ಕಾರವಾರ:
ಶತಮಾನದ ಇತಿಹಾಸ ಹೊಂದಿರುವ ಅಂಕೋಲಾದ ಹಿಲ್ಲೂರಬೈಲ್ ಶಾಲೆಯಲ್ಲಿ ಶಿಕ್ಷಕರಿದ್ದಾರೆ. ಅಡುಗೆಯವರಿದ್ದಾರೆ. ಆದರೆ, ಮಕ್ಕಳೇ ಇಲ್ಲ!
ಶಾಲೆ ಆರಂಭವಾಗಿ ತಿಂಗಳು ಕಳೆಯುತ್ತ ಬಂದರೂ ಈ ಶಾಲೆಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಮಕ್ಕಳು ದಾಖಲಾಗಿಲ್ಲ ಎಂದು ಶಾಲೆಯನ್ನು ಮುಚ್ಚುವಂತೆಯೂ ಇಲ್ಲ. ಕಾರಣ, ಬರುವ ವರ್ಷ ನಾಲ್ಕು ಮಕ್ಕಳು ಈ ಶಾಲೆಯನ್ನು ನಂಬಿದ್ದು, ಪ್ರಸಕ್ತ ಸಾಲಿನಲ್ಲಿ ಶಾಲೆಗೆ ಬಾಗಿಲು ಹಾಕಿದರೆ ಮುಂದಿನ ವರ್ಷದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಸದ್ಯ ಶಿಕ್ಷಕರು ಹಾಗೂ ಅಡುಗೆಯವರು ನಿತ್ಯ ಸುಮ್ಮನೆ ಶಾಲೆಗೆ ಬಂದು ಹೋಗುವಂತಾಗಿದೆ.
ಅಂಕೋಲಾ ತಾಲೂಕಿನಿಂದ 45ಕಿ.ಮೀ ದೂರ ಇರುವ ಹಿಲ್ಲೂರಬೈಲ ಹಿಂದುಳಿದ ಪ್ರದೇಶವಾಗಿದೆ. ಸರ್ಕಾರ ಇಲ್ಲಿ ಕಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದೆ. ಬರುವ ವರ್ಷ ಶತಮಾನೋತ್ಸವ ನಡೆಸುವ ಮಾತುಕತೆಯೂ ನಡೆಯುತ್ತಿದೆ. ಆದರೆ, ಈ ಶಾಲೆಯ ವೈಭವಗಳನ್ನು ಕಣ್ತುಂಬಿಕೊಳ್ಳಲು ಮಕ್ಕಳಿಲ್ಲ. ಊರಿನಲ್ಲಿರುವ ಇಬ್ಬರು ಮಕ್ಕಳು ಬೇರೆ ಶಾಲೆಯಲ್ಲಿ ತಮ್ಮ ಹೆಸರು ನೊಂದಾಯಿಸಿದ್ದಾರೆ. ಮೂರು ಕಿಮೀ ದೂರ ನಡೆದು ಹೋಗುವ ಅವರು ಹಿಲ್ಲೂರು ಶಾಲೆಯಲ್ಲಿ ಕಲಿಕೆ ಆರಂಭಿಸಿದ್ದಾರೆ. ಹೀಗಾಗಿ ಶತಮಾನದ ಹೊಸ್ತಿನಲ್ಲಿರುವ ಶಾಲೆಯ ಶಿಕ್ಷಕ ಹಾಗೂ ಅಡುಗೆಯವರಿಗೆ ಕೆಲಸವಿಲ್ಲದಂತಾಗಿದೆ.
ಈ ಶಾಲೆಯಲ್ಲಿ ನಾರಾಯಣ ಹರಿಕಂತ್ರ ಎಂಬಾತರು ಶಿಕ್ಷಕ ಹಾಗೂ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪಾಠ ಹೇಳಿ ಕೊಡುವ ಹುಮ್ಮನಿಸ್ಸಿನಿಂದ ದಿನಾಲು ಶಾಲೆಗೆ ಬರುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಲ್ಲದ ಕಾರಣದಿಂದಾಗಿ ಏಕಾಂಗಿಯಾಗಿರಬೇಕಾಗಿದೆ. ಕಳೆದ ವರ್ಷದ ಈ ಶಾಲೆಯಲ್ಲಿ 3 ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ವಿದ್ಯಾರ್ಥಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ್ದಾರೆ. ಇನ್ನುಳಿದ ಇಬ್ಬರಲ್ಲಿ ಒಂದು ವಿದ್ಯಾರ್ಥಿ ಎಸ್ಡಿಎಂಸಿ ಅಧ್ಯಕ್ಷೆ ಮೂಕಾಂಬೆ ಗೌಡರ ಪುತ್ರರಾಗಿದ್ದು, ಮಕ್ಕಳು ಕಡಿಮೆ ಇರುವ ಕಾರಣ ನಾಗೇಂದ್ರ ಕೂಡ ಈ ಶಾಲೆಯನ್ನು ಒಪ್ಪುತ್ತಿಲ್ಲ. ಇನ್ನೊರ್ವ ವಿದ್ಯಾರ್ಥಿ 2 ನೇ ತರಗತಿಯಲ್ಲಿ ಓದುತ್ತಿರುವ ನಮೃತಾ ಗಣಪತಿ ಗೌಡ ಕೂಡ ಶಾಲೆಗೆ ಬರಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಲ್ಲದಂತಾಗಿದೆ.
ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇರುವಂತೆ ಈ ಶಾಲೆಯಲ್ಲಿಯೂ ಅಡುಗೆಯವರಿದ್ದಾರೆ. ಬಿಸಿಯೂಟಕ್ಕೆ ಬೇಕಾಗುವ ಸಾಮಗ್ರಿಗಳನ್ನು ಸರ್ಕಾರ ಪೂರೈಸುತ್ತಿದೆ. ಆದರೆ, ಅಡುಗೆ ಕೆಲಸದವರು ಅತಂತ್ರರಾಗಿದ್ದಾರೆ. ಇವರು ಪ್ರತಿದಿನ ಶಾಲೆಗೆ ಬಂದು ಸ್ವಚ್ಛತೆ ಮಾಡಿ ಹೋಗುತ್ತಿದ್ದಾರೆ. ಬಿಸಿಯೂಟ ಮಾಡುವ ಹಾಗೂ ಬಡಸುವ ಕೆಲಸ ಇವರ ಕೈ ತಪ್ಪಿದೆ.
******************
1916ರಲ್ಲಿ ವಿದ್ಯಾರ್ಜನೆಯ ಉದ್ದೇಶದಿಂದ ಸಮೀಪದ ಭಟ್ಟರ ಮನೆ ಆವರಣದಲ್ಲಿ ಶಾಲೆ ನಡೆಸಲಾಯಿತು. ನಂತರದ ದಿನಗಳಲ್ಲಿ 6 ದಶಕದ ಹಿಂದೆ ವೆಂಕಟರಮಣ ಸುಬ್ರಾಯ ನಾಯಕ ಎನ್ನುವವವರು ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆಯನ್ನು ಕಟ್ಟಿದರು. ಹಿಲ್ಲೂರಬೈಲನ ಸುತ್ತಮುತ್ತಲಿನ ಅನೇಕ ಹಿರಿಯ ತಲೆಗಳು ಈ ಶಾಲೆಯಲ್ಲಿಯೆ ತಮ್ಮ ವಿದ್ಯಾಬ್ಯಾಸ ಮಾಡಿದರು. ಅವರೆಲ್ಲರೂ ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ, ಈಗ ಶತಮಾನದ ಹೊಸ್ತಿನಲ್ಲಿರುವ ಶಾಲೆ ಅನಾಥವಾಗಿದೆ.
ಇನ್ನು ಶಾಲೆಯಲ್ಲಿ ಒಂದು ವಿದ್ಯಾರ್ಥಿ ಇದ್ದರೂ ಸಹ ಶಾಲೆ ಮುಚ್ಚದಂತೆ ಸರಕಾರದ ಆದೇಶವಿದೆ. ಆದರೆ ಒಂದು ಸಲ ಶಾಲೆ ಮುಚ್ಚಿದಲ್ಲಿ 11 ವಿದ್ಯಾರ್ಥಿಗಳು ದಾಖಲು ಆದ ಮೇಲೆಯೆ ಶಾಲೆ ಪ್ರಾರಂಭ ಮಾಡಬೇಕೆನ್ನುವ ನಿಯಮವಿದೆ. ಆದರೆ ಮುಂದಿನ ವರ್ಷ 4 ವಿದ್ಯಾರ್ಥಿಗಳು ಈ ಶಾಲೆಯಲ್ಲಿ 1 ನೇ ತರಗತಿಯಲ್ಲಿ ವಿದ್ಯಾರ್ಜನೆ ಮಾಡಲಿದ್ದಾರೆ. ಈ ವರ್ಷ ಶಾಲೆ ಮುಚ್ಚಿದರೇ, ಮುಂದಿನ ವರ್ಷ ದಾಖಲಾಗುವ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುತ್ತಾರೆ.
Leave a Comment