ಭಟ್ಕಳ:
ನಮ್ಮಲ್ಲಿ ನ್ಯಾಯ, ನೀತಿ, ಧರ್ಮ, ದೇವರ ಮೇಲೆ ಅಭಿಮಾನವಿದ್ದರೆ ಮಾತ್ರ ಜಯಗಳಿಸಲು ಸಾಧ್ಯವಾಗುವುದು, ಆಸ್ತಿ, ಐಶ್ವರ್ಯ, ಅಹಂಕಾರ, ಜನಬಲ ಮಾತ್ರವಿದ್ದರೆ ಜಯಗಳಿಸುವುದು ಅಸಾಧ್ಯ ಎಂದು ಶ್ರೀ ಪರ್ತಗಾಳಿ ಜೀವೋತ್ತಮ ಮಠದ ಕಿರಿಯ ಸ್ವಾಮೀಜಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ವಡೇರ ಮಠದಲ್ಲಿ ಮೊಕ್ಕಾಂ ಹೂಡಿದ್ದ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ನೆರವೇರಿಸಿ ಶಿಷ್ಯ ಜನರನ್ನುದ್ದೇಶಿಸಿ ಆಶೀರ್ವಚನ ನೀಡುತ್ತಿದ್ದರು.
ಮಹಾಭಾರತದ ಸಂದರ್ಭವನ್ನು ನೆನಸಿಕೊಂಡ ಅವರು ಕೌರವರಲ್ಲಿ ಅತಿ ದೊಡ್ಡ ಸೈನ್ಯ, ಸಾಮ್ರಾಜ್ಯವಿತ್ತು, ಆದರೆ ಪಾಂಡವರೆದುರು ಜಯಗಳಿಸಲು ಸಾಧ್ಯವಾಗಲಿಲ್ಲ. ಶ್ರೀ ಕೃಷ್ಣನ ಸ್ಮರಿಸದೇ ಪಗಡೆಯಾಟದಲ್ಲಿ ಸೋತು ದ್ರೌಪದಿಯ ವಸ್ತ್ರಾಪಹರಣವಾಗುವ ಹಾಗಾಯಿತು ಎನ್ನುವ ಘಟನೆಯನ್ನು ಕೂಡಾ ಶ್ರೀಗಳು ಸ್ಮರಿಸಿದರು. ನಾವು ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ನಂಬಿದ ದೇವರು, ಗುರುಗಳ ಸ್ಮರಣೆ ಅಗತ್ಯವಾಗಿ ಮಾಡಬೇಕು. ಯಾವುದೇ ಕೆಲಸವನ್ನು ಅಹಂಕಾರದಿಂದ, ನಮ್ಮ ಧರ್ಮ ಸಂಸ್ಕøತಿಯನ್ನು ಮರೆತು ಮಾಡಿದರೆ ಅಪಾಯ ಎದುರಾಗುವುದು ಎಂದೂ ಹೇಳಿದರು.
ಶ್ರೀ ಗೋಕರ್ಣ ಪರ್ತಗಾಳಿ ಮಠದ ಹಿರಿಯ ಶ್ರೀಗಳಾದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಯವರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಜಾತಿ ಮತ ಧರ್ಮಗಳ ಬೇದವಿಲ್ಲದೇ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಭಟ್ಕಳ ಮೂಲದ ಸಿಂಧೂನೂರಿನ ಹೊಟೇಲ್ ಉದ್ಯಮಿ ವೆಂಕಟೇಶ ಸುಬ್ರಾಯ ಪ್ರಭು ಇವರನ್ನು ಉಭಯ ಶ್ರೀಗಳು ಪ್ರಶಂಸಿಸಿ ಸಮಾಜದ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಿ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆಯನ್ನು ನೀಡುವಂತಾಗಲಿ ಎಂದು ಹರಸಿದರು.
ಸನ್ಮಾನಿತರು ಪ್ರಕೃತಿ ವಿಕೋಪದಿಂದ ಹಾನಿಯಾದ ಪ್ರದೇಶಗಳಿಗೆ ತೆರಳಿ ಆಹಾರ ಸಾಮಾಗ್ರಿ, ಬಟ್ಟೆ ಸೇರಿದಂತೆ ವಿವಿಧ ಮೂಲಭೂತ ಅಗತ್ಯಗಳ ಪೊರೈಸುವುದಲ್ಲದೇ ಬರಪೀಡಿತ ಪ್ರದೇಶಗಳಿಗೆ ನಿರಂತರ ಸಹಾಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದುದನ್ನು ಗುರುತಿಸಿ ಗೌರವಿಸಲಾಗಿದೆ.
ಈ ಸಂದರ್ಬದಲ್ಲಿ ಜಿಎಸ್ಬಿ ಹತ್ತು ಸಮಸ್ತರ ಅಧ್ಯಕ್ಷ ಹರಿಶ್ಚಂದ್ರ ಕಾಮತ, ನಾಗೇಶ ಕಾಮತ, ಸುಬ್ರಾಯ ಕಾಮತ, ವಿನಾಯಕ ಕಾಮತ, ವಡೇರಮಠದ ಅರ್ಚಕ ರಮೇಶ ಭಟ್, ಕೊಲ್ಲಾಪುರದ ಸುರೇಶ ಬಾಳಗಿ ಸೇರಿದಂತೆ ವಿವಿದಡೆಯಿಂದ ಆಗಮಿಸಿದ ಭಕ್ತಜನರು ಹಾಜರಿದ್ದರು.
ಶ್ರೀಕೃಷ್ಣಾ ಮಿಲ್ಕ್ಸನ ಪುತ್ತು ಪೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಝೇಂಕಾರ ಸಂಸ್ಥೆಗಳ ಅಧ್ಯಕ್ಷ ಪ್ರಸನ್ನ ಪ್ರಭು ನಿರೂಪಿಸಿದರು.
Leave a Comment