ದಾಂಡೇಲಿ:
ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿರುವ ನಿವೃತ್ತ ಡಿ.ವೈ.ಎಸ್.ಪಿ ಜಿ.ಆರ್. ಪಾಟೀಲರು ಪಕ್ಷ ಸಂಘಟನೆಯನ್ನೂ ಮಾಡದೇ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಹಳಿಯಾಳ-ದಾಂಡೇಲಿ-ಜೋಯಿಡಾದ ಭಾ.ಜ.ಪ ಘಟಕಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಮತ್ತು ಮುಖಂಡರ ವಿಶ್ವಾಸವನ್ನೂ ಪಡೆಯದೇ ಕ್ಷೇತ್ರದಲ್ಲಿ ಸಂಚರಿಸುತ್ತ, ತಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತ ಗೊಂದಲ ನಿರ್ಮಿಸುತ್ತಿರುವುದು ಸರಿಯಲ್ಲ ಎಂದು ದಾಂಡೇಲಿ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ ಎಂದಿದ್ದಾರೆ.
ದಾಂಡೇಲಿಯಲ್ಲಿ ಬುಧವಾರ ಹಳಿಯಾಳ-ದಾಂಡೇಲಿ-ಜೋಯಿಡಾ ಬಾ.ಜ.ಪ ಘಟಕಗಳು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಇತ್ತೀಚೆಗೆ ಬಾ.ಜ.ಪ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಗಣೇಶಗುಡಿಯ ರೆಸಾರ್ಟನಲ್ಲಿ ವಾಸ್ತವ್ಯವಿದ್ದ ಸಂದರ್ಭದಲ್ಲಿ ನಾವು ಬೇಟಿ ಮಾಡಿ ಮಾತನಾಡಿದ್ದೆವು. ಆಗ ಅವರು ಈ ಕ್ಷೇತ್ರದ ಬಗ್ಗೆ ಸುನೀಲ ಹೆಗಡೆ ಹತ್ತಿರ ಮಾತಾಡಿದ್ದೇನೆ. ಜಿ.ಆರ್. ಪಾಟೀಲ ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡಬೇಕು. ಚುನಾವಣೆ ನಂತರ ಅವರಿಗೊಂದು ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದ್ದಾರೆ. ಆದ್ದಾಗ್ಯೂ ಜಿ.ಆರ್. ಪಾಟೀಲರು ಕ್ಷೇತ್ರ ಸಂಚಾರ ಮಾಡುತ್ತ ತಾನೇ ಅಭ್ಯರ್ಥಿಯಾಗುವುದು ನಿಶ್ಚಿತ ಎಂದು ಎಂದು ಜನರ ಮುಂದೆ ಹೇಳುತ್ತ ಗೊಂದಲ ಮೂಡಿಸುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಹಳಿಯಾಳದ ಬಾ.ಜ.ಪ ಅಧ್ಯಕ್ಷ ಶಿವಾಜಿ ನರಸಾನಿ ಮಾತನಾಡಿ ಜಿ.ಆರ್. ಪಾಟೀಲ ನಿವೃತ್ತ ಪೋಲಿಸ್ ಅಧಿಕಾರಿಯಾಗಿ ಧಾರವಾಢದಲ್ಲಿ ವಾಸ್ತವ್ಯವಿದ್ದವರು. ಇದೀಗ ಬಿ.ಜೆ.ಪಿ ಸೇರ್ಪಡೆಯಾಗಿದ್ದಾರೆ. ಆದರೆ ಮಾಜಿ ಶಾಸಕ ಸುನೀಲ ಹೆಗಡೆಯವರು ಭಾ.ಜ.ಪ ಸೇರ್ಪಡೆಯಾದಾಗಿನಿಂದ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ. ಎಲ್ಲಿಯೂ ಅವರು ತಾನೇ ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲ. ಬಿ.ಜೆ.ಪಿ ಸಿದ್ಧಾಂತದಂತೆ ಅವರು ನಡೆಯುತ್ತಿದ್ದಾರೆ. ಸುನೀಲ ಹೆಗಡೆಯವರು ಬಿ.ಜೆ.ಪಿ ಸೇರಿದಾಗಿನಿಂದ ಗ್ರಾ.ಪಂ, ತಾ.ಪಂ, ಎ.ಪಿ.ಎಮ್.ಸಿ ಸೇರಿದಂತೆ ಹಲವು ಚುನಾವಣೆಗಳಲ್ಲಿ ಮಹತ್ವದ ಗೆಲುವು ಸಾಧಿಸಿದ್ದೇವೆ. ಜಾತಿಯ ಹೆಸರಲ್ಲಿ ರಾಜಕಾರಣ ನಡೆಸುವುದು ಸರಿಯಲ್ಲ. ಅದು ನಮ್ಮ ಕ್ಷೇತ್ರದಲ್ಲಿ ನಡೆಯುವುದೂ ಇಲ್ಲ. ಅಷ್ಟೇ ಅಲ್ಲ ಜಿ.ಆರ್. ಪಾಟೀಲ ಪಕ್ಷ ಸೇರುವ ಮುನ್ನವಾಗಲಿ, ಅಥವಾ ಪಕ್ಷ ಸೇರಿದ ನಂತರವಾಗಲಿ ನಮ್ಮನ್ನು ವಿಶ್ವಾಸಕ್ಕೆ ಪಡೆದಿಲ್ಲ ಎಂದರು.
