ಹೊನ್ನಾವರ:
ಯುವ ತಲೆಮಾರು ದೊಡ್ಡ ಕನಸನ್ನು ಇಟ್ಟಕೊಂಡು ನಾಗರಿಕ ಸೇವಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಂತಾಗಬೇಕು ಎಂದು ಗೋವಾ ರಾಜ್ಯದ ಡಿಸಿಎಫ್ ದಾಮೋದರ ಎ.ಟಿ. ಹೇಳಿದರು.
ಪಟ್ಟಣದ ಎಸ್ಡಿಎಂ ಕಾಲೇಜಿನಲ್ಲಿ ಜೆಡಿಎನ್ ಅಭಿಮಾನಿ ಬಳಗವು ಹೊನ್ನಾವರದ ಡ್ರೀಮ್ ಟೀಮ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಎಸ್ಡಿಎಂ ಕಾಲೇಜು ಇವುಗಳ ಸಹಯೋಗದಲ್ಲಿ `ನಾಗರಿಕ ಸೇವೆ ಗಗನ ಕುಸುಮವಲ್ಲ’ ಎಂಬ ಶೀರ್ಷಿಕೆಯಡಿ ನಾಗರಿಕ ಸೇವಾ ಆಕಾಂಕ್ಷಿಗಳಿಗಾಗಿ ಶನಿವಾರ ಏರ್ಪಡಿಸಲಾದ ಸಮಾಲೋಚನೆ, ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೀಡುತ್ತಿರುವ ಕರ್ನಾಟಕ ರಾಜ್ಯದಲ್ಲಿ ನಾಗರಿಕ ಸೇವಾ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಯನ್ನು ಕಾಣಬೇಕು. ಇದಕ್ಕೆ ಸೂಕ್ತ ವೇದಿಕೆಯೊದಗಿಸುತ್ತಿರುವ ಜೆಡಿಎನ್ ಅಭಿಮಾನಿ ಬಳಗ ಸಂಚಲನ ಮೂಡಿಸುವ ಕಾರ್ಯ ಮಾಡುತ್ತಿದೆ. ಭಟ್ಕಳದಲ್ಲಿ ಸೆ. 24 ರಂದು ಬೃಹತ್ ಕಾರ್ಯಾಗಾರ ನಡೆಯುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ರೋಲ್ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಸುಮಾರು 50 ಕ್ಕೂ ಹೆಚ್ಚು ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಅಧಿಕಾರಿಗಳು ಪಾಲ್ಗೊಂಡು ಮಾರ್ಗದರ್ಶನ ನೀಡಲಿದ್ದಾರೆ. ವಿದ್ಯಾರ್ಥಿಗಳು ಬಡತನವನ್ನು ಬದಿಗೊತ್ತಿ ಆತ್ಮವಿಶ್ವಾಸದಿಂದ ದೊಡ್ಡ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದರು.
ಕೇಂದ್ರ ಆದಾಯ ತೆರಿಗೆ ಉಪ ಆಯುಕ್ತೆ ಪರಿಣತಿ ಸುನಾಕರ್ ಮಾತನಾಡಿ ಶೃದ್ಧೆ ಮತ್ತು ಆತ್ಮವಿಶ್ವಾಸದಿಂದ ಪಾಲ್ಗೊಳ್ಳುವಿಕೆಯು ಉನ್ನತ ಹುದ್ದೆಯನ್ನು ದೊರಕಿಸಿಕೊಡುವುದು. ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕೇಂದ್ರ ಎಕ್ಸೈಜ್ ಉಪ ಆಯುಕ್ತ ರಾಘವೇಂದ್ರ ರಾಯ್ಕರ್ ಮಾತನಾಡಿ ವ್ಯಕ್ತಿಗೆ ವಿದ್ಯೆ ಅಲಂಕರಿಸಲು ಯೋಗ್ಯತೆ ಇದೆ ಎನ್ನುವ ಬಗ್ಗೆ ಗಂಭೀರವಾಗಿ 3 ಹಂತದಲ್ಲಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದ್ದೇವೆ. ಎಲ್ಲರಿಗೂ ನ್ಯಾಯ ಒದಗಿಸುವುದೇ ನಾಗರೀಕ ಸೇವೆಯಾಗಿದೆ ಎಂದರು.
ಎಸ್ಡಿಎಂ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಹೆಗಡೆ ಮಾತನಾಡಿ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕನಸನ್ನು ಬಿತ್ತಿ ಯಶಸ್ಸಿನ ದಡ ಸೇರಿಸುವ ಲಕ್ಷಣಗಳು ಕಾಣುತ್ತಿದೆ ಎಂದ ಅವರು ತಾಲೂಕಿನ ವಿದ್ಯಾರ್ಥಿಗಳಿಗೆ ಇಂಥ ಸೇವೆಯನ್ನು ಒದಗಿಸುತ್ತಿರುವದಕ್ಕೆ ಕಾಲೇಜಿನ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.
ಸಿಜಿಎಸ್ಟಿ ಉಪ ಆಯುಕ್ತ ರಾಜೀವ ಕಿತ್ತೂರು, ಬೆಂಗಳೂರಿನ ಆದಾಯ ತೆರಿಗೆ ಉಪ ಆಯುಕ್ತ ಸೌರಭ ನಾಯಕ, ದೆಹಲಿಯ ಕಸ್ಟಮ್ಸ್ ಉಪ ಆಯುಕ್ತ ಮನೀಷ್ ಚೌಧರಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಉನ್ನತ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ಸಂವಾದ ನಡೆಸಿದರು.
ಕಾರ್ಯಾಗಾರವನ್ನು ಮಾಜಿ ಶಾಸಕ ಮತ್ತು ಎಂಪಿಇ ಸೋಸೈಟಿಯ ಅಧ್ಯಕ್ಷ ಡಾ. ಎಂ.ಪಿ. ಕರ್ಕಿ ಉದ್ಘಾಟಿಸಿದರು. ಜೆ.ಡಿ.ನಾಯ್ಕ ಅಭಿಮಾನಿ ಬಳಗದ ಅಧ್ಯಕ್ಷ ನಾಗೇಶ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ ಕ್ಲಬ್ ಅಧ್ಯಕ್ಷ ಡಿ.ಡಿ.ಮಡಿವಾಳ ಉಪಸ್ಥಿತರಿದ್ದರು. ಉದ್ಯಮಿ ಜಿ.ಜಿ. ಶಂಕರ ಪ್ರಾಸ್ತಾವಿಕ ಮಾತನಾಡಿದರು.ಸತ್ಯ ಜಾವಗಲ್ ಸ್ವಾಗತಿಸಿದರು. ರಾಜು ಮಾಳಗಿಮನೆ ವಂದಿಸಿದರು, ಪ್ರಶಾಂತ ಮೂಡಲಮನೆ ನಿರ್ವಹಿಸಿದರು.
Leave a Comment