ದಾಂಡೇಲಿ : ನಗರದ ಕರ್ನಾಟಕ ಸಂಘದ ಪಂಚಗಾನ ಸಭಾಭವನದಲ್ಲಿ ದಾಂಡೇಲಿ ತಾಲೂಕು ರಚನಾ ಸಮಿತಿಯ ಮುಂದುವರಿದ ಭಾಗವಾಗಿ ರಚಿಸಲಾದ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಉದ್ಘಾಟನಾ ಸಮಾರಂಭವನ್ನು ನಡೆಸಲು ಅವಕಾಶ ನೀಡದಿರುವುದನ್ನು ಖಂಡಿಸಿ ಶುಕ್ರವಾರ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ಪ್ರತಿಭಟನೆಯನ್ನು ಹಮ್ಮಿಕೊಂಡಿತು.
ಈ ಸಂಧರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರದ ಹಿರಿಯ ವಕೀಲ ಹಾಗೂ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಅಜೀತ ನಾಯಕ ಅವರು ದಾಂಡೇಲಿ ಜನತೆಯ ತನು, ಮನ, ಧನ ಹಾಗೂ ದಾನಿಗಳ ನೆರವಿನಿಂದ ನಿರ್ಮಾಣಗೊಂಡ ಕರ್ನಾಟಕ ಸಂಘದ ಪಂಚಗಾನ ಸಭಾಭವನದಲ್ಲಿ ದಾಂಡೇಲಿಯ ಪುರೋ ಅಭಿವೃದ್ಧಿಗಾಗಿ ರೂಪುಗೊಂಡ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡದಿರುವುದು ಖಂಡನೀಯ. ನಿಯಾಮವಳಿಯಂತೆ ಕಾರ್ಯಕ್ರಮ ನಡೆಸಲು ಅವಕಾಶ ನೀಡುವಂತೆ ಲಿಖಿತ ಮನವಿ ನೀಡಿ ವಿನಂತಿಸಿದರೂ ಮನವಿಯನ್ನು ಸಾರಾಸಗಟವಾಗಿ ತಳ್ಳಿ ಹಾಕಿರುವುದು ಖೇಧಕರ. ಈ ಬಗ್ಗೆ ಒಂದು ತಿಂಗಳೊಳಗೆ ಕರ್ನಾಟಕ ಸಂಘದ ಅಧ್ಯಕ್ಷ ಡಾ: ಎನ್.ಜಿ.ಬ್ಯಾಕೋಡ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಜಿ.ಗಿರಿರಾಜ ಅವರು ಸ್ಪಷ್ಟನೆ ನೀಡುವುದರ ಜೊತೆಗೆ ರಾಜಿನಾಮೆ ನೀಡಬೇಕು. ಕೂಡಲೆ ಚುನಾವಣೆ ನಡೆಸಿ ಹೊಸ ಪದಾಧಿಕಾರಿಗಳ ಆಯ್ಕೆಯಾಗಬೇಕು. ಒಂದು ವೇಳೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ಸಂಘದ ಪಂಚಗಾನ ಸಭಾಭವನಕ್ಕೆ ಮುತ್ತಿಗೆ ಹಾಕಲಾಗುವುದಾಗಿ ಅಜೀತ ನಾಯಕರವರು ಎಚ್ಚರಿಕೆ ನೀಡಿದ್ದಾರೆ.
ಕಾಗದ ಕಾರ್ಖಾನೆಯ ಸುಪರ್ಧಿಯಲ್ಲಿರುವ ಪಂಚಗಾನ ಸಭಾಭವನ ಯಾರ ಸ್ವಂತ ಆಸ್ತಿಯಲ್ಲ ಬದಲಾಗಿ ಅದು ಸಮಸ್ತ ದಾಂಡೇಲಿಗರ ಆಸ್ತಿಯಾಗಿದೆ. ಕಾಗದ ಕಾರ್ಖಾನೆಯವರು ದಾಂಡೇಲಿಗರ ಸ್ವಾತಂತ್ರವನ್ನು ಕಸಿದುಕೊಳ್ಳುತ್ತಿದ್ದಾರೆ. ಕಾರ್ಖಾನೆಯಿಂದ ನಗರಕ್ಕೆ ಲಾಭಕ್ಕಿಂತ ಹಾನಿಯೆ ಅಧಿಕ. ವಾಯು, ಜಲ ಹಾಗೂ ಶಬ್ದ ಮಾಲಿನ್ಯವನ್ನು ನೀಡುವುದರ ಮೂಲಕ ನಗರದ ಜನತೆಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲು ಕಾರಣವಾಗುತ್ತಿದೆ. ಇತ್ತೀಚೆಗೆ ಕಾಗದ ಕಾರ್ಖಾನೆಯಲ್ಲಿನ ಕಲುಷಿತ ಕುಡಿಯುವ ನೀರು ಪೊರೈಕೆಯಾದ ಹಿನ್ನಲೆಯಲ್ಲಿ ಹಳದಿ ರೋಗ ಉಲ್ಬಣಗೊಂಡಿತ್ತು. ಹಳದಿ ರೋಗಕ್ಕೆ ತುತ್ತಾದ ಕಾರ್ಮಿಕನೊಬ್ಬನು ಮೃತಪಟ್ಟಿದ್ದು, ಆತನ ಕುಟುಂಬಕ್ಕೆ ಕಾರ್ಖಾನೆಯವರು ಏನು ಪರಿಹಾರ ನೀಡಿದ್ದಾರೆ? ಎಂದು ಅಜೀತ ನಾಯಕ ಅವರು ಪ್ರಶ್ನಿಸಿದರು. ಕಾಗದ ಕಾರ್ಖಾನೆಯವರು ತಮ್ಮ ಕಲುಷಿತ ನೀರನ್ನು ಕಾಳಿ ನದಿಗೆ ಬಿಡುತ್ತಿರುವುದರಿಂದ ನಮ್ಮೆಲ್ಲರ ಜೀವನಾಡಿ ಕಾಳಿ ಕಲುಷಿತಗೊಂಡಿದ್ದಾಳೆ. ಕುಡಿಯುವ ನೀರಿನ ಕುರಿತಂತೆ ತಜ್ಞರುಗಳ ತಂಡ ನಗರಕ್ಕೆ ಆಗಮಿಸಿ ವಿವಿದೆಡೆಗಳ ನೀರಿನ ಟ್ಯಾಂಕ್ ಮತ್ತು ಕುಡಿಯುವ ನೀರನ್ನು ಪರೀಕ್ಷಿಸಿದ್ದು, ಇವರುಗಳು ಕಾರ್ಖಾನೆಯಿಂದ ಪೊರೈಕೆಯಾಗುವ ಕುಡಿಯುವ ನೀರು ಯೋಗ್ಯವಲ್ಲ ಎಂದು ವರದಿ ನೀಡಿದ್ದಾರೆ. ಆದರೆ ಈ ಬಗ್ಗೆ ಕಾರ್ಖಾನೆ ಯಾವೊಂದು ಕ್ರಮವನ್ನು ಕೈಗೊಳ್ಳದೆ ನಿಶ್ಚಿಂತೆಯಿರುವುದು ಉತ್ತಮ ಬೆಳವಣಿಗೆಯಲ್ಲ. ಪ್ರಾಧಿಕಾರದ ಪರವಾನಿಗೆಯಿಲ್ಲದೆ ಕಾರ್ಖಾನೆಯನ್ನು ವಿಸ್ತರಣೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಅಜೀತ ನಾಯಕರವರು ಸವಾಲು ಹಾಕಿದರು. ನಗರ ಸಭೆಗೆ ಸಂದಾಯ ಮಾಡಬೇಕಾದ ತೆರಿಗೆ ಹಣವನ್ನು ಸಂದಾಯ ಮಾಡದೇ ಮೋಸ ಮಾಡುತ್ತಿರುವುದಲ್ಲದೆ, ಕಳೆದ ಹದಿನೈದು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂ ಗೊಳಿಸದೇ ಕಾರ್ಮಿಕರನ್ನು ನಿರಂತರವಾಗಿ ಶೋಷಣೆ ಮಾಡುತ್ತಿದೆ ಎಂದು ಕಾರ್ಖಾನೆಯ ಆಡಳಿತ ಮಂಡಳಿಯ ಕ್ರಮವನ್ನು ಅಜೀತ ನಾಯಕರವರು ಕಟುವಾಗಿ ಟೀಕಿಸಿದರು.
ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆ ಯವರು ಮಾತನಾಡಿ ಕರ್ನಾಟಕ ಸಂಘದ ಪಂಚಗಾನ ಸಭಾಭವನದ ಬಗ್ಗೆ ನಡೆದಿರುವ ತಕರಾರಿನ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.
ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ಸಮಿತಿಯ ಮುಖಂಡರುಗಳಾದ ಟಿ.ಎಸ್.ನಾಯ್ಕ, ಬಾಬಣ್ಣ ಶ್ರೀವಾತ್ಸವ, ಶಿವಾನಂದ ಗಗ್ಗರಿ, ಸಿ.ಎಸ್.ಲೋಬೊ, ಪೈರೋಜ್ ಪಿರ್ಜಾದೆ ಅವರೆಲ್ಲರೂ ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರುಗಳಾದ ಅಬ್ದುಲ್ ವಹಾಬ ಬನ್ಸಾರಿ, ಉಮೇಶ ನಾಯ್ಕ, ವಸಂತಕುಮಾರ್ ಮನ್ನೇರಿ, ಬಲವಂತ ಬೊಮ್ಮನಳ್ಳಿ, ಅನೂಪ್ ಸಿಂಗ್, ಗೌರೀಶ ಬಾಬ್ರೇಕರ, ಡಾ: ಜಿ.ವಿ.ಭಟ್, ರಾಜಶ್ರೀ ಬೇಂದ್ರೆ, ಮೀನಾಕ್ಷಿ ಬಡಿಗೇರ, ರೇಣುಕಾ ಬಂದಂ, ಎಸ್.ಎಸ್.ಕುರ್ಡೇಕರ, ಮುಜೀಬಾ ಛಬ್ಬಿ, ಅಶೋಕ ನಾಯ್ಕ, ರವಿ ಚೌವ್ಹಾಣ್ ಮೊದಲಾದವರು ಉಪಸ್ಥಿತರಿದ್ದರು.
ಪಂಚಗಾನ ಸಭಾಭವನದ ಬಗ್ಗೆ ಉಂಟಾದ ಗೊಂದಲವನ್ನು ಪರಿಹರಿಸುವಂತೆ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
Leave a Comment