ಜೋಯಿಡಾ ತಾಲೂಕಾ ಭಾ.ಜ.ಪ ಪ್ರಧಾನ ಕಾರ್ಯದರ್ಶಿ ಸಂತೋಷ್ ರೇಡ್ಕರ ಮಾತನಾಡಿ ಸುನೀಲ ಹೆಗಡೆ ಬಿ.ಜೆ.ಪಿ ಸೇರಿದ ನಂತರದಲ್ಲಿ ಜೋಯಿಡಾದಲ್ಲಿ ಬಾ.ಜ.ಪ ಹೆಚ್ಚು ಬಲಗೊಂಡಿದೆ. ಗ್ರಾ.ಪಂ. ತಾ.ಪಂ ಗಳಲ್ಲಿ ಸದಸ್ಯರು ಆರಿಸಿ ಬಂದಿದ್ದಾರೆ. ಇತ್ತೀಚೆಗೆ ನಡೆದ ಜಿ.ಪಂ ಉಪ ಚುನಾವಣೆಯಲ್ಲಿಯೂ ಬಾ.ಜ.ಪ ದಾಖಲೆಯ ಮತ ಪಡೆದಿದೆ. ಈ ಬಾರಿ ಜೋಯಿಡಾದಲ್ಲಿ ಸುನೀಲ ಹೆಗಡೆಯವರ ಬಗ್ಗೆ ಜನರಿಗೆ ಹೆಚ್ಚಿನ ಒಲವಿದೆ. ಹೀಗಿರುವಾಗ ಮೊನ್ನೆ ಪಕ್ಷಕ್ಕೆ ಬಂದವರು ನಮ್ಮ ಮಾಜಿ ಶಾಸಕ ಸುನೀಲ ಹೆಗಡೆಯವರನ್ನಾಗಲೀ, ನಮ್ಮನ್ನಾಗಲೀ ವಿಶ್ವಾಸಕ್ಕೆ ಪಡೆಯದೇ ಕೆಲಸ ಮಾಡುತ್ತಿರುವುದನ್ನು ನಾವು ವಿರೋದಿಸುತ್ತೇವೆಂದರು.
ಭಾಜಪ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ರಫಿಕ್ ಹುದ್ದಾರ ಮಾತನಾಡಿ ಸುನೀಲ ಹೆಗಡೆಯವರು ಬಿ.ಜೆ.ಪಿ ಸೇರ್ಪಡೆಯಾಗುತ್ತಿದ್ದಂತೆಯೇ ನಮ್ಮಂತಹ ಹಲವರು ಬಿ.ಜೆ.ಪಿ ಸೇರ್ಪಡೆಯಾಗಿದ್ದಾರೆ. ನಮಗೆ ಸುನೀಲ ಹೆಗಡೆಯವರ ನೇತೃತ್ವವೇ ಬೇಕು. ಮುಂದಿನ ದಿನಗಳಲ್ಲಿ ದಾಂಡೇಲಿಯಲ್ಲಿ ಒಂದು ಬೃಹತ್ ಸಭೆ ನಡೆಸಿ ಬಾ.ಜ.ಪ ಅಲ್ಪಸಂಖ್ಯಾತ ವಿಭಾಗದ ರಾಜ್ಯಾದ್ಯಕ್ಷರ ಸಮ್ಮುಖದಲ್ಲಿ, ಸುನೀಲ ಹೆಗಡೆಯವರ ನೇತೃತ್ವದಲ್ಲಿ ಸಾವಿರಾರು ಅಲ್ಪಸಂಖ್ಯಾತರು ಬಿ.ಜೆ.ಪಿ ಸೇರ್ಪಡೆಗೊಳ್ಳುವವರಿದ್ದಾರೆ. ಹೀಗಿರುವಾಗ ಬೇರೆ ಯಾರೂ ಸಹ ಅನಗತ್ಯವಾಗಿ ಗೊಂದಲ ನಿರ್ಮಿಸುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಭಾ.ಜ.ಪ ದಾಂಡೇಲಿ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌಹಾಣ, ಉಪಾಧ್ಯಕ್ಷ ವಿಷ್ಣು ವಾಜ್ವೆ, ಹಳಿಯಾಳ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಎಮ್. ಪಾಟೀಲ, ದಾಂಡೇಲಿ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ರಿಯಾಜ ಖಾನ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಗುರು ಮಠಪತಿ, ಪ.ಜಾತಿ ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ್, ಹಳಿಯಾಳದ ಶಂಕರ ಗಳಗಿ, ಇಲಿಯಾಸ್, ವಾಸುದೇವ ಪೂಜಾರಿ, ಬೀಮರಾವ ಪಾಟೀಲ, ಭೀಮಶಿ ಬಾದುರ್ಲಿ ಮುಂತಾದವರಿದ್ದರು.
Leave a Comment