ಹೊನ್ನಾವರ:
ತಾಲೂಕಿನ ಕರ್ಕಿ ತೊಪ್ಪಲಕೆರಿ ರಸ್ತೆ ಸಂಪೂರ್ಣ ಹಾಳಾಗಿದ್ದು ದುರಸ್ಥಿಗೊಳಿಸುವಂತೆ ಆಗ್ರಹಿಸಿ ಅಲ್ಲಿನ ನೂರಾರು ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ತೊಪ್ಪಲಕೇರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ಥಿಮಾಡುವಂತೆ ಸಾರ್ವಜನಿಕರು ಪ್ರತಿಭಟನೆಗಿಳಿದರು. ರಸ್ತೆ ಮಧ್ಯೆ ಕಲ್ಲು ಹಾಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ತಹಸೀಲ್ದಾರ್ ವಿ.ಆರ್.ಗೌಡ, ಪಿಎಸ್ಐ ಆನಂದಮೂರ್ತಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲುಗಳನ್ನು ಸ್ವೀಕರಿಸಿದರು. ತಹಸೀಲ್ದಾರ್ ವಿ.ಆರ್.ಗೌಡ ಮಾತನಾಡಿ ಗ್ರಾ.ಪಂ ನಿಂದ ರಸ್ತೆಯ ತಗ್ಗು ದಿಣ್ಣೆಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಸಾರ್ವಜನಿಕರು ಪ್ರತಿಭಟನೆ ಹಿಂಪಡೆದರು.
ಕರ್ಕಿ ರಾಷ್ಟ್ರೀಯ ಹೆದ್ದಾರಿ (66)ರ ತೊಪ್ಪಲಕೇರಿ, ಮೇಸ್ತಕೇರಿ ಮೂಲಕ ತೊಪ್ಪಲಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೂಡುವ ರಸ್ತೆ ಕಳೆದ 20 ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು, ಜನರು ಪರದಾಡುವಂತಾಗಿದೆ. ತೊಪ್ಪಲಕೇರಿ ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಈ ಭಾಗದ ಜನಸಾಮಾನ್ಯರು ಇದೇ ರಸ್ತೆಯನ್ನೇ ಅವಲಂಬಿಸಿದ್ದಾರೆ. ಬೇರೆ ರಸ್ತೆಗೆ ಪರ್ಯಾಯ ವ್ಯವಸ್ಥೆಯೂ ಇಲ್ಲ. ದಿನನಿತ್ಯ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹೊಂಡದಲ್ಲಿ ನಿಂತಿರುವ ಕೆಸರು ನೀರಿನಲ್ಲಿ ಹಾದು ಹೋಗಬೇಕಾಗಿದೆ. ರಸ್ತೆಯುದ್ದಕ್ಕೂ ಹೊಂಡಮಯವಾಗಿದೆ. ಜಲ್ಲಿ, ಕಲ್ಲುಗಳು ಹಾಸಿ ಬಿದ್ದಿರುವುದರಿಂದ ಜನರಿಗೆ ತೀರಾ ತೊಂದರೆಯಾಗಿದೆ. ಹೆದ್ದಾರಿಯಿಂದ ಸುಮಾರು 40 ಮೀಟರ್ ವರೆಗಿನ ರಸ್ತೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೊಮ್ಮೆ ಭೇಟಿ ನೀಡಿ, ಪರಿಶೀಲಿಸಿ ರಸ್ತೆ ದುರಸ್ಥಿ ಬಗ್ಗೆ ಚರ್ಚಿಸಿ ರಸ್ತೆ ದುರಸ್ಥಿಗೆ ಮುಂದಾಗಬೇಕು ಎಂದು ಅಲ್ಲಿನ ಸ್ಥಳೀಯರಾದ ತಾ.ಪಂ ಸದಸ್ಯ ತುಕಾರಾಮ ನಾಯ್ಕ, ರವಿ ನಾಯ್ಕ, ಅಜೀತ ಮೇಸ್ತ, ಅಶೋಕ ಮೇಸ್ತ, ಮಂಜು ನಾಯ್ಕ, ಮಾಬ್ಲೇಶ್ವರ ಮೇಸ್ತ, ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ ಇತರರು ಆಗ್ರಹಿಸಿದ್ದಾರೆ.
Leave a Comment