ಕಾರವಾರ:
ಕುಮಟಾದ ನೆಲ್ಲಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುವ ಆಂಗ್ಲ ಮಾದ್ಯಮದ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೂ ಕನ್ನಡದಲ್ಲಿಯೇ ಪಾಠ ಬೋದನೆ ನಡೆಯುತ್ತಿದೆ. ಇದರಿಂದ ಸಂಕಷ್ಟಕ್ಕಿಡಾದ ವಿದ್ಯಾರ್ಥಿಗಳು ಶಿಕ್ಷಕರ ಒತ್ತಾಯದ ಮೇರೆಗೆ ಅನಿವಾರ್ಯವಾಗಿ ಆಂಗ್ಲ ಮಾದ್ಯಮದಿಂದ ಕನ್ನಡ ಮಾದ್ಯಮ ಶಿಕ್ಷಣ ಪಡೆಯುತ್ತಿದ್ದಾರೆ.
ನೆಲ್ಲಿಕೇರಿ ಪದವಿ ಪೂರ್ವ ಕಾಲೇಜಿಗೆ ಕುಮಟಾದ ಹಲವು ಹಳ್ಳಿಗಳಿಂದ ಮಕ್ಕಳು ಬರುತ್ತಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಇಲ್ಲಿ ಹೆಚ್ಚಿದ್ದು, ಆಂಗ್ಲ ಮಾದ್ಯಮಕ್ಕಾಗಿ ಇವರು ಪ್ರವೇಶ ಪಡೆದಿದ್ದಾರೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ತರಗತಿಗಳು ಇಲ್ಲಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವದರಿಂದ ಎಲ್ಲಾ ವಿಭಾಗಗಳಿಗೂ ಎ ಬಿ ಸಿ ಡಿ ಎಂದು ತರಗತಿಗಳನ್ನು ವಿಭಾಗಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿರುವದರಿಂದ ಎಲ್ಲಾ ವಿಭಾಗಗಳನ್ನು ವಿಭಾಗಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಅರ್ಥಶಾಸ್ತ್ರ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸದ್ಯ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಅರ್ಥಶಾಸ್ತ್ರ ವಿಷಯ ಓದುಗರನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ. 60 ರಷ್ಟು ವಿದ್ಯಾರ್ಥಿಗಳು ಆಂಗ್ಲ ಭಾಷಾ ಪಠ್ಯಕ್ಕಾಗಿ ಹಾತೊರೆಯುತ್ತಿದ್ದರೂ ಅವರಿಗೆ ಒತ್ತಾಯವಾಗಿ ಕನ್ನಡ ಭಾಷೆಯಲ್ಲಿ ಕಲಿಸಲಾಗುತ್ತಿದೆ. ಒಂದು ಗಂಟೆಯ ತರಗತಿ ಅವದಿಯಲ್ಲಿ ಅರ್ದ ಗಂಟೆ ಕನ್ನಡ ಹಾಗೂ ಇನ್ನರ್ದ ಗಂಟೆಗಳ ಕಾಲ ಆಂಗ್ಲ ಮಾದ್ಯಮದಲ್ಲಿ ಬೋದಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲ. ಆಂಗ್ಲ ಮಾದ್ಯಮದಲ್ಲಿಯೇ ಕಲಿಯುವ ಆಸಕ್ತಿ ಇದ್ದವರಿಗೆ ಪುಸ್ತಕ ವಿತರಿಸುವದಾಗಿ ಅದ್ಯಾಪಕರು ತಿಳಿಸಿದ್ದು, ಈಗಾಗಲೇ ವಿದ್ಯಾರ್ಥಿಗಳು ಮಾರುಕಟ್ಟೆಯಿಂದ ಪುಸ್ತಕ ಖರಿದಿಸಿದ ಕಾರಣ ಬೇರೆ ಪುಸ್ತಕದ ಅಗತ್ಯವಿಲ್ಲ. ಸದ್ಯ ಆಂಗ್ಲ ಮಾದ್ಯಮ ಶಿಕ್ಷಣ ಎಂಬುದು ವಿದ್ಯಾರ್ಥಿಗಳಿಗೆ ಇನ್ನಷ್ಟು ದೂರವಾಗಿದ್ದು, ಶಿಕ್ಷಕರ ಒತ್ತಾಯದ ಮೇರೆಗೆ ಆಂಗ್ಲ ಮಾದ್ಯಮ ವಿದ್ಯಾರ್ಥಿಗಳು ಕೂಡ ಕನ್ನಡ ಮಾದ್ಯಮವನ್ನು ಆಯ್ಕೆ ಮಾಡಿಕೊಳ್ಳಲಾರಂಭಿಸಿದ್ದಾರೆ.
******************* ಕೋಟ್
ಕನ್ನಡ ಪ್ರವೇಶ ಪಡೆದವರ ಸಂಖ್ಯೆ ಹೆಚ್ಚಿದ್ದು, ಆಂಗ್ಲಭಾಷೆ ಪ್ರವೇಶ ಪಡೆದವರ ಸಂಖ್ಯೆ ಕಡಿಮೆ ಇದೆ. ತರಗತಿಯಲ್ಲಿ ನಾಲ್ಕೈದು ಜನ ಮಾತ್ರ ಆಂಗ್ಲ ಭಾಷೆ ಪ್ರವೇಶ ಪಡೆದವರಿರುವ ಕಾರಣ ಉಪನ್ಯಾಸಕರು ಹೆಚ್ಚಾಗಿ ಕನ್ನಡದಲ್ಲಿಯೇ ಬೋಧಿಸುತ್ತಿದ್ದರು. ಈ ಬಗ್ಗೆ ದೂರು ಬಂದ ನಂತರ ಒಬ್ಬ ವಿದ್ಯಾರ್ಥಿ ಇದ್ದರೂ ಆಂಗ್ಲ ಹಾಗೂ ಕನ್ನಡ ಎರಡು ಭಾಷೆಯಲ್ಲಿ ಪಾಠ ಮಾಡುವಂತೆ ಸೂಚಿಸಲಾಗಿದೆ.
– ಸತೀಶ ನಾಯ್ಕ, ಪ್ರಾಚಾರ್ಯರು. ನೆಲ್ಲಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು
Leave a Comment