ಹೊನ್ನಾವರ:
ಖ್ಯಾತ ಯಕ್ಷಗಾನ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭ, ಹಮ್ಮಿಣಿ ಅರ್ಪಣೆ ಹಾಗೂ ಯಕ್ಷಗಾನ ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲಿನಡೆಯಿತು. ಮಂಜುನಾಥ ಭಂಡಾರಿ ದಂಪತಿಗೆ ಸನ್ಮಾನಿಸಿ 5 ಲಕ್ಷ ರೂ. ಹಮ್ಮಿಣಿಯನ್ನು ಯಕ್ಷಗಾನ ಪ್ರೇಮಿಗಳು ಅರ್ಪಿಸಿದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ ಅವರು ಮಂಜುನಾಥ ಭಂಡಾರಿಯವರಿಗೆ ಅಭಿನಂದಿಸಿ ಮಾತನಾಡಿ, `ಮಂಜುನಾಥ ಭಂಡಾರಿ ಅವರು ಅದ್ಬುತ ಮದ್ದಲೆಗಾರರಾಗಿ ಹೆಸರಾದವರು, ಅಲ್ಲದೇ ಮೂರ್ತಿ ಶಿಲ್ಪದಲ್ಲಿಯೂ ಸಿದ್ದಹಸ್ತರು. ಅವರಿಗೆ ಅಭಿನಂದಿಸಿ ಆರ್ಥಿಕ ಶಕ್ತಿಯನ್ನು ತುಂಬುವುದರ ಮೂಲಕ ಅಭಿಮಾನಿಗಳು ಕಲಾವಿದನಲ್ಲಿ ಆತ್ಮಬಲವನ್ನು ಹೆಚ್ಚಿಸಿದ್ದಾರೆ. ಎಲ್ಲಾ ಅಭಿಮಾನಿಗಳೂ ಅಭಿನಂದನಾರ್ಹರು. ಕಲಾವಿದರಿಗೆ ಅಭಿಮಾನಿಗಳೇ ದೇವರು ಎಂಬ ಮಾತು ಎಲ್ಲಾ ಕಾಲಕ್ಕೂ ಸತ್ಯವಾಗಿದೆ. ಮದ್ದಲೆ ಬಾರಿಸುವ ಕೈಗಳಿಗೆ ದೇವರು ಶಕ್ತಿ ನೀಡಿ ಕಲಾ ಸೇವೆಗೆ ಅವಕಾಶ ಸಿಗುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶರಾವ್ ಮಾತನಾಡಿ, ಮಂಜುನಾಥ ಭಂಡಾರಿ ಅವರ ಕುಟುಂಬ ಯಕ್ಷಗಾನ ಕ್ಷೇತ್ರದ ಜೊತೆಗೆ ಬಿಡಿಸಲಾರದ ಬಾಂಧವ್ಯವಿದೆ. ಅವರು ಆರೋಗ್ಯಪೂರ್ಣವಾಗಿ ಮತ್ತೆ ಯಕ್ಷಗಾನ ಸೇವೆಯಲ್ಲಿ ತೊಡಗುವಂತಾಗಲಿ ಎಂದು ಹಾರೈಸಿದರು.
ಉದ್ಯಮಿ ಎನ್.ಆರ್.ಹೆಗಡೆ ರಾಘೋಣ ಮಾತನಾಡಿ, ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸವಾಗಬೇಕು. ಕಲಾಭಿಮಾನಿಗಳು ಸಹಕಾರ ನೀಡಬೇಕು ಎಂದು ಹೇಳಿದರು.
ವಿಠ್ಠಲ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲಕೋಡ ಮಂಜುನಾಥ ಭಂಡಾರಿ ಅವರಿಗೆ 5 ಲಕ್ಷ ರೂ. ಹಮ್ಮಿಣಿ ನೀಡಲು ಸಂಕಲ್ಪಿಸಲಾಗಿತ್ತು. ಕಲಾಭಿಮಾನಿಗಳು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾರೆ. 5 ಲಕ್ಷಕ್ಕೂ ಮಿಕ್ಕಿದ ಹಣವನ್ನು ಅಶಕ್ತ ಯಕ್ಷಗಾನ ಕಲಾವಿದರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಯಕ್ಷಗಾನ ಪ್ರೋತ್ಸಾಹಕ ಶ್ರೀನಿವಾಸ ಪೈ, ಕರ್ಕಿ ಗ್ರಾ.ಪಂ.ಅಧ್ಯಕ್ಷ ಶ್ರೀಕಾಂತ ಮೊಗೇರ, ಡಾ. ಬಾಲಚಂದ್ರ ಮೇಸ್ತ, ನಾಗರಾಜ ಜೋಶಿ, ರಾಜು ಭಂಡಾರಿ, ಚಂದನ ಪ್ರಭು, ಸುಭಾಸ ಭಂಡಾರಿ, ಯಕ್ಷಗಾನ ಕಲಾವಿದ ಮಂಜುನಾಥ ಭಂಡಾರಿ, ಗಣೇಶ ಭಂಡಾರಿ ಇತರರಿದ್ದರು.
ಅತಿಥಿ ಕಲಾವಿದರ ಕೂಡುವಿಕೆಯಲ್ಲಿ `ಲವಕುಶ’ ಮತ್ತು ಭದ್ರಸೇನ ಯಕ್ಷಗಾನ ಕಾರ್ಯಕ್ರಮ ಜನಮನ ರಂಜಿಸಿತು.
Leave a Comment