ಕಾರವಾರ:
ಇದೇ ಮೊದಲ ಬಾರಿಗೆ ಶೂನ್ಯದರದಲ್ಲಿ ಕೃಷಿಕರ ಅನುಕೂಲಕ್ಕಾಗಿ ಯೋಜನೆ ಕೃಷಿಕರ ವಾಟ್ಸಪ್ ಯೋಜನೆಯನ್ನು ಕೈಗೆತ್ತಿಕೊಂಡಿದೆ.ಕೃಷಿ ಸಮಸ್ಯೆ ಹಾಗೂ ಪರಿಹಾರದೊಂದಿಗೆ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಹೋಬಳಿ ಮಟ್ಟದಲ್ಲಿ ರೈತರ ವಾಟ್ಸಪ್ ಗ್ರೂಪ್ ರಚಿಸುವಂತೆ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ.ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ಸರ್ಕಾರ ಇದಕ್ಕಾಗಿ ಕೋಟಿ ಕೋಟಿ ಹಣ ಸುರಿಯುತ್ತಿದೆ.ಈಗಾಗಲೇ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ವಾಟ್ಸಪ್ ಗ್ರೂಪ್ ರಚನೆ ಮಾಡಲಾಗಿದ್ದು, ಈ ಗುಂಪುಗಳಲ್ಲಿ ಸಹಾಯಕ ಕೃಷಿ ಅಧಿಕಾರಿ ಅಡ್ಮಿನ್ ಆಗಿರುತ್ತಾರೆ. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಸದಸ್ಯರಾಗಿರುತ್ತಾರೆ. ಇವರ ಮೂಲಕ ಪ್ರತಿ ದಿನ ಹವಾಮಾನ ವರದಿ, ಸಲಹೆ, ರೋಗಭಾದೆಯ ಪರಿಹಾರ, ಸರ್ಕಾರಿ ಸೌಲಭ್ಯ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ವಾರಕ್ಕೆ ಮೂರು ಸಂದೇಶ ರವಾನಿಸುವದನ್ನು ಕಡ್ಡಾಯಗೊಳಿಸಲಾಗಿದ್ದು, ಯಾವದೇ ಸದಸ್ಯರಿಂದಲೂ ನಕಾರಾತ್ಮಕ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂಬ ನಿಯಮ ರೂಪಿಸಿದೆ. ವಾಟ್ಸಪ್ ಗ್ರೂಪ್ ರಚನೆ ಹಾಗೂ ಅದರ ವಿವರದ ಕುರಿತು ಪ್ರತಿ ದಿನ ಸಂಜೆ ಹೋಬಳಿ ಮಟ್ಟದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಬೇಕಿದೆ. ಅಧಿಕಾರಿಗಳು ಸಚಿವರಿಗೆ ಈ ಕುರಿತು ಮಾಹಿತಿ ನೀಡಬೇಕಿದೆ. ಇದರೊಂದಿಗೆ ಯಾವ ಯಾವ ಗ್ರೂಪ್ಗಳಲ್ಲಿ ಎಷ್ಟೆಷ್ಟು ರೈತರನ್ನು ಸದಸ್ಯರನ್ನಾಗಿ ಮಾಡಲಾಗಿದೆ ಎನ್ನುವದರ ಬಗ್ಗೆಯೂ ಕೃಷಿ ಇಲಾಖೆ ಪ್ರತಿ ದಿನ ಸಂಜೆ ವರದಿ ಒಪ್ಪಿಸಬೇಕಿದೆ.
ಈ ವಿಷಯವಾಗಿ ಈಗಾಗಲೇ ರಾಜ್ಯದ ಎಲ್ಲಾ ಜಂಟಿ ನಿರ್ದೇಶಕರಿಗೆ ಕರ್ನಾಟಕ ಸರ್ಕಾರ ಆದೇಶಿಸಿದ್ದು, ಇಲಾಖೆಯಿಂದ ನೀಡಲಾಗುವ ಸಂದೇಶ, ವಿಡಿಯೋ, ತಾಂತ್ರಿಕ ಮಾಹಿತಿ ಹಾಗೂ ಪರಿಹಾರೋಪಾಯಗಳ ಬಗ್ಗೆ ತಿಳಿಸಿದ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಪತ್ರ ಬರೆಯಲಾಗಿದೆ. ಗ್ರಾಮ ಪಂಚಾಯತ ಮಟ್ಟದಲ್ಲಿನ ರೈತರು ಕೃಷಿ ಇಲಾಖೆ ಅಧಿಕಾರಿಗಳ ಮೂಲಕ ತಮ್ಮ ವಾಟ್ಸಪ್ ಸಂಖ್ಯೆಯನ್ನು ನೀಡಿ ಗ್ರೂಪ್ನ ಸದಸ್ಯರಾಗಬಹುದಾಗಿದೆ. ಸರ್ಕಾರದಿಂದ ಮಾಡಲ್ಪಟ್ಟ ಅಧಿಕೃತ ವಾಟ್ಸಪ್ ಗ್ರೂಪ್ ಇದಾಗಿರುವದರಿಂದ ಯಾವದೇ ರಾಜಕೀಯ ಹಾಗೂ ವಯಕ್ತಿಕ ಚರ್ಚೆಗಳಿಗೆ ಅವಕಾಶವಿಲ್ಲ. ಈ ಯೋಜನೆಗಾಗಿ ಯಾವದೇ ಹಣ ಬಿಡುಗಡೆ ಮಾಡಿಲ್ಲ. ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಿಲ್ಲ. ಈ ಯೋಜನೆ ಜಾರಿಗೆ ತರಲು ಸರ್ಕಾರಕ್ಕೂ ಯಾವದೇ ವೆಚ್ಚವಿಲ್ಲ. ಹೀಗಿದ್ದರೂ ಲಕ್ಷಾಂತರ ರೈತರಿಗೆ ಇಲಾಖೆಯೊಡನೆ ಬೆರೆಯಲು ಸಚಿವರ ಹೊಸ ಆದೇಶ ಅವಕಾಶ ಮಾಡಿಕೊಟ್ಟಿದೆ. ಈಚೆಗೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿರುವ ಕೃಷಿ ಸಚಿವ ಕೃಷ್ಣ ಭೈರೆಗೌಡ, ರೈತರ ವಾಟ್ಸಪ್ ಸಂಖ್ಯೆ ಸಂಗ್ರಹಿಸಿ ಹೋಬಳಿ ಮಟ್ಟದಲ್ಲಿ ವಾಟ್ಸಪ್ ಗ್ರೂಪ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಕೃಷಿ ಅಧಿಕಾರಿಗಳು ಅದನ್ನು ಅಧಿಕೃತವಾಗಿ ಜಾರಿಗೆ ತಂದಿದ್ದಾರೆ.
Leave a Comment