ಕಾರವಾರ:
ಬೈತಖೋಲ್ ಅಂಚೆ ಕಚೇರಿಯಲ್ಲಿ ಸಾರ್ವಜನಿಕರು ಇರಿಸಿದ್ದ ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದ ಅಂಚೆ ಮಾಸ್ತರನನ್ನು ಪೊಲೀಸರು ಬಂಧಿಸಿದ್ದಾರೆ.
ಕಡವಾಡ ಮೂಲದ ಲಕ್ಷಣ ನಾಯ್ಕ ಬಂದಿತ ಆರೋಪಿ. ಕಳೆದ ಹಲವು ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಹಂಗಾಮಿ ಅಂಚೆ ಮಾಸ್ತರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ ಬೈತಖೋಲ್ ಭಾಗದ ಜನರ ವಿಶ್ವಾಸ ಗಳಿಸಿದ್ದ. ನಯವಾದ ಮಾತುಗಳಿಂದ ಜನರನ್ನು ನಂಬಿಸುತ್ತಿದ್ದ. ಅಂಚೆ ಇಲಾಖೆಯಲ್ಲಿ ವಿವಿಧ ಬಗೆಯ ಖಾತೆ ಹೊಂದಿದ್ದ ಸಾರ್ವಜನಿಕರು ತಮ್ಮ ಖಾತೆಗೆ ಹಣ ಜಮಾ ಮಾಡಿರುವದನ್ನು ಅವರಿಗೆ ಅರಿವಿಲ್ಲದಂತೆ ದುರುಪಯೋಗ ಪಡಿಸಿಕೊಂಡ ಆರೋಪ ಈತನ ಮೇಲಿದೆ. ಈವರೆಗೂ ಅಂಚೆ ಮಾಸ್ತರ್ ಲಪಟಾಯಿಸಿದ ಮೊತ್ತದ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಅಂಚೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಬೈತಖೋಲ್ ಅಂಚೆ ಕಚೇರಿಯಲ್ಲಿ ಕೆಲ ಪಾಸ್ಬುಕ್ ಹಾಗೂ ಇನ್ನಿತರ ದಾಖಲೆಗಳು ದೊರೆತಿದ್ದವು. ಜನರ ಹಣ ದೋಚಿ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಈತನ ವಿರುದ್ದ ಜನ ಪ್ರತಿಭಟನೆ ನಡೆಸಿದ್ದರು. ತಮ್ಮ ಹಣ ಹಿಂತಿರುಗಿಸುವಂತೆ ಅಂಚೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಬಗ್ಗೆ ಪೊಲೀಸ್ ದೂರು ಕೂಡ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
Leave a Comment