ಹೊನ್ನಾವರ:
ಟಾಟಾ ಎಸ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಮಾಗೋಡದ ದಾಸ್ಗೋಡದಲ್ಲಿ ನಡೆದಿದೆ.
ಮಾಗೋಡ ನಿವಾಸಿಗಳಾದ ನರಸಿಂಹ ವೆಂಕಪ್ಪ ನಾಯ್ಕ, ಸುಹೇಲ್ ಫಾರುಕ್ ಸಾಬ್ ಹಾಗೂ ವಾಹನ ಚಾಲಕ ಜಾಪರ್ ಸಾದೀಕ್ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಲು ಯತ್ನಿಸಿದ ಆರೋಪಿಗಳು. ಈ ಮೂವರು ಶನಿವಾರ ರಾತ್ರಿ ತಮ್ಮ ಟಾಟಾ ಎಸ್ ವಾಹನದಲ್ಲಿ ಹಿಂಸಾತ್ಮಕವಾಗಿ ದನಗಳನ್ನು ತುಂಬಿ, ಮೇವು ಮತ್ತು ನೀರಿನ ವ್ಯವಸ್ಥೆ ಇಲ್ಲದೇ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಖಚಿತ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಪಿಎಸ್ಐ ಆನಂದಮೂರ್ತಿ, ಎಎಸ್ಐ ಗಣೇಶ ನಾಯ್ಕ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಮೂವರು ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನದಲ್ಲಿ ತುಂಬಿದ್ದ ಮೂರು ಎತ್ತುಗಳನ್ನು ರಕ್ಷಣೆ ಮಾಡಿ ಕುಮಟಾದ ಹೊಸಾಡ ಗೋ ಶಾಲೆಗೆ ರವಾನೆ ಮಾಡಲಾಗಿದೆ. ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment