಫೀಕ್ ಹುದ್ದಾರ, ನಗರ ಘಟಕದ ಅಧ್ಯಕ್ಷ ರಿಯಾಜ ಖಾನ್, ಪ.ಜಾತಿ ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ್, ಯುವ ಘಟಕದ ಅಧ್ಯಕ್ಷ ಮಂಜುನಾಥ ಪಾಟೀಲ, ಹಿಂದುಳಿದ ವರ್ಗಗಳ ಅಧ್ಯಕ್ಷ ಗುರು ಮಠಪತಿ, ಪ್ರಮುಖರಾದ ಎಮ್.ಎಸ್. ನಾಯ್ಕ, ಚಿದಾನಂದ ಕಲಶೆಟ್ಟಿ ಮುಂತಾದವರಿದ್ದರು.
Leave a Comment