ಹೊನ್ನಾವರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುತ್ತಿದ್ದು, ನಿರುದ್ಯೋಗಿ ಯುವಕ ಯುವತಿಯರಿಗೆ ಉಪಯೋಗವಾಗಲೆಂದು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ನಿರುದೋಗಿಗಳಿಗೆ ಬಹುಪಯೋಗವಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿ.ಪಂ.ಸದಸ್ಯೆ ಪುಷ್ಪಾ ನಾಯ್ಕ ಹೇಳಿದರು.
ತಾಲೂಕು ಆಡಳಿದ ಆಶ್ರಯದಲ್ಲಿ ನಡೆದ ತಾ.ಪಂ.ಸಭಾಭನವದಲ್ಲಿ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯ ವೆಬ್ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕಿನವರು ಇಂಥ ಇಂಥಹ ಕೌಶಲ್ಯ ತರಬೇತಿ ಪಡೆದ ಯುವಕ ಯುವತಿಯರಿಗೆ ಸಾಲಸೌಲಭ್ಯ ನೀಡುವಾಗ ಕಿರುಕುಳ ನೀಡುವುದನ್ನು ತಪ್ಪಿಸಲು ಅವರೊಂದಿಗೆ ತಾಲೂಕಾಡಳಿತದ ಅಧಿಕಾರಿಗಳು ಒಡಂಬಡಿಕೆ ಮಾಡಿಕೊಳ್ಳುವುದು ಉತ್ತಮ ಎಂದರು.
ಪ.ಪಂ.ಅಧ್ಯಕ್ಷೆ ಜೈನಾಬಿ ಸಾಬ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಆನ್ಲೈನ್ ಮೂಲಕ ಅರ್ಹ ಯುವಕಯುವತಿಯರು ಅರ್ಜಿಸಲ್ಲಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಹೇಶ ಕುರಿಯವರ್ ಮಾತನಾಡಿ ಯೋಜನೆಯಲ್ಲಿ ರಾಜ್ಯದಲ್ಲಿ 5 ಲಕ್ಷ ಯುವಕರಿಗೆ ಸೌಲಭ್ಯ ದೊರಲಿದ್ದು ತಾಲೂಕಿನ ಫಲಾನುಭವಿಗಳು ತರಬೇತಿಯಲ್ಲಿ ಪಾಲ್ಗೊಳ್ಗೊಳುವಂತೆ ಕರೆ ನೀಡಿದರು.
ತಹಸೀಲ್ದಾರ ವಿ.ಆರ್.ಗೌಡ, ತಾ.ಪಂ.ಉಪಾಧ್ಯಕ್ಷೆ ಲಲಿತಾ ನಾಯ್ಕ, ಸದಸ್ಯರಾದ ಗಣಪಯ್ಯ ಗೌಡ, ಲೋಕೇಶ ನಾಯ್ಕ, ಮೀರಾ ತಾಂಡೇಲ, ಪ.ಪಂ.ಸ್ಥಾಯಿ ಸಮಿತಿ ಚೇರ್ಮನ್ ಸುರೇಶ ಮೇಸ್ತ ಉಪಸ್ಥಿತರಿದ್ದರು. ಸಮಪನ್ಮೂಲ ವ್ಯಕ್ತಿ ಬಾಲಚಂದ್ರ ನಾಯ್ಕ ಪ್ರಾಸ್ತಾವಿಕ ಮಾತನಾಡಿ ಯೋಜನೆಯ ಕುರಿತು ವಿವರ ನೀಡಿದರು. ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
Leave a Comment