ಭಟ್ಕಳ :
ಇಲ್ಲಿನ ತಾಲೂಕು ಪಂಚಾಯತ್ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತೇ ಗಂಭೀರ ಚರ್ಚೆ ನಡೆದು ಠರಾವು ಮಾಡಿ ಸಿಬ್ಬಂದಿ ಭರ್ತಿಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮಾಹಿತಿ ನೀಡಲು ಆಗಮಿಸಿದ್ದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ ಶೆಟ್ಟಿ ಮಾತನಾಡಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕ ಕಾರ್ಯನಿರ್ವಹಣೆಗೆ ತೊಂದರೆಯಾಗಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ 32 ಡಿ ದರ್ಜೆ ಸಿಬ್ಬಂದಿಗಳ ಹುದ್ದೆ ಖಾಲಿ ಇದೆ. 28 ನರ್ಸಗಳ ಮಂಜೂರಿ ಹುದ್ದೆ ಇದ್ದು 12 ಹುದ್ದೆ ಖಾಲಿ ಇದೆ. ಹಾಗೂ ಕಚೇರಿಯಲ್ಲಿ ಸುಪರಿಡೆಂಟೆಂಟ್ ಸೇರಿದಂತೆ ಏಳೂ ಹುದ್ದೆ ಖಾಲಿ ಇದೆ. ಕಣ್ಣು, ಪ್ರಸೂತಿ ಸೇರಿದಂತೆ ಮೂರು ವೈದ್ಯ ಹುದ್ದೆ ಖಾಲಿ ಇದೆ. ಕಚೇರಿ ಕೆಲಸವನ್ನೂ ವೈದ್ಯರು ಮಾಡುವ ಪರಿಸ್ಥಿತಿ ಇದೆ. ವೈದ್ಯರು ಚಿಕಿತ್ಸೆ ನೀಡಬೇಕೋ ಅಥವಾ ಕಚೇರಿ ಕೆಲಸ ಮಾಡಬೇಕೋ ಎನ್ನುವಂತಾಗಿದೆ. ಆದಷ್ಟು ಬೇಗ ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಂಡರೆ ಅನುಕೂಲವಾಗುತ್ತದೆ ಎಂದರು.
ತಾ.ಪಂ. ಸದಸ್ಯ ಹನುಮಂತ ನಾಯ್ಕ ಆಸ್ಪತ್ರೆಯ ಪ್ರಸೂತಿ ವೈದ್ಯರು ಪದೇ ಪದೇ ರಜೆ ಮೇಲೆ ಹೋಗುತ್ತಿದ್ದಾರೆ. ಇದರಿಂದ ಗರ್ಭಿಣಿ ಸ್ತ್ರೀಯರು ಹೆರಿಗೆಗಾಗಿ ಹೊನ್ನಾವರ, ಕುಂದಾಪುರ ಆಸ್ಪತ್ರೆಗೆ ಹೋಗುವಂತಾಗಿದೆ ಎಂದಾಗ, ವೈದ್ಯ ಮಂಜುನಾಥ ಶೆಟ್ಟಿ ಉತ್ತರಿಸಿ ಪ್ರಸೂತಿ ವೈದ್ಯರು ಇಲ್ಲಿಂದ ವರ್ಗಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅವರಿಗೆ ಇಲ್ಲಿರಲು ಮನಸ್ಸಿಲ್ಲ. ಇಲ್ಲಿನ ವಿವಿಧ ಸಮಸ್ಯೆಯಿಂದಾಗಿ ಇಲ್ಲಿ ಕೆಲಸ ಮಾಡಲು ಯಾರೂ ಮನಸ್ಸು ಮಾಡುತ್ತಿಲ್ಲ. ನಾನೂ ಕೂಡ ಬೇರೆ ಕಡೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ಆಡಳಿತ ವೈದ್ಯಾಧಿಕಾರಿ ಹುದ್ದೆ ಬೇಡವೆಂದರೂ ನನಗೆ ನೀಡಲಾಗಿದೆ. ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಕಷ್ಟವಾಗುತ್ತಿದ್ದು, ಆದರೂ ಕೂಡ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಕೆಲ ವೈದ್ಯರು, ಹಿರಿಯ ನರ್ಸಗಳು ಇಲ್ಲಿಂದ ಬೇರೆ ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರು ರಜೆ ಮೇಲಿದ್ದಾಗ ಹೊನ್ನಾವರ ಮತ್ತಿತರ ಕಡೆಯಿಂದ ವೈದ್ಯರನ್ನು ನಿಯೋಜನೆ ಮಾಡಿದ್ದರೂ ಬರುತ್ತಿಲ್ಲ ಎಂದು ಹೇಳಿದ ಅವರು ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಖಾಲಿ ಇರುವ ಡಿ ದರ್ಜೆ, ಕಚೇರಿ ಹುದ್ದೆ ಹಾಗೂ ನರ್ಸಗಳ ಹುದ್ದೆಯನ್ನು ಭರ್ತಿ ಮಾಡಿದಲ್ಲಿ ತ್ವರಿತ ಕಾರ್ಯನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು.
ತಾಪಂ. ಸದಸ್ಯೆ ಜಯಲಕ್ಷ್ಮೀ ಗೊಂಡ ಮಾತನಾಡಿ ಆಸ್ಪತ್ರೆಯ ಸಮಸ್ಯೆ ಬಗ್ಗೆ ರಕ್ಷಾ ಸಮಿತಿ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಸಿಬ್ಬಂದಿ ಸಮಸ್ಯೆ ಬಗ್ಗೆ ಶಾಸಕರು ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು. ಪ್ರತಿ ಸಭೆಯಲ್ಲೂ ಹುದ್ದೆ ಖಾಲಿ ಬಗ್ಗೆ ತಿಳಿಸಲಾಗಿದೆ. ಮೇಲಾಧಿಕಾರಿಗಳಿಗೂ ಸಮಸ್ಯೆ ಬಗ್ಗೆ ಅರಿವಿದೆ. ಆದರೆ ಖಾಲಿ ಇರುವ ಹುದ್ದೆ ಭರ್ತಿ ಮಾತ್ರ ಆಗಿಲ್ಲ ಎಂದು ವೈದ್ಯ ಮಂಜುನಾಥ ಶೆಟ್ಟಿ ತಿಳಿಸಿದರು. ಆಸ್ಪತ್ರೆಯ ಖಾಲಿ ಹುದ್ದೆ ಭರ್ತಿ ಬಗ್ಗೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚಿಸುವುದಾಗಿ ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ ಹೇಳಿದರು. ಸದಸ್ಯ ಪಾಶ್ರ್ವನಾಥ ಶೆಟ್ಟಿ ಮತ್ತು ಮಹಾಬಲೇಶ್ವರ ನಾಯ್ಕ ಆದಷ್ಟು ಬೇಗ ಸಮಸ್ಯೆ ಸರಿಪಡಿಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತಾಗಬೇಕು ಎಂದರು. ಕೃಷಿ ಇಲಾಖೆಯಲ್ಲಿನ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುವಂತೆ ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಫಲಾನುಭವಿಗಳ ಆಯ್ಕೆ ಮಾಡುವಂತೆ ಸೂಚಿಸಲಾಯಿತು. ತಾ.ಪಂ. ಪ್ರಭಾರೆ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಕೋಟ್ಯಾನ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ವ್ಯವಸ್ಥಾಪಕ ಸುಧೀರ್ ಗಾಂವಕರ್ ಸ್ವಾಗತಿಸಿ, ವಂದಿಸಿದರು.
Leave a Comment