ಭಟ್ಕಳ:
ದೇವಸ್ಥಾನಗಳನ್ನು ಮಲಿನಗೊಳಿಸಿ ಹಿಂದೂಗಳ ಭಾವನೆಗಳನ್ನು ಕೆರಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ಅಡಿಯಲ್ಲಿ ವಿವಿಧ ಸಂಘಟನೆಗಳು ಇಲ್ಲಿನ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಡಿ.ವೈ.ಎಸ್.ಪಿ. ಅವರಿಗೆ ಮನವಿ ಸಲ್ಲಿಸಿದವು.
ಮನವಿಯಲ್ಲಿ ನಗರದ ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನ ಅನೇಕ ಕುಟುಂಬಗಳ ಆರಾಧ್ಯ ದೇವರಾಗಿದ್ದು ಸಮಸ್ತ ಹಿಂದೂಗಳ ಶೃದ್ಧಾ ಭಕ್ತಿಯ ಕೇಂದ್ರವಾಗಿದೆ. ದೇವಸ್ಥಾನದ ಗೋಡೆಗೆ ರಕ್ತಬಳಿದು ಮಲಿನಗೊಳಿಸಿರುವುದು ಖಂಡನೀಯ. ಕಳೆದ ಅನೇಕ ವರ್ಷಗಳಿಂದ ಹಿಂದೂಗಳ ಶೃದ್ಧಾ ಭಕ್ತಿ ಕೇಂದ್ರಗಳಾದ ದೇವಾಲಯಗಳನ್ನು ಮಲಿನಗೊಳಿಸುವ ಕೃತ್ಯವನ್ನು ಮಾಡುತ್ತಾ ಬಂದಿದ್ದು ಹಲವಾರು ಬಾರಿ ಘಟನೆ ನಡೆದರೂ ಹಿಂದೂ ಸಮಾಜ ಸಂಯಮದಿಂದ ನಡೆದುಕೊಂಡು ಬಂದಿದೆ. ಈ ಹಿಂದೆ ಅನೇಕ ಬಾರಿ ದೇವಾಲಯಗಳ ಮಲಿನಗೊಳಿಸುವ ಕಾರ್ಯ ನಡೆದಾಗಲೂ ಪೊಲೀಸ್ ಇಲಾಖೆಯಿಂದ ಸೂಕ್ತ ತನಿಖೆಯಾಗದೇ ನಿರಾಸೆಯೇ ನಮಗೆ ದೊರೆತಿದೆ. ನಮ್ಮ ಮನವಿಗಳಿಗೂ ಕೂಡಾ ಮನ್ನಣೆ ದೊರೆಯಲಿಲ್ಲ. ಮತ್ತೆ ಮತ್ತೆ ಘಟನೆಗಳು ನಡೆಯುತ್ತಲೇ ಇದ್ದು ಕಿಡಿಗೇಡಿ ಕೃತ್ಯ ಮಾಡುವವರಿಗೆ ಇದೊಂದು ಅವಕಾಶವಾದಂತಾಗಿದೆ. ಭಟ್ಕಳದಲ್ಲಿ ದೇವಸ್ಥಾನಗಳು, ಮಸೀದಿಗಳು, ಚರ್ಚುಗಳೆಲ್ಲವೂ ಇದ್ದರೂ ಸಹ ಕೇವಲ ದೇವಸ್ಥಾನಗಳನ್ನೇ ಗುರಿಯಾಗಿಟ್ಟು ಮಲಿನಗೊಳಿಸಲು ಕಾರಣವೇನೆಂಬುದು ನಮಗೆ ತಿಳಿಯಬೇಕಾಗಿದೆ. ಶ್ರೀ ದಂಡಿನ ದುರ್ಗಾದೇವಿ ದೇವಸ್ಥಾನದ ಗೋಡೆಗಳಿಗೆ ರಕ್ತ ಬಳಿದು ಮಲಿನಗೊಳಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರಿ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಡಿ.ಬಿ. ನಾಯ್ಕ ಕಿಡಿಗೇಡಿಗಳು ಯಾರೇ ಆಗಲಿ ಇಂತಹ ಕೃತ್ಯ ಮಾಡುವುದು ಖಂಡನೀಯವಾಗಿದೆ. ದೇವಾಲಯಗಳು ಹಿಂದೂಗಳ ಶೃದ್ಧಾ ಕೇಂದ್ರವಾಗಿದ್ದು ಅವುಗಳನ್ನು ಮಲಿನಗೊಳಿಸುವುದನ್ನು ಹಿಂದೂಗಳೆಂದೂ ಸಹಿಸಲು ಸಾಧ್ಯವಿಲ್ಲ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಬಿ.ಜೆ.ಪಿ. ಪ್ರಮುಖ ಜೆ.ಡಿ.ನಾಯ್ಕ ಮಾತನಾಡಿ ದೇವಸ್ಥಾನಗಳನ್ನು ಮಲಿನಗೊಳಿಸುವ ಕಾರ್ಯ ಹಲವಾರು ವರ್ಷಗಳಿಂದ ನಡೆಯುತ್ತಿದ್ದರೂ ಸಹ ಸೂಕ್ತ ಕ್ರಮವಾಗಲಿಲ್ಲ. ಇದರಿಂದ ಮತ್ತಷ್ಟು ಪುಷ್ಟಿ ನೀಡಿದಂತಾಗಿದ್ದು ಪದೇ ಪದೇ ಘಟನೆ ನಡೆಯಲು ಕಾರಣವಾಗಿದೆ. ಭಟ್ಕಳದಲ್ಲಿನ ದೇವಾಲಯಗಳಿಗೆ, ಮಸೀದಿ ಮತ್ತು ಚರ್ಚುಗಳಿಗೆ ಈ ಹಿಂದೆ ಭದ್ರತೆಯನ್ನು ವದಗಿಸಲಾಗಿತ್ತು. ಆಗ ಯಾವುದೇ ಕಡಿಗೇಡಿ ಕೃತ್ಯ ನಡೆದಿಲ್ಲ. ಮತ್ತೆ ಕೃತ್ಯಗಳು ಮರಿಕಳಿಸಿದ ಹಿನ್ನೆಲೆಯಲ್ಲಿ ಇಲಾಖೆ ಜಾಗೃತವಾಗಬೇಕು ಎಂದು ಆಗ್ರಹಿಸಿದರು.
ಬಿ.ಜೆ.ಪಿ.ಯ ಇನ್ನೋರ್ವ ಪ್ರಮುಖ ಗೋವಿಂದ ನಾಯ್ಕ ಮಾತನಾಡಿ ಹಿಂದೂಗಳು ಎಂದೂ ತಮ್ಮ ತಾಳ್ಮೆಯನ್ನು ಮೀರಿ ವರ್ತಿಸುವವರಲ್ಲ. ಆದರೂ ಸಹ ನಮ್ಮ ತಾಳ್ಮೆಯನ್ನು ಸರಕಾರವೂ ಪರೀಕ್ಷಿಸುತ್ತಿದೆ. ಈ ಹಿಂದೆ ಕರಿಬಂಟ ದೇವಸ್ಥಾನವನ್ನು ಮಲಿನಗೊಳಿಸದಾಗ ಸಹಾಯಕ ಆಯುಕ್ತರಿಗೆ ಸೂಕ್ತ ಕಂಪೌಂಡ ಹಾಕಿಕೊಡಲು ಮನವಿ ಮಾಡಲಾಗಿತ್ತು. ಅತ್ತ ಸರಕಾರವೂ ಮಾಡುವುದಿಲ್ಲ, ನಮಗೂ ಮಾಡಲು ಕೊಡುವುದಿಲ್ಲ ಎನ್ನುವ ಪರಿಸ್ಥಿತಿ ಇದೆ. ಹೀಗೇ ಮುಂದುವರಿದರೆ ನಾವು ಒಂದು ದಿನ ಕರಸೇವೆಯ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಅನಿವಾರ್ಯವಾಗುವುದು ಎಂದರು. ಸರಕಾರಕ್ಕೆ ಗಡುವು ನೀಡಿದ ಅವರು ಮುಂದಾಗುವ ಎಲ್ಲಾ ಕಾರ್ಯಗಳಿಗೆ ಸರಕಾರವೇ ಹೊಳೆಯಾಗಬೇಕಾಗುವುದು ಎಂದರು.
ಪ್ರತಿಭಟನಾ ಮೆರವಣಿಗೆಯು ಶ್ರೀ ದಂಡಿನ ದುರ್ಗಾದೇವಿ ದೇವಾಲಯದಿಂದ ಹೊರಟು ಮುಖ್ಯ ರಸ್ತೆಯಾಗಿ ನಗರ ಪೊಲೀಸ್ ಠಾಣೆಯನ್ನು ತಲುಪಿತ್ತು. ಬಿ.ಜೆ.ಪಿ. ಪ್ರಮುಖ ಸುನಿಲ್ ನಾಯ್ಕ, ಹಿಂ.ಜಾ.ವೇ. ಪ್ರಮುಖ ರಾಘು ನಾಯ್ಕ, ಆಸರಕೇರಿ ಶ್ರೀಧರ ನಾಯ್ಕ, ಆಸರಕೇರಿ ಕೃಷ್ಣಾ ನಾಯ್ಕ, ದಿನೇಶ ನಾಯ್ಕ, ರಾಜೇಶ ನಾಯ್ಕ, ಪರಮೇಶ್ವರ ನಾಯ್ಕ, ಎಂ. ಆರ್. ನಾಯ್ಕ, ವೆಂಕಟೇಶ ದೇವಡಿಗ, ಲಕ್ಷ್ಮೀನಾರಾಯಣ ನಾಯ್ಕ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
Leave a Comment