ಕಾರವಾರ:
ಕರಾವಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ ಸಾವಿರಾರು ಮರಗಳು ನಾಶವಾಗಿದ್ದು, ಅಳಿದುಳಿದ ಸಸ್ಯ ಸಂಕುಲಗಳು ತಮ್ಮ ಜೀವ ಉಳಿಸಿಕೊಳ್ಳಲು ಕಡಲತೀರದಲ್ಲಿ ಆಶ್ರಯ ಪಡೆದಿವೆ!
ರಸ್ತೆ ಅಗಲೀಕರಣಕ್ಕಾಗಿ ಮರ-ಗಿಡಗಳನ್ನು ಕಡಿಯುವ ಬದಲು ಅವನ್ನು ಬುಡಸಮೇತದ ಮಣ್ಣಿನೊಂದಿಗೆ ಸ್ಥಳಾಂತರ ಮಾಡುವ ಯೋಜನೆಗೆ ಅರಣ್ಯ ಇಲಾಖೆ ಮುನ್ನುಡಿ ಬರೆದಿದೆ. ಭಾನುವಾರ ಜಿಲ್ಲಾಕಾರಿ ಕಚೇರಿ ಎದುರು ಇರುವ ಬಾದಾಮಿ ಗಿಡಗಳನ್ನು ಜೆಸಿಬಿ ಮುಖಾಂತರ ಸ್ಥಳಾಂತರಿಸುವ ಸಾಹಸಕ್ಕೆ ಅರಣ್ಯ ಇಲಾಖೆ ಮುಂದಾಯಿತು. ಎರಡು ಜೆಸಿಬಿ ಯಂತ್ರಗಳೊಂದಿಗೆ ಟಿಪ್ಪರ್ ಬಳಸಿ ಗಿಡಗಳನ್ನು ಸ್ಥಳಾಂತರಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ 12 ವರ್ಷದೊಳಗಿನ 30ಕ್ಕೂ ಅಧಿಕ ಗಿಡಗಳನ್ನು ಸ್ಥಳಾಂತರಿಸಲಾಯಿತು. ಇವನ್ನು ಮಕ್ಕಳ ಉದ್ಯಾನವನ ಹಾಗೂ ರವೀಂದ್ರನಾಥ್ ಕಡಲತೀರದಲ್ಲಿ ನೆಡಲಾಯಿತು.
ಬಾರೀ ಮಳೆ ಹಾಗೂ ಬೇರು ನಾಶದ ಭೀತಿ ಈ ಗಿಡಗಳಿಗೆ ಎದುರಾಗಿದ್ದು, ಅದನ್ನು ತತಪ್ಪಿಸಲು ಅರಣ್ಯ ಇಲಾಖೆ ಕಾಳಜಿ ವಹಿಸಿದೆ. ಬೇರುಗಳಿಗೆ ಕ್ರಿಮಿ ಕೀಟಗಳ ಬಾದೆ ತಪ್ಪಿಸಲು ಔಷಧಿ ಹಾಗೂ ಪೌಷ್ಟಿಕಾಂಶಗಳನ್ನು ಸಿಂಪಡಿಸಲಾಗಿದೆ. ಇನ್ನು ಇಲ್ಲಿ ಬೆಳೆಯುವ ಬಾದಾಮಿ ಸಸಿಗಳು ತೀರದ ವಾತಾವರಣ ಬದಲಿಸಿವೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ತೆಂಗಿನ ಮರಗಳನ್ನು ಸ್ಥಳಾಂತರಿಸುವ ಪ್ರಯತ್ನ ನಡೆಸುವದಾಗಿ ಅರಣ್ಯಾಧಿಕಾರಿಗಳು ತಿಳಿಸಿದರು.
Leave a Comment