ಹೊನ್ನಾವರ :
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ದಿನದಿಂದಲೂ ಬಡವರು, ದೀನ ದಲಿತರು ಮತ್ತು ರೈತಾಪಿ ವರ್ಗದ ಜನರ ಏಳ್ಗೆಗೆ ಸದಾ ಶ್ರಮಿಸುತ್ತಿದ್ದಾರೆ. ಇತ್ತಿಚೆಗೆ ಸಿದ್ದರಾಮಯ್ಯನವರು ರಾಜ್ಯದ ರೈತರ ಸಾಲ ಮನ್ನಾ ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷವು ರೈತರ ಹಿತರಕ್ಷಣೆಗೆ ಸದಾ ಕಂಕಣಬದ್ದವಾಗಿದೆ ಎಂದು ಸಾಬಿತುಪಡಿಸಿದ್ದು, ಈ ಕುರಿತಂತೆ ಹೋನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರು ತುಂಬು ಹೃದಯದ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯದ ರೈತರ ಕೃಷಿ ಸಾಲಮನ್ನಾ ಮಾಡುವುದರ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ರೈತರ ಸಾಲಮನ್ನಾದಿಂದ ಅಪಾರ ಸಂಕಷ್ಟದಲ್ಲಿದ್ದ ರೈತಾಪಿ ವರ್ಗದ ಮುಖದಲ್ಲಿ ನಗು ಕಾಣುವಂತಾಗಿದೆ. ರಾಜ್ಯ ಸರ್ಕಾರವು ರೈತರ ಸಂಕಷ್ಟಕ್ಕೆ ಸ್ವತಃ ಸ್ಪಂದಿಸಿ ಕಾಂಗ್ರೆಸ್ ಪಕ್ಷದ ಹಿರಿಯ-ಕಿರಿಯ ನಾಯಕರ ಸಲಹೆಯಂತೆ ಕೈಗೊಂಡ ಸಾಲಮನ್ನಾ ನಿರ್ಧಾರವನ್ನು ವಿರೋಧ ಪಕ್ಷಗಳು ತಮ್ಮ ಬೆನ್ನು ತಟ್ಟಿಕೊಳ್ಳುತ್ತಿರುವುದು ತೀರಾ ಹಾಸ್ಯಾಸ್ಪದ ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿರೋಧ ಪಕ್ಷವಾದ ಬಿ.ಜೆ.ಪಿ. ರಾಜ್ಯದ ರೈತರ ಸಂಕಷ್ಟದ ಬಗ್ಗೆ ನಿಜವಾದ ಕಳಕಳಿಯಿದ್ದರೆ ಕೇಂದ್ರದ ಮೋದಿ ಸರಕಾರದ ಮೇಲೆ ಪ್ರಭಾವ ಬೀರಿ ರಾಜ್ಯದ ರೈತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಕೃಷಿ ಸಾಲವನ್ನು ತಕ್ಷಣ ಮನ್ನಾ ಮಾಡಿಸುವ ಪ್ರಯತ್ನ ನಡೆಸಲಿ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ.
Leave a Comment